ಮಂಡ್ಯದಲ್ಲಿ ಮಾಜಿ ಸಿಎಂ ಎಚ್ಡಿಕೆಗೆ ಭರ್ಜರಿ ಗೆಲುವು ಫಿಕ್ಸ್! ಸಕ್ಕರೆ ನಾಡಿನತ್ತ ಕುಮಾರಣ್ಣನ ಪಯಣ
ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಬಹುತೇಕ ಪ್ರಚಂಡ ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ.
ಬೆಳಗ್ಗೆ 11 ರ ಹೊತ್ತಿಗೆ ಎಚ್.ಡಿ.
ಕುಮಾರಸ್ವಾಮಿ ಅವರು 1 ಲಕ್ಷದ 45 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 8ನೇ ಸುತ್ತಿನ ಮತಎಣಿಕೆ ಮುಕ್ತಾಯದ ಹೊತ್ತಿಗೆ ಎಚ್ಡಿಕೆ 3,72,848 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಅವರು 2,27,809 ಮತಗಳನ್ನು ಪಡೆದಿದ್ದಾರೆ. ಬರೋಬ್ಬರಿ 1 ಲಕ್ಷದ 45 ಸಾವಿರದ ಅಂತರದೊಂದಿಗೆ ಎಚ್ಡಿಕೆ ಮಂಡ್ಯದ ಲೋಕಸಭೆಯ ಅಧಿಪತಿಯಾಗುವತ್ತ ಲಗ್ಗೆ ಇಟ್ಟಿದ್ದಾರೆ.
ಗೆಲುವು ಖಚಿತವಾಗುತ್ತಿದ್ದಂತೆ ಮಾಜಿ ಸಿಎಂ ಎಚ್ಡಿಕೆ ಬೆಂಗಳೂರಿನಿಂದ ಮಂಡ್ಯದತ್ತ ಹೊರಟಿದ್ದಾರೆ. ಮಂಡ್ಯ ಜನರ ಜೊತೆ ಇದ್ದು ತಮ್ಮ ಗೆಲುವನ್ನು ಸಂಭ್ರಮಿಸಿ, ಜನರಿಗೆ ಧನ್ಯವಾದ ಹೇಳುವ ಸಲುವಾಗಿ ಎಚ್ಡಿಕೆ ಮಂಡ್ಯದತ್ತ ಪ್ರಯಾಣ ಬೆಳೆಸಿದ್ದಾರೆ. ಮಂಡ್ಯ ಜನರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸ್ಥಾನಕ್ಕೆ ಕುಸಿದಿದ್ದ ಜೆಡಿಎಸ್ ಈ ಬಾರಿ ಪುಟಿದೇಳುವ ಲಕ್ಷಣಗಳು ಕಾಣುತ್ತಿವೆ. ಬಿಜೆಪಿ ಜತೆ ಕೈಜೋಡಿಸಿ ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ. ಮಂಡ್ಯದಲ್ಲಿ ಗೆಲುವು ಖಚಿತವಾಗಿದೆ. ಉಳಿದಂತೆ ಕೋಲಾರ ಮತ್ತು ಹಾಸನದಲ್ಲಿ ಜೆಡಿಎಸ್ ಮುನ್ನಡೆಯನ್ನು ಸಾಧಿಸಿದೆ.
ಕಳೆದ ಬಾರಿ ಜೆಡಿಎಸ್ ಕಾಂಗ್ರೆಸ್ ಜತೆ ಕೈಜೋಡಿಸಿತ್ತು. ಆದರೆ, ಎರಡೂ ಪಕ್ಷಗಳು ಕೇವಲ ಒಂದೊಂದು ಸ್ಥಾನಕ್ಕೆ ಮಾತ್ರ ತೃಪ್ತಿಪಟ್ಟುಕೊಂಡಿದ್ದವು. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ರಾಜಕೀಯದಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಟಾನಿಕ್ ಆಗಿ ಕೆಲಸ ಮಾಡಿದ್ದು, ಜೆಡಿಎಸ್ ಮತ್ತೆ ಲಯ ಕಂಡುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.