ಮತದಾನದ ವಿವರ ತಡವಾಗಿ ಪ್ರಕಟ, ಮತದಾರರ ಮಾಹಿತಿ ಮಾಯ: ಖರ್ಗೆ

ಮತದಾನದ ವಿವರ ತಡವಾಗಿ ಪ್ರಕಟ, ಮತದಾರರ ಮಾಹಿತಿ ಮಾಯ: ಖರ್ಗೆ

ನವದೆಹಲಿ, ಮೇ 7: ಲೋಕಸಭೆ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಬಹಳ ತಡವಾಗಿ ಬಿಡುಗಡೆಗೊಳಿಸಿರುವುದು ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನೋಂದಾಯಿತ ಮತದಾರರ ಮಾಹಿತಿ ಕಾಣೆಯಾಗಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಮತದಾನದ ಫಲಿತಾಂಶ ಬದಲಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರಿಗೆ ಈ ಕುರಿತು ವಿವರವಾದ ಪತ್ರವೊಂದನ್ನು ಬರೆದಿದ್ದಾರೆ.
ಪತ್ರದಲ್ಲಿ, ಈ ಬಾರಿಯ ಲೋಕಸಭೆ ಚುನಾವಣೆ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟವಾಗಿದೆ. ಇತ್ತೀಚಿನ ಬೆಳವಣಿಗೆಗಳಿಂದ ಭಾರತೀಯ ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಮೊದಲ ಮತ್ತು ಎರಡನೇ ಹಂತದ ಮತದಾನದ ಅಂಕಿ ಅಂಶಗಳನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ತಡವಾಗಿ ಬಹಿರಂಗಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೂರನೇ ಹಂತದ ಮತದಾನಕ್ಕೆ ನೋಂದಾಯಿತ ಮತದಾರರ ಅಂತಿಮ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲಎಂದು ವಿವಿಧ ಮಾಧ್ಯಮಗಳ ವರದಿಗಳ ಮೂಲಕ ತಿಳಿದು ಬಂದಿದೆ. ಇದು ಅತ್ಯಂತ ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತದ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಕರಾಳ ಛಾಯೆ ಮೂಡಿಸಿದೆ. ಚುನಾವಣಾ ಆಯೋಗ ಭಾರತದ ರಾಜ್ಯಗಳು ಮತ್ತು ಅದರ ಜನರ ಸಾಮೂಹಿಕ ಪ್ರಯತ್ನದಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಮೊದಲ ಮತ್ತು ಎರಡನೇ ಹಂತದ ಅಂತಿಮ ಮತದಾನದ ಶೇಕಡಾವಾರು ಅಂಕಿ ಅಂಶಗಳ ಬಿಡುಗಡೆಯಲ್ಲಿನ ಅತಿಯಾದ ವಿಳಂಬ ಅಂಕಿ ಅಂಶಗಳ ಗುಣಮಟ್ಟದ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟು ಹಾಕಿದೆ. ನನ್ನ 52 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ವಿಳಂಬವಾಗಿ ಮತದಾನದ ಅಂಕಿ ಅಂಶ ಬಿಡುಗಡೆ ಮಾಡಿರುವುದನ್ನು ಎಂದಿಗೂ ನೋಡಿಲ್ಲ. ಮತದಾನ ನಡೆದ ಗಂಟೆಗಳ ಒಳಗೆ ಅಂಕಿ ಅಂಶ ಬಿಡುಗಡೆಯಾಗುತ್ತಿತ್ತು. ಹಾಗಾಗಿ, ಈ ಕೆಳಗಿನ ಪ್ರಶ್ನೆಗಳನ್ನು ನಾವು ಕೇಳಬೇಕಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸ್ತಾಪಿಸಿದ ಪ್ರಶ್ನೆಗಳು ಹೀಗಿವೆ…
1. ಏಪ್ರಿಲ್ 30, 2024ರಂದು ಚುನಾವಣಾ ಆಯೋಗ 2024ರ ಲೋಕಸಭೆಯ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಶೇಕಡವಾರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಮೊದಲ ಹಂತದ ಮತದಾನದ 11 ದಿನಗಳ ನಂತರ (19 ಏಪ್ರಿಲ್ 2024) ಮತ್ತು ಎರಡನೇ ಹಂತದ ಮತದಾನದ 4 ದಿನಗಳ ನಂತರ (26 ಏಪ್ರಿಲ್ 2024) ಡೇಟಾ ಬಿಡುಗಡೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ನಮ್ಮ ಮೊದಲ ಪ್ರಶ್ನೆ ಏನೆಂದರೆ.. ಆಯೋಗವು ಮತದಾನದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲು ಇಷ್ಟೊಂದು ವಿಳಂಬ ಮಾಡಿದ್ದು ಏಕೆ?

2. ಈ ಹಿಂದೆಯೆಲ್ಲ ಆಯೋಗವು ಮತದಾನದ ನಡೆದ 24 ಗಂಟೆಗಳ ಒಳಗೆ ಅಂತಿಮ ಅಂಕಿ ಅಂಶಗಳನ್ನು ಪ್ರಕಟಿಸುತ್ತಿತ್ತು. ಈ ಬಾರಿ ಏನು ಬದಲಾಗಿದೆ? ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಕಾರ್ಯಕರ್ತರು ಪದೇ ಪದೇ ಪ್ರಶ್ನಿಸುತ್ತಿದ್ದರೂ, ವಿಳಂಬವನ್ನು ಸಮರ್ಥಿಸಲು ಆಯೋಗ ಯಾವುದೇ ಸ್ಪಷ್ಟೀಕರಣವನ್ನು ನೀಡಲು ವಿಫಲವಾಗಿದ್ದು ಏಕೆ? ಇವಿಎಂಗಳಲ್ಲಿ ಸಮಸ್ಯೆ ಇದೆಯೇ?

3. ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ನಡೆದ ಮತದಾನದ ಅಂಕಿ ಅಂಶಗಳನ್ನು19 ಏಪ್ರಿಲ್ 2024 ರಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಿದ್ದ ಚುನಾವಣಾ ಆಯೋಗ, ಅಂದಾಜು 60% ಮತದಾನವಾಗಿದೆ ಎಂದಿತ್ತು. ಎರಡನೇ ಹಂತದಲ್ಲಿ 88 ಸ್ಥಾನಗಳಿಗೆ ನಡೆದ ಅಂದಾಜು ಮತದಾನದ ಪ್ರಮಾಣ 60.96 % ಎಂದಿತ್ತು.

ಈ ಎಲ್ಲಾ ಅಂಕಿ ಅಂಶಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಆದರೆ, ಏಪ್ರಿಲ್ 20 ರಂದು, ಆಯೋಗವು ಮೊದಲ ಹಂತದ ಮತದಾನದ ಪ್ರಮಾಣವನ್ನು 65.5% ಕ್ಕೆ ಮತ್ತು 27ರಂದು ಎರಡನೇ ಹಂತದ ಮತದಾನದ ಪ್ರಮಾಣವನ್ನು 66.7% ಕ್ಕೆ ಹೆಚ್ಚಿಸಿದೆ. ಅಂತಿಮವಾಗಿ ಏಪ್ರಿಲ್ 30 ರಂದು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಮೊದಲ ಹಂತದಲ್ಲಿ 66.14% ಮತ್ತು ಎರಡನೇ ಹಂತದಲ್ಲಿ 66.71% ಮತದಾನವಾಗಿದೆ ಎಂದು ದೃಢೀಕರಿಸಿದೆ. ಈ ರೀತಿ ಬದಲಾವಣೆಯಾಗಿದ್ದು ಏಕೆ?

4. ಏಪ್ರಿಲ್ 19ರಂದು ಮೊದಲ ಹಂತದ ಮತದಾನದ ದಿನ ಸಂಜೆ 7 ಗಂಟೆಯ ಹೊತ್ತಿಗೆ ಬಿಡುಗಡೆ ಮಾಡಲಾದ ಅಂದಾಜು ಅಂಕಿ ಅಂಶಕ್ಕಿಂತ, ಏಪ್ರಿಲ್ 30ರಂದು ಬಿಡುಗಡೆ ಮಾಡಲಾದ ಅಂತಿಮ ಅಂಕಿ ಅಂಶದಲ್ಲಿ ಮತದಾನದ ಪ್ರಮಾಣ ಶೇ. 5.5ರಷ್ಟು ಹೆಚ್ಚಳವಾಗಿದ್ದು ಏಕೆ? ಏಪ್ರಿಲ್ 26ರಂದು ಎರಡನೇ ಹಂತದ ಮತದಾನದ ದಿನ ಸಂಜೆ 7 ಗಂಟೆಯ ಹೊತ್ತಿಗೆ ಬಿಡುಗಡೆ ಮಾಡಲಾದ ಅಂದಾಜು ಅಂಕಿ ಅಂಶಕ್ಕಿಂತ, ಏಪ್ರಿಲ್ 30ರಂದು ಬಿಡುಗಡೆ ಮಾಡಲಾದ ಅಂತಿಮ ಅಂಕಿ ಅಂಶದಲ್ಲಿ ಮತದಾನ ಪ್ರಮಾಣ 5.74ರಷ್ಟು ಹೆಚ್ಚಳವಾಗಿದ್ದು ಹೇಗೆ?

5.ಪ್ರತೀ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ನೋಂದಾಯಿತ ಮತದಾರರು ಮತ್ತು ಹಕ್ಕು ಚಲಾಯಿಸಿದ ಮತದಾರರ ಅಂಕಿ ಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ ಏಕೆ? ಆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೆ ಶೇ.5ರಷ್ಟು ಮತದಾನ ಹೇಗೆ ಹೆಚ್ಚಾಯಿತು ಎಂದು ನಮಗೆ ತಿಳಿದುಕೊಳ್ಳಬಹುದು.
ಸಾರ್ವಜನಿಕ ವಲಯದಲ್ಲಿ ಎದ್ದಿರುವ ಈ ಪ್ರಶ್ನೆಗಳನ್ನು ನಿವಾರಿಸಲು ಚುನಾವಣಾ ಆಯೋಗ ಪ್ರತಿ ಲೋಕಸಭೆ ಕ್ಷೇತ್ರದ ಮತದಾರರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೆ ಸಾಲದು. ಪ್ರತಿ ಮತಗಟ್ಟೆಯಲ್ಲಿನ ಮತದಾನದ ದತ್ತಾಂಶವನ್ನೂ ಬಿಡುಗಡೆ ಮಾಡಬೇಕು. ಇದರ ಜೊತೆಗೆ ಪ್ರತಿ ಮತಗಟ್ಟೆ, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಸಲ್ಲಿಸಿರುವ ದೂರುಗಳನ್ನು ತಿಳಿಸಬೇಕು ಎಂದು ಖರ್ಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಮೇಲೆ ಉಲ್ಲೇಖಿಸಿದ ಎಲ್ಲಾ ಪ್ರಶ್ನೆಗಳನ್ನು ಇಂಡಿಯಾ ಮೈತ್ರಿಕೂಟದ ನಾಯಕರು ಎತ್ತಬೇಕು. ಈ ಮೂಲಕ ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಒಗ್ಗಟ್ಟಿನ ಪ್ರಯತ್ನ ಮಾಡಬೇಕು ಎಂದು ಖರ್ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

Previous Post
ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸ್ಸು ಮಾಡಿದ ಎಲ್‌ಜಿ
Next Post
ಪುಷ್ಪ ಸಿನಿಮಾದಿಂದ ವೃತ್ತಿ ಬದುಕಿನಲ್ಲಿ ಬದಲಾವಣೆಯಾಗಲಿಲ್ಲ : ಫಾಸಿಲ್

Recent News