ಅತ್ಯಾಚಾರ ಪ್ರಕರಣದ ಆರೋಪಿಗಳ ಡಿಎನ್ಎ ಪರೀಕ್ಷೆಗೆ ಅಖಿಲೇಶ್ ಒತ್ತಾಯ
ಲಕ್ನೋ : ಅಯೋಧ್ಯೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಡಿಎನ್ಎ ಪರೀಕ್ಷೆ ನಡೆಸಬೇಕು, ತನಿಖೆಯಲ್ಲಿ ಸರಿಯಾದ ನ್ಯಾಯದ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೊಸ್ಟ್ ಮಾಡಿರುವ ಅವರು, ದುಷ್ಕೃತ್ಯಗಳ ಪ್ರಕರಣದಲ್ಲಿ ಆರೋಪಿಗಳಿಗೆ ಡಿಎನ್ಎ ಪರೀಕ್ಷೆಯನ್ನು ಮಾಡುವ ಮೂಲಕ ನ್ಯಾಯದ ಮಾರ್ಗವನ್ನು ಕಂಡುಕೊಳ್ಳಬೇಕು ಆದರೆ ಕೇವಲ ಆರೋಪಗಳನ್ನು ಮಾಡುವುದರ ಮೂಲಕ ಮತ್ತು ರಾಜಕೀಯ ಮಾಡುವುದರ ಮೂಲಕ ಅಲ್ಲ ಎಂದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಸಂಪೂರ್ಣ ಶಿಕ್ಷೆಯಾಗಬೇಕು ಆದರೆ ಡಿಎನ್ಎ ಪರೀಕ್ಷೆಯ ನಂತರ ಆರೋಪಗಳು ಸುಳ್ಳು ಎಂದು ಸಾಬೀತಾದರೆ, ಇದರಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ಸಹ ಬಿಡಬಾರದು. ಇದು ನ್ಯಾಯದ ಬೇಡಿಕೆ ಎಂದು ಅಖಿಲೇಶ್ ಒತ್ತಾಯಿಸಿದರು. ಅಖಿಲೇಶ್ ಯಾದವ್ ಹೇಳಿಕೆಗೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈವರೆಗೂ ಇಂತಹ ಪ್ರಜರಣದಲ್ಲಿ ಎಷ್ಟು ಆರೋಪಿಗಳು ಡಿಎನ್ಎ ಪರೀಕ್ಷೆಗೆ ಒಳಗಾಗಿದ್ದಾರೆ? ಅಯೋಧ್ಯೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮ ಸೂಕ್ತವಾಗಿದೆ ಆದರೆ ಆರೋಪಿಗಳು ಡಿಎನ್ಎ ಪರೀಕ್ಷೆಗೆ ಒಳಗಾಗಬೇಕು ಎಂಬ ಸಮಾಜವಾದಿ ಪಕ್ಷದ ಹೇಳಿಕೆಗೆ ಸರಿಯಲ್ಲ, ಅವರ ಸರ್ಕಾರದ ಅಧಿಕಾರಾವಧಿಯಲ್ಲಿ ಅಂತಹ ಆರೋಪಿಗಳ ವಿರುದ್ಧ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಯಿತೇ ಎಂದು ಪ್ರಶ್ನಿಸಿದ್ದಾರೆ. ಇದು ಮುಸ್ಲಿಂ ಓಲೈಕೆಯ ಪರಮಾವಧಿ, ಎಸ್ಪಿ ಯಾವಾಗಲೂ ಹಿಂದುಳಿದ ಸಮುದಾಯವನ್ನು ಶೋಷಣೆ ಮಾಡುತ್ತಿದೆ ಆದರೆ ಈ ಬಾರಿ ಅನ್ಯಾಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಡಿಎನ್ಎಗಾಗಿ ಮಾತನಾಡುವ ಮೂಲಕ ನೀವು ನಿಮ್ಮ ಮತ ಬ್ಯಾಂಕ್ ಅನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೀರಿ, ಆದರೆ ರಾಜ್ಯದ ಜನರು ಸಂತ್ರಸ್ತರಿಗೆ ನ್ಯಾಯ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯನ್ನು ನಿರೀಕ್ಷಿಸುತ್ತಾರೆ ಎಂದು ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾದರ್ಸಾ ನಗರದಲ್ಲಿ ಬೇಕರಿ ನಡೆಸುತ್ತಿರುವ ಸಮಾಜವಾದಿ ಕಾರ್ಯಕರ್ತ ಮೊಯಿದ್ ಖಾನ್ ಮತ್ತು ಆತನ ಉದ್ಯೋಗಿ ರಾಜು ಖಾನ್ ಅವರನ್ನು ಬಂಧಿಸಿದೆ. ಪ್ರಕರಣದ ಕುರಿತು ವಿವರ ನೀಡಿದ ಪೊಲೀಸರು, ಆರೋಪಿಯು 12 ವರ್ಷದ ಬಾಲಕಿಯ ಮೇಲೆ ಎರಡು ತಿಂಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತ ಬಾಲಕಿ ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.