ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯಿಂದ ಮೂರನೇ ಬಾರಿ ಕಣಕ್ಕೆ
ಲಕ್ನೋ: ಮೂರನೇ ಬಾರಿ ಅಧಿಕಾರ ಹಿಡಿಯಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 11:40ಕ್ಕೆ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಎನ್ಡಿಎ ಮಿತ್ರ ಪಕ್ಷದ ನಾಯಕರು, ಬಿಜೆಪಿ ಮುಖ್ಯಮಂತ್ರಿಗಳು ಮೋದಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಮಾಡುವುದಕ್ಕೆ ಮೊದಲು ದಶಾಶ್ವಮೇಧ ಘಾಟ್ನಲ್ಲಿ ಗಂಗಾ ನದಿಗೆ ಗಂಗಾ ಆರತಿ ಮಾಡಿದರು. ನಂತರ ವಾರಣಾಸಿ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾರಣಾಸಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಮೂರನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಯೋಗಿ ಆದಿತ್ಯನಾಥ್, ಏಕನಾಥ್ ಶಿಂಧೆ, ಕಾನ್ರಾಡ್ ಸಂಗ್ಮಾ, ಪ್ರಫುಲ್ ಪಟೇಲ್, ರಾಮದಾಸ್ ಅಠವಾಲೆ, ಹರ್ದೀಪ್ ಪುರಿ, ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್, ಜಿತನ್ ರಾಮ್ ಮಾಂಝಿ, ಉಪೇಂದ್ರ ಕುಶ್ವಾಹ, ಸಂಜಯ್ ನಿಶಾದ್, ಅನುಪ್ರಿಯಾ ಪಟೇಲ್, ಓಂಪ್ರಕಾಶ್ ರಾಜಭರ್, ಜಯಂತ್ ಚೌಧರಿ, ಅಂಬುಮಣಿ ರಾಮದಾಸ್, ಜಿಕೆ ವಾಸನ್, ದೇವನಾಥನ್ ಯಾದವ್, ತುಶಾರ್ ವೆಲ್ಲಪ್ಪಲ್ಲಿ, ಅತುಲ್ ಬೋರಾ, ಪ್ರಮೋದ್ ಬೋರೋ, ಪಶುಪತಿ ಪಾರಸ್ ಮತ್ತು ಭೂಪೇಂದ್ರ ಚೌಧರಿ ಮೋದಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ವಿಶೇಷ?
ಇಂದು ಗಂಗಾ ಸಪ್ತಮಿ. ಹಿಂದೂಗಳ ಪಾಲಿಗೆ ಪವಿತ್ರವಾದ ದಿನವಾಗಿದೆ. ಗಂಗೆ ಜನಿಸಿದಳು ಎಂಬ ನಂಬಿಕೆಯಿದೆ. ಗಂಗಾ ಸಪ್ತಮಿಯಂದು ಶುಭ ಅಭಿಜಿನ್ ಲಗ್ನದಲ್ಲಿ ಮೋದಿ ನಾಮಪತ್ರ ಸಲ್ಲಿಸುವುದು ಶ್ರೇಯಸ್ಕರ ಎಂದು ಪಂಡಿತ್ ಗಣೇಶ್ವರ್ ಶಾಸ್ತ್ರಿ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಮೋದಿ ನಾಮಪತ್ರ ಸಲ್ಲಿಕೆ ಮಾಡಿದರು. ರಾಮಮಂದಿರ ಲೋಕಾರ್ಪಣೆಗೆ ಮಹೂರ್ತವನ್ನು ಪಂಡಿತ್ ಗಣೇಶ್ವರ್ ಶಾಸ್ತ್ರಿ ನೀಡಿದ್ದರು.
ಏಳು ಲಕ್ಷ ಅಧಿಕ ಮತ ನಿರೀಕ್ಷೆ
ನಾಮಪತ್ರ ಸಲ್ಲಿಕೆಯ ಹಿಂದಿನ ದಿನ ಸೋಮವಾರ ಸಂಜೆ ಪ್ರಧಾನಿ ಮೋದಿ ವಾರಾಣಸಿ ನಗರದಲ್ಲಿ ಸುಮಾರು ಐದು ಕಿಲೋ ಮೀಟರ್ ಬೃಹತ್ ರೋಡ್ ನಡೆಸಿದರು. ನಗರ ಪ್ರಮುಖ ಭಾಗಗಳ ಮೂಲಕ ಕಾಶ ವಿಶ್ವನಾಥನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಕಾಂಗ್ರೇಸ್ ನ ಅಜಯ್ ರೈ ಕಣದಲ್ಲಿದ್ದಾರೆ. ಈ ಹಿಂದೆಯೋ ಅವರು ಮೋದಿಗೆ ಸ್ಪರ್ಧೆಯೊಡ್ಡಿದ್ದರು. ಅದಾಗ್ಯೂ ಮೋದಿ 2019 ರಲ್ಲಿ 64% ಮತ ಹಂಚಿಕೆಯೊಂದಿಗೆ 4.8 ಲಕ್ಷ ಅಂತದಲ್ಲಿ
2014 ರಲ್ಲಿ 3.7 ಲಕ್ಷ ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಈ ಬಾರಿ ಹ್ಯಾಟ್ರಿಕ್ ಜೊತೆಗೆ ಏಳು ಲಕ್ಷಕ್ಕೂ ಅಧಿಕ ಮತಗಳ ಐತಿಹಾಸಿಕ ಗೆಲುವಿಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.