ಅಳುತ್ತಾ ಕಾಂಗ್ರೆಸ್ ತೊರೆದ ಹಿರಿಯ ನಾಯಕ ನಾನಲ್ಲ ಎಂದ ಅಶೋಕ್ ಚವಾಣ್

ಅಳುತ್ತಾ ಕಾಂಗ್ರೆಸ್ ತೊರೆದ ಹಿರಿಯ ನಾಯಕ ನಾನಲ್ಲ ಎಂದ ಅಶೋಕ್ ಚವಾಣ್

ಮುಂಬೈ, ಮಾ. 18: ಮುಂಬೈಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ‘ಹಿರಿಯ ನಾಯಕರೊಬ್ಬರು ಅಳುತ್ತಾ ಕಾಂಗ್ರೆಸ್ ತೊರೆದಿದ್ದರು’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ರಾಜ್ಯಸಭಾ ಸಂಸದ ಅಶೋಕ್ ಚವಾಣ್, ಆ ನಾಯಕ ನಾನಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ಅವರು ಭಾನುವಾರ ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದು ತಮ್ಮ ಪ್ರತಿಸ್ಪರ್ಧಿಗಳು, ಒಂದೊಮ್ಮೆ ಸ್ನೇಹಿತರಾಗಿದ್ದು ಆಮೇಲೆ ಶತ್ರುಗಳಾದವರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ತನಿಖಾ ಸಂಸ್ಥೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು “ಹಿರಿಯ ನಾಯಕ” ಬಿಜೆಪಿಗೆ ಹೋಗಿದ್ದಾರೆ.ಆಡಳಿತ ಪಕ್ಷವು ಪ್ರತಿಸ್ಪರ್ಧಿ ರಾಜಕಾರಣಿಗಳನ್ನು ಬೆದರಿಸಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಇತರರನ್ನು ಬಳಸುತ್ತದೆ ಎಂದು ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಮಹಾರಾಷ್ಟ್ರದ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ತೊರೆದರು. ಅಳುತ್ತಾ ಅವರು ನನ್ನ ತಾಯಿಯ (ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ) ಬಳಿ ‘ನನಗೆ ನಾಚಿಕೆಯಾಗುತ್ತಿದೆ. ಈ ಶಕ್ತಿಯ ವಿರುದ್ಧ ಹೋರಾಡುವ ಶಕ್ತಿ ಇಲ್ಲ. ನಾನು ಜೈಲಿಗೆ ಹೋಗಲು ಬಯಸುವುದಿಲ್ಲ’ ಎಂದು ಅಳುತ್ತಾ ಹೇಳಿದ್ದರು ಎಂದು ಮುಂಬೈನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ತಿಂಗಳು ಬಿಜೆಪಿಗೆ ಸೇರಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್, ಕಾಂಗ್ರೆಸ್ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ರಾಹುಲ್ ಆಡಳಿತಾರೂಢ ಬಿಜೆಪಿ ವಿರುದ್ಧದ ದಾಳಿಯಲ್ಲಿ ಯಾವುದೇ ವ್ಯಕ್ತಿಯನ್ನು ಹೆಸರಿಸಿಲ್ಲ ಎಂದಿದ್ದಾರೆ. ಆದರೆ ಅವರು ನನ್ನ ಬಗ್ಗೆ ಹಾಗೆ ಹೇಳುತ್ತಿದ್ದರೆ ಅದು ತರ್ಕಬದ್ಧವಲ್ಲ ಮತ್ತು ನಿರಾಧಾರವಾಗಿದೆ. ನಿಜವೆಂದರೆ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವವರೆಗೂ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೆಲವು ಕ್ಷಣಗಳ ನಂತರ ಪಕ್ಷಕ್ಕೂ ರಾಜೀನಾಮೆ ನೀಡಿದ್ದೆ. ಅಲ್ಲಿಯವರೆಗೆ, ನಾನು ರಾಜೀನಾಮೆ ನೀಡಿದ್ದೇನೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ವಿಡಿಯೊ ಸಂದೇಶದಲ್ಲಿ ಚವಾಣ್ ಹೇಳಿದ್ದಾರೆ.

ನಾನು ಸೋನಿಯಾ ಗಾಂಧಿ ಅವರವರನ್ನು ಎಂದಿಗೂ ಭೇಟಿ ಮಾಡಿಲ್ಲ. ನಾನು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಅತ್ತಿದ್ದೇನೆ ಎಂದು ಹೇಳುವುದು ನಿರಾಧಾರ. ಇದು ಚುನಾವಣಾ ದೃಷ್ಟಿಯಿಂದ ರಾಜಕೀಯ ಹೇಳಿಕೆ” ಎಂದು ಚವಾಣ್ ಹೇಳಿದ್ದಾರೆ. ಅಂದಹಾಗೆ ಮಹಾರಾಷ್ಟ್ರದ ಇಬ್ಬರು ಉನ್ನತ ರಾಜಕೀಯ ನಾಯಕರು ಈ ವರ್ಷ ಕಾಂಗ್ರೆಸ್ ತೊರೆದಿದ್ದಾರೆ. ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಸೇರಿದ್ದು, ಚವಾಣ್ ಬಿಜೆಪಿಗೆ ಸೇರಿದ್ದರು. ಅಶೋಕ್ ಚವಾಣ್ ಅವರ ವಿರುದ್ಧ ಮೂರು ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಎರಡು ನವೆಂಬರ್ 2010 ರ ಆದರ್ಶ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿವೆ. ಈ ಪ್ರಕರಣದಿಂದಾಗಿಯೇ ಚವಾಣ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

Previous Post
6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ಪದಚ್ಯುತಿ
Next Post
ಲೋಕಸಭಾ ಚುನಾವಣೆ: ತಮಿಳುನಾಡಿನ 9 ಕಡೆ ಕಾಂಗ್ರೆಸ್, 21ರಲ್ಲಿ ಡಿಎಂಕೆ ಸ್ಪರ್ಧೆ

Recent News