ಕೇಂದ್ರ ಮಂತ್ರಿ ಆಗುವುದರ ವದಂತಿಗಳನ್ನು ತಳ್ಳಿ ಹಾಕಿದ ಹೆಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಸೋಲಿಸಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಕೂಟವನ್ನು ಗೆಲ್ಲಿಸುವುದೇ ನಮ್ಮ ಗುರಿ
ನನಗೆ ಆ ಆಸೆಯೂ ಇಲ್ಲ. ಅ ರೀತಿ ಚರ್ಚೆಯೇ ಆಗಿಲ್ಲ ಎಂದ ಮಾಜಿ ಸಿಎಂ
**
ಬೆಂಗಳೂರು: ನಾನು ಕೇಂದ್ರ ಮಂತ್ರಿ ಆಗುವ ಬಗ್ಗೆ ಚಿಂತೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಕೃಷಿ ಹಾಗೂ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರನ್ನು ಬೀಳ್ಕೊಟ್ಟ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಾನು ಇವುಗಳ ಯಾವುದರ ಬಗ್ಗೆ ಚಿಂತೆ ಮಾಡಿಲ್ಲ. 28 ಕ್ಷೇತ್ರಗಳನ್ನು ಗೆಲ್ಲುವುದಷ್ಟೆ ನಮ್ಮ ಮೈತ್ರಿಕೂಟದ ಗುರಿ. ನನ್ನ ಮುಂದೆ ಇರುವ ಏಕೈಕ ಅಜೆಂಡಾ ಎಂದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸೋದು ಎಂದು ಅವರು ಹೇಳಿದರು.
ಮಂತ್ರಿಯಾಗಿ ಏನು ಮಾಡಲಿ? ನನಗೆ ಅ ಸುದ್ದಿಯೇ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಗಮನಿಸಿದ್ದೇನೆ. ನನಗೆ ಅ ಬಗ್ಗೆ ಆಸೆಯೂ ಇಲ್ಲ. ಅ ರೀತಿ ಚರ್ಚೆಯೇ ಆಗಿಲ್ಲ ಎಂದ ಅವರು; ಮುಂದಿನ ಫೆಬ್ರವರಿ ತಿಂಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದರೆ ಏನು ಮಾಡುವುದು? ಕೇಂದ್ರ ಮಂತ್ರಿ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಆಸೆಯೂ ಇಲ್ಲ ಎಂದರು.