ಬಂದೂಕು ತೋರಿ ಅಡುಗೆ ಮಾಡಲು ಒತ್ತಾಯಿಸಿದ್ದ ಉಗ್ರರು
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ದಾಳಿ ಮಾಡುವ ಮೊದಲು ಉಗ್ರರು ಗ್ರಾಮಸ್ಥರಿಗೆ ಬಂದೂಕು ತೋರಿಸಿ ಅಡುಗೆ ಮಾಡುವಂತೆ ಒತ್ತಾಯಿಸಿದ್ದರು ಎಂದು ವರದಿಯಾಗಿದೆ. ದಾಳಿಯ ಸಮಯದಲ್ಲಿ ಉಗ್ರರು ಬಾಡಿ ಕ್ಯಾಮೆರಾ ಧರಿಸಿದ್ದರು. ಅಷ್ಟೇ ಅಲ್ಲದೇ ಸೇನೆಯ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಮುಂದಾಗಿದ್ದರು.
ಕಥುವಾ ಜಿಲ್ಲೆಯ ಬದ್ನೋಟಾ ಗ್ರಾಮದ ಬಳಿಯ ಕಡಿದಾದ ಮಚೇಡಿ-ಕಿಂಡ್ಲಿ-ಮಲ್ಹಾರ್ ಪರ್ವತದ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಹಿರಿಯ ಅಧಿಕಾರಿ ಸೇರಿ ಐವರು ಹುತಾತ್ಮರಾಗಿದ್ದರು.
ಭಯೋತ್ಪಾದಕರು ಕಡಿದಾದ ರಸ್ತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಹೊಂಚು ಹಾಕಿ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಕೂಡಲೇ ಈ ಜಾಗಗಳಿಗೆ ಸೈನಿಕರನ್ನು ಕಳುಹಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈ ಕೃತ್ಯ ಸಂಬಂಧ 20ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ,
ಕಥುವಾ ದಾಳಿಯನ್ನು ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ್ದು, ಅವರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ.
ಭಯೋತ್ಪಾದಕರು ಸ್ಥಳೀಯ ಬೆಂಬಲಿಗರ ಸಹಾಯದಿಂದ ಈ ಪ್ರದೇಶದಲ್ಲಿ ಹೊಂಚು ಹಾಕಿ ದಾಳಿ ಮಾಡಿದ್ದಾರೆ. ಉಗ್ರರು M4 ಕಾರ್ಬೈನ್ ರೈಫಲ್ಗಳು ಮತ್ತು ಸ್ಫೋಟಕ ಸಾಧನಗಳು ಸೇರಿದಂತೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವಾಲಯವು ಸೈನಿಕರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಇದಕ್ಕೆ ಪ್ರತೀಕಾರ ತೀರಿಸಲಾಗುವುದು ಎಂದು ಹೇಳಿದೆ