ಚಂಡೀಗಢ ಮೇಯರ್ ಚುನಾವಣೆ ಫೈಟ್ ಕಾನೂನು ಹೋರಾಟ ಮೂಲಕ ಮೇಯರ್ ಗದ್ದುಗೆ ಏರಿದ ಆಪ್
ನವದೆಹಲಿ : ಚಂಡೀಗಢ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಐತಿಹಾಸಿಕ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಮೇಯರ್ ಚುನಾವಣೆಯಲ್ಲಿ ಅಸಿಂಧು ಎಂದು ಘೋಷಿಸಲಾದ 8 ಮತಪತ್ರಗಳನ್ನು ಸಿಂಧು ಎಂದು ಪರಿಗಣಿಸುವುದಾಗಿ ಆದೇಶಿಸಿದೆ. ಸುಪ್ರೀಂ ಆದೇಶದಿಂದ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಅವರನ್ನು ಮೇಯರ್ ಎಂದು ಘೋಷಿಸಲಾಯಿತು.
ಆಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಸಂಬಂಧ ತೀರ್ಪು ನೀಡಿತು. ಅರ್ಜಿದಾರರಿಗೆ 12 ಮತಗಳು ಬಂದಿವೆ, ಎಣಿಕೆಯಲ್ಲಿ ಎಂಟು ಮತಗಳನ್ನು ತಪ್ಪಾಗಿ ಅಸಿಂಧು ಎಂದು ಘೋಷಿಸಲಾಗಿದೆ. ಅದರೆ ಈ ಎಂಟು ಮತಗಳು ಅರ್ಜಿದಾರರ ಪರವಾಗಿ ಕಂಡುಬಂದವು. ಹೀಗಾಗೀ 12+8 ಸೇರಿಸುವ ಮೂಲಕ ಅರ್ಜಿದಾರರಿಗೆ 20 ಮತಗಳಿವೆ ಹೀಗಾಗೀ ಎಎಪಿ ಕೌನ್ಸಿಲರ್ ಮತ್ತು ಅರ್ಜಿದಾರ ಕುಲದೀಪ್ ಕುಮಾರ್ ಅವರನ್ನು ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ನ ಮೇಯರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಗಿದೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಿದ ಅಧ್ಯಕ್ಷ ಅನಿಲ್ ಮಸಿಹ್ ಅವರ ನಿರ್ಧಾರ ಅಸಿಂಧುವಾಗಿದೆ.
ಮೇಯರ್ ಚುನಾವಣೆ ಪ್ರಕ್ರಿಯೆಯಲ್ಲಿ ಸಭಾಧ್ಯಕ್ಷರು ಮೊದಲು ಅಕ್ರಮ ಬದಲಾವಣೆ ಮಾಡಿದ್ದಾರೆ ಎಂದು ಪೀಠ ಹೇಳಿದೆ. ಇದಾದ ನಂತರ ಅವರು ಫೆಬ್ರವರಿ 19 ರಂದು ಈ ನ್ಯಾಯಾಲಯದ ಮುಂದೆ ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಲಾಯಿತು. ನ್ಯಾಯಾಲಯವು ವಿಚಾರಣೆ ವೇಳೆ ಜನವರಿ 30 ರಂದು ನಡೆದ ಮತದಾನದ ಬ್ಯಾಲೆಟ್ ಪೇಪರ್ ಅನ್ನು ಪರಿಶೀಲಿಸಿತು. ಎಎಪಿ ಅಭ್ಯರ್ಥಿಯ ಪರವಾಗಿ ಚಲಾವಣೆಯಾದ ಎಂಟು ಮತಗಳಲ್ಲಿ ಹೆಚ್ಚುವರಿ ಮತಗಳಿದೆ ಎಂದು ಹೇಳಿತ್ತು.
ಪಂಜಾಬ್ ಸಿಎಂ ಭಗವಂತ್ ಮಾನ್ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮಾನ್ ಹೇಳಿದ್ದಾರೆ. ಚಂಡೀಗಢದಲ್ಲಿ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ, ಸಭಾಧ್ಯಕ್ಷರು ತಿರಸ್ಕರಿಸಿದ 8 ಮತಗಳನ್ನು ಸಿಜೆಐ ಎತ್ತಿಹಿಡಿದು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಮಾಡಿದೆ. ಪ್ರಜಾಪ್ರಭುತ್ವದ ಈ ಅದ್ಧೂರಿ ವಿಜಯಕ್ಕಾಗಿ ನಾನು ಚಂಡೀಗಢದ ಜನರಿಗೆ ಅನೇಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.