ಚಂಡಿಗಢ ಮೇಯರ್ ಚುನಾವಣೆ ವಿವಾದ ಕುರಿತು ಚುನಾವಣಾಧಿಕಾರಿ ವಿಚಾರಣೆ ಆಗಬೇಕು: ಸುಪ್ರೀಂ

ಚಂಡಿಗಢ ಮೇಯರ್ ಚುನಾವಣೆ ವಿವಾದ ಕುರಿತು ಚುನಾವಣಾಧಿಕಾರಿ ವಿಚಾರಣೆ ಆಗಬೇಕು: ಸುಪ್ರೀಂ

ನವದೆಹಲಿ, ಫೆ. 19: ಚಂಡಿಗಢದ ಮೇಯರ್ ಚುನಾವಣೆ ಸಂದರ್ಭದಲ್ಲಿ ಬ್ಯಾಲೆಟ್ ಪೇಪರ್ಗಳನ್ನು ತಿರುಚಿ ಅಕ್ರಮ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಸುಪ್ರೀಂ ಕೋರ್ಟ್, ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದೆ. ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಬದಲಾದ ಒಂದು ದಿನದ ನಂತರ ಸೋಮವಾರ, ಚುನಾವಣೆಯಲ್ಲಿ ಅಕ್ರಮಗಳ ಕುರಿತ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ನಡೆಯುತ್ತಿರುವ “ಕುದುರೆವ್ಯಾಪಾರ” ಗಂಭೀರ ವಿಷಯವಾಗಿದೆ ಎಂದು ಹೇಳಿದೆ.

ಬ್ಯಾಲೆಟ್ ಪೇಪರ್ಗಳನ್ನು ಮಂಗಳವಾರ ಪರೀಕ್ಷೆಗೆ ತರುವಂತೆ ನ್ಯಾಯಾಲಯ ತಿಳಿಸಿದೆ. ಹೊಸದಾಗಿ ಚುನಾವಣೆ ನಡೆಸುವ ಬದಲು ಹೊಸ ಚುನಾವಣಾಧಿಕಾರಿಯಿಂದ ಮತ ಎಣಿಕೆ ಮಾಡಬೇಕು ಎಂದು ಆರಂಭದಲ್ಲಿ ಪ್ರಸ್ತಾಪಿಸಿದ ನ್ಯಾಯಾಲಯ, ಮತಪತ್ರಗಳನ್ನು ಪರಿಶೀಲಿಸಿದ ನಂತರ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ. ಜನವರಿ 30ರಂದು ನಡೆದ ಮೇಯರ್ ಚುನಾವಣೆಯ ಎಣಿಕೆಯಲ್ಲಿ ಎಂಟು ಮತಗಳನ್ನು ಚುನಾವಣಾಧಿಕಾರಿ ಅನಿಲ್ ಮಸಿಹ್ ಅಸಿಂಧು ಎಂದು ಘೋಷಿಸಿದ್ದರು. ಎಎಪಿಯ ಮೇಯರ್ ಅಭ್ಯರ್ಥಿ ಕುಲದೀಪ್ ಕುಮಾರ್ ಅವರು ಬಿಜೆಪಿಯ ಮನೋಜ್ ಸೋಂಕರ್ ಅವರಿಂದ ನಾಲ್ಕು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಸದಸ್ಯರಾದ ಮಸಿಹ್ ಅವರು ಉದ್ದೇಶಪೂರ್ವಕವಾಗಿ ಮತಗಳನ್ನು ಅಸಿಂಧು ಮಾಡಿದ್ದಾರೆ ಎಂದು ಎಎಪಿ ಹೇಳಿಕೊಂಡಿದೆ.

ಕೆಲವು ಎಎಪಿ ಕೌನ್ಸಿಲರ್‌ಗಳ ಬ್ಯಾಲೆಟ್ ಪೇಪರ್‌ಗಳಲ್ಲಿ ಮಸಿಹ್ ಬರೆಯುತ್ತಿರುವ ವಿಡಿಯೊ ಬಹಿರಂಗವಾಗಿತ್ತು. ಕ್ಯಾಮೆರಾ ಕೆಳಗೆಯೇ ಮಸಿಹ್ ಮತಪತ್ರಗಳನ್ನು ತಿರುಚಿದ್ದು ಇದರಲ್ಲಿ ಸ್ಪಷ್ಟವಾಗಿತ್ತು. ಫೆಬ್ರವರಿ 5 ರಂದು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅವರ ಕ್ರಮವನ್ನು “ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಕರೆದಿದೆ. ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಕಳೆದ ದಿನ ಬಿಜೆಪಿಯ ಮನೋಜ್ ಸೋಂಕರ್ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಗಮನಿದ್ದು, ಮಸಿಹ್ ಅವರಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಳಿತು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಮಿಸ್ಟರ್ ಮಸಿಹ್, ನಾನು ನಿಮಗೆ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ನೀವು ಸತ್ಯವಾದ ಉತ್ತರಗಳನ್ನು ನೀಡದಿದ್ದರೆ, ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಇದು ಗಂಭೀರ ವಿಚಾರ. ನಾವು ವಿಡಿಯೋ ನೋಡಿದ್ದೇವೆ. ಬ್ಯಾಲೆಟ್ ಪೇಪರ್‌ಗಳಲ್ಲಿ ಕ್ರಾಸ್ ಮಾರ್ಕ್ಸ್ ಹಾಕುತ್ತಾ ಕ್ಯಾಮೆರಾ ನೋಡುತ್ತಾ ಏನು ಮಾಡುತ್ತಿದ್ದಿರಿ? ನೀವು ಯಾಕೆ ಅಂಕಗಳನ್ನು ಹಾಕುತ್ತಿದ್ದೀರಿ? ಎಂದು ಕೇಳಿದ್ದಾರೆ. ಎಂಟು ಬ್ಯಾಲೆಟ್ ಪೇಪರ್‌ಗಳಲ್ಲಿ ಕ್ರಾಸ್ (X) ಗುರುತು ಹಾಕಿರುವುದನ್ನು ಒಪ್ಪಿಕೊಂಡಿರುವ ಮಸಿಹ್ ತಿರುಚಿದ ಮತಪತ್ರಗಳನ್ನು ಪ್ರತ್ಯೇಕಿಸಬೇಕಾಗಿರುವುದರಿಂದ ಅವರು ಹಾಗೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ನೀವು ಬ್ಯಾಲೆಟ್ ಪೇಪರ್‌ಗಳನ್ನು ಏಕೆ ತಿರುಚಿದ್ದೀರಿ? ನೀವು ಪೇಪರ್‌ಗಳಿಗೆ ಮಾತ್ರ ಸಹಿ ಮಾಡಬೇಕಾಗಿತ್ತು. ನೀವು ಮತಪತ್ರಗಳ ಮೇಲೆ ಇತರ ಗುರುತು ಹಾಕಬಹುದು ಎಂದು ನಿಯಮಗಳಲ್ಲಿ ಎಲ್ಲಿ ಹೇಳಿದೆ? ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಚಂಡೀಗಢ ಆಡಳಿತವನ್ನು ಪ್ರತಿನಿಧಿಸುತ್ತಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕಡೆಗೆ ತಿರುಗಿ “ಮಿಸ್ಟರ್ ಸಾಲಿಸಿಟರ್, ಅವರು (ಮಸಿಹ್) ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅವರು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Previous Post
ನ್ಯಾಯಾಧೀಶರಿಂದ ಲೈಂಗಿಕ ದೌರ್ಜನ್ಯ ಆರೋಪ: ತನಿಖೆಗೆ ಆದೇಶ
Next Post
ಡಿಎಂಕೆ ಜತೆ ಕಮಲ್ ಹಾಸನ್ ಪಕ್ಷದ ಮೈತ್ರಿ ಎರಡು ದಿನಗಳಲ್ಲಿ ಸ್ಪಷ್ಟನೆ

Recent News