ಮಹರಾಷ್ಟ್ರ: ಶಿಂಧೆ, ಅಜಿತ್‌ ಬಣದ 40 ಶಾಸಕರು ಘರ್ ವಾಪ್ಸಿ?

ಮಹರಾಷ್ಟ್ರ: ಶಿಂಧೆ, ಅಜಿತ್‌ ಬಣದ 40 ಶಾಸಕರು ಘರ್ ವಾಪ್ಸಿ?

ಮುಂಬೈ, ಜೂ. 12: ಮಹರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ 40 ಶಾಸಕರು ಘರ್ ವಾಪ್ಸಿಗೆ ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದಿಂದ ತನ್ನ ಶಕ್ತಿಯು ಹಿಮ್ಮಡಿಯಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶವು ರಾಜ್ಯದಲ್ಲಿ ಯಾವ ದಿಕ್ಕಿನಲ್ಲಿ ಗಾಳಿ ಬೀಸುತ್ತಿದೆ ಎನ್ನುವುದನ್ನು ತೋರಿಸಿವೆ. ಇದರ ಪರಿಣಾಮ ವಿಧಾನಸಭಾ ಚುನಾವಣೆಗಳಲ್ಲಿಯೂ ಮುಂದುವರಿಯಲಿದೆ ಎಂದು ವಾಡೆತ್ತಿವಾರ್ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ – ಕಾಂಗ್ರೆಸ್, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನಮಗೆ ವಿಶ್ವಾಸವಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 150ರಲ್ಲಿ ಎಂವಿಎ ಮುಂದಿದೆ ಮತ್ತು 130 ಕ್ಷೇತ್ರಗಳಲ್ಲಿ ಮಹಾಯುತಿ (ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ) ಮುಂದಿದೆ ಎನ್ನುವುದನ್ನು ತೋರಿಸಿದೆ ಎಂದು ವಾಡೆತ್ತಿವಾರ್ ಹೇಳಿದ್ದಾರೆ.
ಎಂವಿಎ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಶಿಂಧೆ ಶಿವಸೇನೆ ಮತ್ತು ಎನ್ಸಿಪಿ ಬಣಗಳ 40 ಶಾಸಕರು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಇದೇ ಕಾರಣಕ್ಕೆ ಘರ್ ವಾಪ್ಸಿಗೆ ಮನವಿ ಮಾಡಿಕೊಂಡು ತಮ್ಮ ಮೂಲಪಕ್ಷಗಳ ನಾಯಕರಿಗೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ರಾಜ್ಯಾಧ್ಯಕ್ಷ ಜಯಂತ್ ಅವರು ಶಿಂಧೆ ಮತ್ತು ಅಜಿತ್‌ ಬಣಕ್ಕೆ ಸೇರಿದ ಕೆಲವು ಶಾಸಕರು ಪಕ್ಷಕ್ಕೆ ವಾಪಾಸ್ಸು ಬರಲು ಮನವಿಯನ್ನು ನೀಡಿರುವುದನ್ನು ದೃಢಪಡಿಸಿದ್ದಾರೆ.
ಕೇಂದ್ರೀಯ ಸಂಸ್ಥೆಗಳಿಂದ ರಕ್ಷಣೆಗಾಗಿ ನಾವು ಬಿಜೆಪಿ ಜೊತೆಗಿದ್ದೇವೆ. ಬಿಜೆಪಿ 2014 ಮತ್ತು 2019ರಲ್ಲಿ ಇದ್ದಷ್ಟು ಶಕ್ತಿಶಾಲಿಯಾಗಿಲ್ಲ. ಬಿಜೆಪಿ ಮೈತ್ರಿಕೂಟದ ಪಾಲುದಾರರು, ಮುಖ್ಯವಾಗಿ ಜೆಡಿ(ಯು) ಮತ್ತು ಟಿಡಿಪಿ ಬೇರೆ ದಾರಿ ಹಿಡಿದರೆ, ಮೋದಿ ಸರ್ಕಾರ ಪತನಗೊಳ್ಳಬಹುದು ಎಂದು ಅಜಿತ್ ಪವಾರ್ ಬಣದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿಗೂ ನಮಗೂ ಮೂಲ ಸಂಬಂಧವಿಲ್ಲ, ನಮ್ಮದು ಕೆಲಸದ ಸಂಬಂಧ. ನಮ್ಮ ಸಿದ್ಧಾಂತಗಳು ಹೊಂದಿಕೆಯಾಗುವುದಿಲ್ಲ. ಬಿಜೆಪಿಯೊಂದಿಗೆ ಉಳಿಯುವ ಮೂಲಕ ನಾವು ನಮ್ಮ ಜಾತ್ಯತೀತ ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಮತ ಬ್ಯಾಂಕನ್ನು ಕಳೆದುಕೊಂಡಿದ್ದೇವೆ. ನಾವು ಅದನ್ನು ಮರಳಿ ಪಡೆಯಲು ಬಯಸುತ್ತೇವೆ ಎಂದು ಅಜಿತ್‌ ಬಣದ ನಾಯಕರೋರ್ವರು ಹೇಳಿದ್ದಾರೆ.

Previous Post
ಆಂಧ್ರ ಸಿಎಂ ಆಗಿ ನಾಯ್ಡು ಪ್ರಮಾಣವಚನ
Next Post
ಘರ್ ವಾಪ್ಸಿಗೆ ತಯಾರಿರುವ ಎನ್‌ಸಿಪಿ ಶಾಸಕರ ಭೇಟಿಗೆ ಸಿದ್ಧ: ಸುಪ್ರಿಯಾ ಸುಳೆ

Recent News