ಅಂಬಾನಿ ಕುಟುಂಬದ ಸಮಾರಂಭಕ್ಕಾಗಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ: ಮಾಹಿತಿ ಇಲ್ಲವೆಂದ ಡಿಜಿಸಿಎ
ನವದೆಹಲಿ, ಮೇ 20: ಮುಕೇಶ್ ಅಂಬಾನಿ ಅವರ ಮಗನ ಮದುವೆ ಪೂರ್ವ ಕಾರ್ಯಕ್ರಮಗಳ ನಿಮಿತ್ತ ಗುಜರಾತ್ನ ಜಾಮ್ನಗರದ ದೇಶೀಯ ವಿಮಾನ ನಿಲ್ದಾಣಕ್ಕೆ 10 ದಿನಗಳ ಕಾಲ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರ (ಡಿಜಿಸಿಎ) ಕಚೇರಿ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ, ಜಾಮ್ನಗರದ ದೇಶೀಯ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಿ ವಿದೇಶಿ ವಿಮಾನಗಳ ಲ್ಯಾಂಡಿಗ್ ಮತ್ತು ಟೇಕ್ ಆಫ್ಗೆ ಅನುವು ಮಾಡಿಕೊಡಲಾಗಿತ್ತು. ಭಾರತೀಯ ವಾಯುಪಡೆಯೇ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ವಿಮಾನಗಳ ಹಾರಾಟಕ್ಕೆ ಬೇಕಾದ ವ್ಯವಸ್ಥೆಗಳನ್ನು ಒದಗಿಸಿತ್ತು. ಪರಿಣಾಮ ಒಂದು ದಿನಕ್ಕೆ ಗರಿಷ್ಠ 5 ದೇಶಿಯ ವಿಮಾನಗಳ ಹಾರಾಟದ ಸಾಮಾರ್ಥ್ಯ ಹೊಂದಿರುವ ನಿಲ್ದಾಣದಿಂದ ಮಾರ್ಚ್ 1 ರಂದು 70 ವಿಮಾನಗಳು ಹಾರಾಟ ನಡೆಸಿವೆ ಎಂದು ತಿಳಿದು ಬಂದಿದೆ.
ಮುಕೇಶ್ ಅಂಬಾನಿ ಅವರ ಪುತ್ರನ ವಿವಾಹ ಪೂರ್ವ ಸಮಾರಂಭಕ್ಕೆ ಅತಿಥಿಗಳ ಆಗಮನಕ್ಕೆ ಅನುಕೂಲವಾಗುವಂತೆ ಡಿಜಿಸಿಎ ವಿಮಾನ ನಿಲ್ದಾಣವನ್ನು ಯಾವ ಆಧಾರದ ಮೇಲೆ ಮೇಲ್ದರ್ಜೆಗೇರಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಎಂಬವರು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಮಾಹಿತಿ ಕೋರಿದ್ದರು. ಆದರೆ, ಈ ಬಗ್ಗೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಬಳಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಡಿಜಿಸಿಎಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅರ್ಜಿದಾರ ಟಿ ನರಸಿಂಹ ಮೂರ್ತಿ, “ಡಿಜಿಸಿಎಯ ಪ್ರತಿಕ್ರಿಯೆ ಕಳವಳ ಉಂಟು ಮಾಡಿದೆ. ಪಾಕಿಸ್ತಾನದ ಗಡಿಯಲ್ಲಿ ಪ್ರಾಥಮಿಕವಾಗಿ ಮಿಲಿಟರಿ ಏರ್ಫೀಲ್ಡ್ ಆಗಿರುವ ವಿಮಾನ ನಿಲ್ದಾಣಕ್ಕೆ ಅಂತಹ ಸ್ಥಾನಮಾನವನ್ನು ಹೇಗೆ ನೀಡಲಾಗಿದೆ ಎಂದು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇದೆ. ಭಾರತದ ಎಲ್ಲಾ ನಾಗರಿಕರು ತಮ್ಮ ಕುಟುಂಬ ವ್ಯವಹಾರಗಳಿಗೆ ಇದೇ ರೀತಿಯ ವಿಶೇಷ ಅನುಮತಿಗಳನ್ನು ಪಡೆಯುತ್ತಾರೆಯೇ? ನಾನು ಡಿಜಿಸಿಎಯ ಪ್ರತಿಕ್ರಿಯೆಯ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ” ಎಂದು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ತಿಳಿಸಿದೆ.
ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ ಕಾನೂನು, ನಿಯಮಗಳು ಅಥವಾ ನಿಬಂಧನೆಗಳ ಮಾಹಿತಿ ಮಾತ್ರವಲ್ಲದೆ, ವಿವಿಧ ಇಲಾಖೆಗಳು ನೀಡಿದ ನಿರಾಕ್ಷೇಪಣಾ ಪ್ರಮಾಣಪತ್ರದ (ಎನ್ಒಸಿ) ನಕಲನ್ನು ಮತ್ತು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ವಿಮಾನ ನಿಲ್ದಾಣಕ್ಕೆ ಮಾಡಿದ ಬದಲಾವಣೆಗಳಿಗೆ ತಗಲಿದ ವೆಚ್ಚದ ಮಾಹಿತಿಯನ್ನು ಮೂರ್ತಿ ಕೋರಿದ್ದರು ಎಂದು ವರದಿ ಹೇಳಿದೆ.