ಕನ್ವರ್ ಯಾತ್ರೆ ; ಅಂಗಡಿ ಮಾಲೀಕರು ಗುರುತು ಬಹಿರಂಗಪಡಿಸಲು ಆದೇಶ
ಲಕ್ನೋ : ಉತ್ತರ ಭಾರತದಲ್ಲಿ ಕನ್ವಾರ್ ಯಾತ್ರೆ ಆರಂಭವಾಗುತ್ತಿರುವ ನಡುವೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರ ವಿವಾದಿತ ಆದೇಶ ಹೊರಡಿಸಿದೆ. ಯಾತ್ರೆ ಸಾಗುವ ಅಕ್ಕಪಕ್ಕ ಅಂಗಡಿ ಮಾಲಿಕರು, ತಿಂಡಿ, ತಿನಿಸು,ಚಾ ಮಾರುವ ಅಂಗಡಿ ಮಾಲೀಕರ ಅಂಗಡಿ ಮುಂದೆ ದೊಡ್ಡದಾಗಿ ಗುರುತು ಬಹಿರಂಗಪಡಿಸಬೇಕು ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕನ್ವರ್ ಯಾತ್ರಿಕರ ನಂಬಿಕೆಯ ಶುದ್ಧತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಂಡಿದ್ದು, ಹಲಾಲ್ ತಿನಿಸುಗಳನ್ನು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ನಿರ್ದೇಶನದ ಪ್ರಕಾರ ಪ್ರತಿ ಆಹಾರ ಅಂಗಡಿ ಅಥವಾ ಕಾರ್ಟ್ ಮಾಲೀಕರು ಮಾಲೀಕರ ಹೆಸರನ್ನು ಬೋರ್ಡ್ನಲ್ಲಿ ಹಾಕಬೇಕಾಗುತ್ತದೆ.
ಸರ್ಕಾರದ ಈ ನಿರ್ಧಾರ ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸುವ ಪ್ರಯತ್ನ ಎಂದ ಪ್ರತಿಪಕ್ಷಗಳು ಆರೋಪಿಸಿವೆ. ಈ ಆದೇಶವನ್ನು “ರಾಜ್ಯ ಪ್ರಾಯೋಜಿತ ಧರ್ಮಾಂಧತೆ” ಎಂದ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ. ಇದು ವರ್ಷಬೇಧ ನೀತಿ ಎಂದ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಇದು ಸಾಮಾಜಿಕ ಅಪರಾಧ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್, ಮುಸ್ಲಿಮರು ಹಿಂದೂ ಹೆಸರಿನ ವೇಷದಲ್ಲಿ ಮಾಂಸಾಹಾರಿ ಆಹಾರವನ್ನು ಯಾತ್ರಿಕರಿಗೆ ಮಾರಾಟ ಮಾಡುತ್ತಾರೆ ಎಂದು ಆರೋಪಿಸಿದರು. ಅವರು ವೈಷ್ಣೋ ಧಾಬಾ ಭಂಡಾರ್, ಶಾಕುಂಭರಿ ದೇವಿ ಭೋಜನಾಲಯ, ಮತ್ತು ಶುದ್ಧ ಭೋಜನಾಲಯ ಮುಂತಾದ ಹೆಸರುಗಳನ್ನು ಬರೆದು ಮಾಂಸಾಹಾರವನ್ನು ಮಾರಾಟ ಮಾಡುತ್ತಾರೆ ಎಂದು ಸಚಿವರು ಹೇಳಿದರು.
ಜುಲೈ 22 ರಂದು ಕನ್ವರ್ ಯಾತ್ರೆ ಪ್ರಾರಂಭವಾಗಲಿರುವುದರಿಂದ ಉತ್ತರ ಪ್ರದೇಶದಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಉತ್ತರಾಖಂಡ ಪೊಲೀಸರು ಕನ್ವರ್ ಯಾತ್ರೆಯ ಮಾರ್ಗಗಳಲ್ಲಿರುವ ತಿನಿಸುಗಳಿಗೆ ಮಾಲೀಕರ ಹೆಸರನ್ನು ಬೋರ್ಡ್ನಲ್ಲಿ ಹಾಕುವಂತೆ ನಿರ್ದೇಶನಗಳನ್ನು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ ಪ್ರಮೋದ್ ಸಿಂಗ್ ದೋಬಾಲ್, ಹೋಟೆಲ್ಗಳು, ಧಾಬಾಗಳು ಅಥವಾ ಬೀದಿ ಆಹಾರ ಮಳಿಗೆಗಳನ್ನು ನಿರ್ವಹಿಸುವ ಎಲ್ಲರಿಗೂ ತಮ್ಮ ಸಂಸ್ಥೆಯಲ್ಲಿ ಮಾಲೀಕರ ಹೆಸರು, ಕ್ಯೂಆರ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಲು ಆದೇಶಿಸಲಾಗಿದೆ. ಅನುಸರಿಸಲು ವಿಫಲವಾದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ಕನ್ವರ್ ಮಾರ್ಗದಿಂದ ತೆಗೆದುಹಾಕಲಾಗುತ್ತದೆ.