ಬಿಹಾರದಲ್ಲಿ ಮೋದಿ ಚುನಾವಣಾ ಪ್ರಚಾರ – ಆರ್ಜೆಡಿ ವಿರುದ್ಧ ವಾಗ್ದಾಳಿ
ಪಾಟ್ನಾ : ಅವರ ಕಾಲದಲ್ಲಿ ಬಡವರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಭೂಮಿ ಕಸಿದುಕೊಳ್ಳಲಾಯಿತು, ಕಿಡ್ನಾಪ್ ಉದ್ಯಮಕ್ಕೆ ಹೆಸರಾದವರು ರಾಜ್ಯದಲ್ಲಿ ರಸ್ತೆಗಳನ್ನು ನಿರ್ಮಿಸಲು ಬಿಡಲಿಲ್ಲ, ಬಿಹಾರವನ್ನು ಲ್ಯಾಂಟರ್ನ್ ಯುಗದಲ್ಲಿ ಇರಿಸಲು ಅವರು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರ್ಜೆಡಿ ಪಕ್ಷ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಜಮುಯಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಅವರು ವಿಪಕ್ಷಗಳ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿದರು. ಬಿಹಾರದ 85 ಲಕ್ಷಕ್ಕೂ ಹೆಚ್ಚು ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ, ಜಮುಯಿಯಲ್ಲಿ ಮಾತ್ರ ಈ ಯೋಜನೆಯಡಿ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ 850 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿದ್ದಾರೆ. ದುರಹಂಕಾರಿ ಸಮ್ಮಿಶ್ರ ಸರ್ಕಾರವಾಗಿದಲ್ಲಿ ನೇರವಾಗಿ ಅಕೌಂಟ್ಗೆ ಹಣ ಕಳುಹಿಸುವ ಯೋಜನೆ ಇತ್ತೇ? ಇವರು ನಿಮ್ಮ ಹಣ ಲೂಟಿ ಮಾಡಿ ಹಣ ಸಿಕ್ಕಿದೆ ಎಂದು ಸಹಿ ಹಾಕುತ್ತಿದ್ದರು.
ಒಬ್ಬರನ್ನೊಬ್ಬರು ಜೈಲಿಗೆ ಹಾಕಲು ಆಗ್ರಹಿಸುವವರು ಇಂದು ಮೋದಿ ಬಂದಿದ್ದಾರೆ ಎಂದು ಹೆದರಿಸುತ್ತಿದ್ದಾರೆ. ಭ್ರಷ್ಟರು ತೆರೆದ ಕಿವಿಯಿಂದ ಕೇಳಬೇಕು, ಮೋದಿ ಬಂದಿಲ್ಲ ಬದಲಿಗೆ 140 ಕೋಟಿ ದೇಶವಾಸಿಗಳ ಕೋಪ ಹೊರಬಂದಿದೆ. ನಾವು ನಿತೀಶ್ ಕುಮಾರ್ ಅವರೊಂದಿಗೆ ಇದ್ದು ಬಿಹಾರದಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ, ಬಿಹಾರದ ಅಭಿವೃದ್ದಿಗೆ ಪಣ ತೊಟ್ಟಿದ್ದೇವೆ ಎಂದರು.
ಜಂಗಲ್ ರಾಜ್ನಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿತ್ತು, ಇಲ್ಲಿ ಅಪಹರಣವೇ ಉದ್ಯಮವಾಗಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ರಾಮ ಮಂದಿರ ನಿರ್ಮಾಣವನ್ನು ತಡೆಯಲು ಆರ್ಜೆಡಿ-ಕಾಂಗ್ರೆಸ್ ತನ್ನೆಲ್ಲ ಶಕ್ತಿಯನ್ನು ಹಾಕಿದೆ. ಇಂದಿಗೂ ಈ ಜನರು ರಾಮಮಂದಿರವನ್ನು ಗೇಲಿ ಮಾಡುತ್ತಾರೆ. ಇದೇ ಜನರು ಕರ್ಪೂರಿ ಠಾಕೂರ್ ಅವರನ್ನು ಅವಮಾನಿಸುತ್ತಿದ್ದರು. ನಮ್ಮ ಸರ್ಕಾರ ಬಿಹಾರದ ಗೌರವ್ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದಾಗ ಈ ಜನರು ಪ್ರತಿಭಟಿಸಿದರು. ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡುವುದನ್ನು ಇದೇ ಜನರು ವಿರೋಧಿಸಿದರು. ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದನ್ನು ವಿರೋಧಿಸಿದರು ಎಂದು ಆರೋಪಿಸಿದರು.