ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ – ಸುಪ್ರೀಂ
ನವದೆಹಲಿ: ನೀಟ್-ಯುಜಿ ಮರುಪರೀಕ್ಷೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಡೆಸಿತು. ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರುಪರೀಕ್ಷೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿತು.
ಇಂದು ನಾವು ಪ್ರಕರಣ ವಿಚಾರಣೆ ನಡೆಸುತ್ತೇವೆ. ಲಕ್ಷಾಂತರ ಯುವ ವಿದ್ಯಾರ್ಥಿಗಳು ಇದಕ್ಕಾಗಿ ಕಾಯುತ್ತಿದ್ದಾರೆ. ಇತರೆ ಪ್ರಕರಣಗಳನ್ನು ಬಳಿಕ ವಿಚಾರಣೆ ನಡೆಸೋಣ ಎಂದು ಸಿಜೆಐ ಚಂದ್ರಚೂಡ್ ಹೇಳಿದರು. ಅದಕ್ಕೆ ಕೇಂದ್ರ ಸರ್ಕಾರ, ನಾಳೆ ಇದನ್ನು ನಾವು ವಿಚಾರಣೆ ನಡೆಸಬಹುದು ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಇಲ್ಲ ಇಂದೇ ವಿಚಾರಣೆ ನಡೆಸೋಣ ಎಂದರು.
56 ಸಾವಿರ ಸರ್ಕಾರಿ ಮೆಡಿಕಲ್ ಸೀಟುಗಳಿವೆ. ಖಾಸಗಿ ಕಾಲೇಜುಗಳಲ್ಲಿ 53 ಸಾವಿರ ಸೀಟುಗಳಿವೆ. 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 22 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿಲ್ಲ. ಮರುಪರೀಕ್ಷೆ ನಡೆದರೆ 22 ಲಕ್ಷ ವಿದ್ಯಾರ್ಥಿಗಳು ಮತ್ತೆ ಭಾಗವಹಿಸಬಹುದು ಎಂದು ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲರ ವಾದ ಮಂಡಿಸಿದರು.
ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ನೇತೃತ್ವದ ಪೀಠ, 22ಲಕ್ಷ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬಹುದು ಎಂಬ ಕಾರಣಕ್ಕೆ ಮರು ಪರೀಕ್ಷೆ ಸಾಧ್ಯವಿಲ್ಲ. ಪರೀಕ್ಷೆ ಸರಿಯಾಗಿ ನಡೆಯದಿದ್ದರೆ ಮಾತ್ರ ಮರು ಪರೀಕ್ಷೆ ಮಾಡಬಹುದು. ಅದಕ್ಕೂ ಮೊದಲು ಪರೀಕ್ಷೆಯಲ್ಲಿ ನಡೆದ ಅಕ್ರಮ ಎಂತಹದ್ದು ಎಂದು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿತು.
ಎರಡು ಅಂಶಗಳ ಮೇಲೆ ಕೇಂದ್ರ ಬದಲಾವಣೆ ಸಾಧ್ಯ ಅಲ್ಲವೇ ಎಂದು ಸಿಜೆಐ ಕೇಳಿದರು, ಕೆಲವು ವಿದ್ಯಾರ್ಥಿಗಳು ಕೇಂದ್ರವನ್ನು ತಿದ್ದುಪಡಿ ಮಾಡಿದ್ದಾರೆ. ಕೇಂದ್ರ ಬದಲಾವಣೆಗೆ ಅವಕಾಶವನ್ನು ವೆಬ್ ಸೈಟ್ನಲ್ಲಿ ಕೊಟ್ಟಿರುತ್ತೇವೆ ಎಂದು ಎನ್ಟಿಎ ಸ್ಪಷ್ಟಪಡಿಸಿತು. ಅದಕ್ಕೆ ಸಿಜೆಐ ಮಾತನಾಡಿ, ಅಂದರೆ ಮೂಲ ಮತ್ತು ಬದಲಾಯಿಸಿದ ಕೇಂದ್ರಗಳ ವಿವರ ನಿಮ್ಮಲ್ಲಿ ಇಲ್ಲ ಎಂದು ಕೇಳಿದರು. ಪ್ರತಿಕ್ರಿಯಿಸಿದ ಎನ್ಟಿಎ, ಆ ರೀತಿಯ ವ್ಯವಸ್ಥೆ ನಮ್ಮ ಬಳಿ ಇಲ್ಲ ಎಂದು ಎನ್ಟಿಎ ಸ್ಪಷ್ಟಪಡಿಸಿತು.
ನಾನು ಟಾಪ್ 100 ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಮಾಡಿದ್ದೇನೆ. ಆಂಧ್ರಪ್ರದೇಶದ 7, ಬಿಹಾರ 7, ಹರಿಯಾಣ 4, ದೆಹಲಿ, 6, ಮಹಾರಾಷ್ಟ್ರ 4, ತಮಿಳುನಾಡು 6 ಇತ್ಯಾದಿ ಟಾಪ್ 100 ಅನ್ನು 12 ರಾಜ್ಯಗಳಲ್ಲಿ ವಿತರಿಸಲಾಗಿದೆ ಎಂದು ತೋರಿಸುತ್ತದೆ. ಒಂದು ಕೇಂದ್ರಾಡಳಿತ ಪ್ರದೇಶ ಕೂಡಾ. ಮರುಪರೀಕ್ಷೆ ತೆಗೆದುಕೊಂಡ 1,563 ರಲ್ಲಿ ಎಷ್ಟು ಮಂದಿ ಟಾಪ್ 100 ರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ ಎನ್ಟಿಎ ನಮಗೆ ಅದನ್ನು ಹೇಳುತ್ತದೆ ಎಂದು ಸಿಜೆಐ ತಿಳಿಸಿದ್ದಾರೆ.