ತಿನ್ನೋದು ಬೀಫ್, ಹಿಡಿಯೋದು ಶಿವನ ಪೋಟೊ: ರಾಹುಲ್ ವಿರುದ್ದ ಸಿ.ಪಿ. ಜೋಶಿ ವಾಗ್ದಾಳಿ
ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೆಸರು ಹೇಳದೆ ವಾಗ್ದಾಳಿ ನಡೆಸಿರುವ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ, ಗೋಮಾಂಸ ಸೇವಿಸುವವರು ಸಂಸತ್ತಿನಲ್ಲಿ ಶಿವನ ಚಿತ್ರವನ್ನು ತೋರಿಸುತ್ತಾರೆ ಎಂದು ಹರಿಹಾಯ್ದಿದ್ದಾರೆ.
ದೌಸಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜೋಶಿ ಈ ಮಾತು ಹೇಳಿದ್ದು, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಭಾರತ-ಚೀನಾ ಮಧ್ಯೆ ಹೋರಾಟವಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿ ಉದ್ವಿಗ್ನತೆ ಇದೆ. ಅದರೆ ರಾಹುಲ್ ಗಾಂಧಿ ಚೀನಾ ರಾಯಭಾರಿ ಯೊಂದಿಗೆ ಕುಳಿತಿದ್ದಾರೆ. ಗೋಮಾಂಸ ಸೇವಿಸುವವರೊಬ್ಬರು ಸಂಸತ್ತಿಗೆ ಶಿವನ ಚಿತ್ರವನ್ನು ತರುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಜೋಶಿ ಹೇಳಿದ್ದಾರೆ.
ಯಾರಾದರೂ ಹಿಂದೂಗಳನ್ನು ಭಯೋತ್ಪಾದಕರು, ಹಿಂಸಾತ್ಮಕರು ಎಂದು ಕರೆದರೆ ಮತ್ತು ರಾಮಮಂದಿರವನ್ನು ವಿರೋಧಿಸಿದರೆ ನಾವು ಸುಮ್ಮನಿರುತ್ತೇವೆಯೇ ಎಂದು ಪ್ರಶ್ನಿಸಿದ್ದಾರೆ.
ಜುಲೈ 1 ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ವೇಳೆ ರಾಹುಲ್ ಗಾಂಧಿ ಶಿವನ ಚಿತ್ರ ಹಿಡಿದಿದ್ದರು. ಆಡಳಿತ ಪಕ್ಷದ ನಾಯಕರು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.