ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

ಭಾರತ ಸಮನ್ಸ್‌ ನೀಡಿದರೂ ಕೇಜ್ರಿವಾಲ್‌ ಬಂಧನ ಬಗ್ಗೆ ಅಮೆರಿಕ ಮತ್ತೆ ಪ್ರತಿಕ್ರಿಯೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನ ವಿಚಾರವಾಗಿ ಟೀಕೆಗಳನ್ನು ವ್ಯಕ್ತಪಡಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿ ಸಮನ್ಸ್‌ ಪಡೆದಿದ್ದ ಅಮೆರಿಕ ಮತ್ತೆ ಪ್ರತಿಕ್ರಿಯೆ ನೀಡಿದೆ. ದೆಹಲಿ ಸಿಎಂ ಕೇಜ್ರಿವಾಲ್‌ ಬಂಧನ ಪ್ರಕರಣವನ್ನು ನಾವು ಗಮನಿಸಿದ್ದೇವೆ. ಇಂತಹ ಪ್ರಕರಣಗಳಲ್ಲಿ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳ ಅಗತ್ಯವಿದೆ ಎಂದು ಯುಎಸ್‌ ಪುನರುಚ್ಚರಿಸಿದೆ.

ತೆರಿಗೆ ಅಧಿಕಾರಿಗಳು ತಮ್ಮ ಕೆಲವು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಗಳ ಬಗ್ಗೆಯೂ ನಮಗೆ ತಿಳಿದಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸವಾಲಾಗುವ ರೀತಿಯಲ್ಲಿ ತೆರಿಗೆ ಅಧಿಕಾರಿಗಳು ತಮ್ಮ ಕೆಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಗಳ ಬಗ್ಗೆ ನಮಗೆ ತಿಳಿದಿದೆ. ಈ ಪ್ರತಿಯೊಂದು ಸಮಸ್ಯೆಗಳಿಗೆ ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಮಿಲ್ಲರ್‌ ತಿಳಿಸಿದ್ದಾರೆ.

ಭಾರತವು ದೆಹಲಿಯಲ್ಲಿ ಮಿಷನ್‌ನ ಹಂಗಾಮಿ ಡೆಪ್ಯುಟಿ ಚೀಫ್ ಗ್ಲೋರಿಯಾ ಬರ್ಬೆನಾ ಅವರನ್ನು ಕರೆಸಿದ್ದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾವುದೇ ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಆದರೆ ನಾವು ಸಾರ್ವಜನಿಕವಾಗಿ ಹೇಳಿರುವುದನ್ನು ನಾನು ಇಲ್ಲಿ ಹೇಳಿದ್ದೇನೆ. ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಇದಕ್ಕೆ ಯಾರೂ ವಿರೋಧಿಸಬಾರದು ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಂಗಾಮಿ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ತನ್ನ ಕಚೇರಿಗೆ ಕರೆಸಿತ್ತು. ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಭೆ ನಡೆಯಿತು. ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಎಂಇಎ, ಭಾರತದಲ್ಲಿ ಕೆಲವು ಕಾನೂನು ಪ್ರಕ್ರಿಯೆಗಳ ಬಗ್ಗೆ US ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವಕ್ತಾರರ ಟೀಕೆಗಳಿಗೆ ನಾವು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿತ್ತು.

ರಾಜತಾಂತ್ರಿಕತೆಯಲ್ಲಿ, ರಾಜ್ಯಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಜವಾಬ್ದಾರಿಯು ಸಹ ಪ್ರಜಾಪ್ರಭುತ್ವಗಳ ವಿಷಯದಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಇದು ಅನಾರೋಗ್ಯಕರ ಪೂರ್ವನಿದರ್ಶನಗಳನ್ನು ಸ್ಥಾಪಿಸಲು ಕೊನೆಗೊಳ್ಳಬಹುದು ಎಂದು ಹೇಳಿಕೆ ತಿಳಿಸಿದೆ.

Previous Post
ಮುಖ್ಯಮಂತ್ರಿ ಸ್ಥಾನದಿಂದ ಕೇಜ್ರಿವಾಲ್ ವಜಾಗೊಳಿಸಲು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ
Next Post
ರಾಯ್ ಬರೇಲಿ, ಅಮೇಥಿಯಿಂದ ಸ್ಪರ್ಧಿಸಲು ಗಾಂಧಿ ಕುಟುಂಬದ ನಿರಾಸಕ್ತಿ?

Recent News