ಕಾವೇರಿ ನೀರು ಬಿಡುಗಡೆ ವಿಚಾರ ರಾಜ್ಯ ಸರ್ಕಾರದ ಬೆನ್ನಲೆ ಸರ್ವಪಕ್ಷಗಳ ಸಭೆ ಕರೆದ ತ.ನಾಡು ಸರ್ಕಾರ
ನವದೆಹಲಿ : ಕಾವೇರಿ ನದಿಯಿಂದ ತಮಿಳುನಾಡಿಗೆ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರಕಾರ ನಿರಾಕರಿಸಿದ ಬೆನ್ನಲೆ ತಮಿಳುನಾಡು ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ನಾಳೆ ಚೆನೈನಲ್ಲಿ ಜಲಸಂಪನ್ಮೂಲ ಸಚಿವ ದೊರೈಮುರುಗನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದ ಕರ್ನಾಟಕ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸ್ಸು ಅನ್ವಯ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡದಿರಲು ತಿರ್ಮಾನಿಸಿತ್ತು. ಮಳೆಯ ಪ್ರಮಾಣ ನಿರೀಕ್ಷೆಗಿಂತ ಸರಿ ಸುಮಾರು 28% ಕೊರತೆ ಇದ್ದು ಈವರೆಗಿನ ಮಳೆಗೆ ಜಲಾಶಯಗಳು ಕೂಡಾ ಭರ್ತಿಯಾಗಿಲ್ಲ. ಹವಮಾನ ಇಲಾಖೆ ಮಳೆಯ ಭರವಸೆ ನೀಡಿದ್ದರು ಗ್ಯಾರಂಟಿ ಇಲ್ಲ ಹೀಗಾಗೀ ಜುಲೈ ಅಂತ್ಯದವರೆಗೂ ನೀರು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಲು ನಿರ್ಧರಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸಿನ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಿ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಲು ನಿರ್ಧರಿಸಿದ್ದು ಅಲ್ಲಿಯವರೆಗೂ ನೀರು ಬಿಡುಗಡೆ ಮಾಡದಿರಲು ಸರ್ವ ಪಕ್ಷಯಲ್ಲಿ ತಿರ್ಮಾನಿಸಿತ್ತು. ರಾಜ್ಯ ಸರ್ಕಾರದ ಈ ತಿರ್ಮಾನದ ಬೆನ್ನಲೆ ಈಗ ತಮಿಳುನಾಡಿನ ಪಕ್ಷಗಳ ಸಭೆಯನ್ನು ಸಚಿವ ದೊರೈಮುರುಗನ್ ಕರೆದಿದ್ದು ಒತ್ತಡ ಹೆಚ್ಚಿಸುವ ಪ್ರಯತ್ನ ಆರಂಭಿಸಿದೆ.