ಮೋದಿ ಸಂಪುಟದಿಂದ ಹೊರಬರಲಿದ್ದಾರಾ ಸುರೇಶ್ ಗೋಪಿ?

ಮೋದಿ ಸಂಪುಟದಿಂದ ಹೊರಬರಲಿದ್ದಾರಾ ಸುರೇಶ್ ಗೋಪಿ?

ನವದೆಹಲಿ, ಜೂ. 10: ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಟ, ರಾಜಕಾರಣಿ ಸುರೇಶ್ ಗೋಪಿ ಅವರು ಹೊಸ ಜವಾಬ್ದಾರಿಯಿಂದ ಮುಕ್ತರಾಗಲು ಬಯಸುತ್ತಿದ್ದಾರೆ ಎಂದು ಹೇಳುವ ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ. ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಸುರೇಶ್ ಗೋಪಿ ಅವರು ಸೋಮವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲವು ಮಾಧ್ಯಮ ವೇದಿಕೆಗಳು ನಾನು ಮೋದಿ ಸರ್ಕಾರದ ಮಂತ್ರಿ ಮಂಡಳಿಗೆ ರಾಜೀನಾಮೆ ನೀಡಲಿದ್ದೇನೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿವೆ. ಇದು ನಿಜವಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ ಎಂದಿದ್ದಾರೆ.
ಮಲಯಾಳಂ ಚಿತ್ರರಂಗದ ಪ್ರಮುಖ ನಟರಾದ ಸುರೇಶ್ ಗೋಪಿ ಅವರು ಈಗಷ್ಟೇ ಮುಗಿದ ಲೋಕಸಭೆ ಚುನಾವಣೆಯಲ್ಲಿ ಕೇರಳದಿಂದ ಚುನಾಯಿತರಾದ ಮೊದಲ ಬಿಜೆಪಿ ಸಂಸದರಾಗಿದ್ದಾರೆ. ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ 74,686 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸುರೇಶ್ ಗೋಪಿ ರಾಜ್ಯ ಸಚಿವರಾಗಿ ಸೇರ್ಪಡೆಗೊಳ್ಳುವುದರ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಕ್ಯಾಬಿನೆಟ್ ಮಂತ್ರಿಯಾಗಿ ಅಥವಾ ಕನಿಷ್ಠ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ನೇಮಕಗೊಳ್ಳಲು ಅವರು ಆಶಿಸಿದ್ದರು ಎಂದು ಈ ಹಿಂದೆ ಬಿಜೆಪಿ ನಾಯಕರೊಬ್ಬರು ಹೇಳಿದ್ದರು ಎಂದು ಹೇಳಲಾಗಿದೆ. ಆದರೆ, ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್, ದಕ್ಷಿಣ ರಾಜ್ಯದ ಪಕ್ಷದ ಘಟಕದಲ್ಲಿ ಸಿಬ್ಬಂದಿ ಬದಲಾವಣೆಯಾಗಲಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಅದೇ ವೇಳೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸುರೇಶ್ ಗೋಪಿ ಅವರಿಗೆ ಕ್ಯಾಬಿನೆಟ್ ಅಥವಾ (ಸ್ವತಂತ್ರ) ಉಸ್ತುವಾರಿಯನ್ನು ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳನ್ನು ಅವರು “ಫೇಕ್ ಸುದ್ದಿ” ಎಂದು ತಳ್ಳಿಹಾಕಿದರು. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಸುರೇಂದ್ರನ್, ಕೇರಳದ ಮಾಧ್ಯಮಗಳನ್ನು ಲೇವಡಿ ಮಾಡಿದ್ದು, ಪತ್ರಕರ್ತರ ಒಂದು ವಿಭಾಗವು ಬಿಜೆಪಿ ರಾಜ್ಯ ಘಟಕದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಹೇಳಿದರು.

ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಿಂದ ಗೋಪಿ ಅವರನ್ನು ಸೋಲಿಸಲು ಬಿಜೆಪಿ ರಾಜ್ಯ ಘಟಕ ಮುಂದಾಗಿದೆ ಎಂಬ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಿವೆ ಎಂದು ಅವರು ಆರೋಪಿಸಿದ್ದಾರೆ. ಆರಂಭದಲ್ಲಿ, ನೀವು (ಮಾಧ್ಯಮ) ಸುರೇಶ್ ಗೋಪಿ ಅವರನ್ನು ಸತ್ಯಜಿತ್ ರೇ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕೇರಳ ಬಿಜೆಪಿ ಘಟಕವು ಅವರನ್ನು ತಪ್ಪಿಸಲು ಯೋಜಿಸಿದೆ ಎಂದು ಆರೋಪಿಸಿದಿರಿ. ಸುರೇಶ್ ಗೋಪಿ ತ್ರಿಶ್ಶೂರ್‌ನಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೀರಿ. ಚುನಾವಣೆ ಘೋಷಣೆಯಾದಾಗ, ರಾಜ್ಯ ಬಿಜೆಪಿ ಘಟಕವು ಸುರೇಶ್ ಗೋಪಿಯನ್ನು ಸೋಲಿಸಲು ಪ್ರಯತ್ನಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದವು” ಎಂದು ಕೆ ಸುರೇಂದ್ರನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಜನರು ಸುಳ್ಳು ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ. “ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಧ್ಯಮದ ಒಂದು ವರ್ಗವೂ ಹೇಳಿಕೊಂಡಿದೆ. ಸಂಜೆ ನಿಮಗೆ (ಮಾಧ್ಯಮ) ಉಸ್ತುವಾರಿಯನ್ನು ಹಸ್ತಾಂತರಿಸುತ್ತೇನೆ. ಆಗಬಹುದೇ? ಎಂದು ಸುರೇಂದ್ರನ್ ಮಾಧ್ಯಮದವರಲ್ಲಿ ಕೇಳಿದ್ದಾರೆ. ಬಿಜೆಪಿ ಕೇರಳ ಘಟಕದಲ್ಲಿ ಇಬ್ಬರು ಕೇಂದ್ರ ಸಚಿವರಿದ್ದು, ಶೇ.20ರಷ್ಟು ಮತಗಳಿಕೆ ಹೆಚ್ಚಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.

Previous Post
ಮೋದಿ ಮೊದಲ ಸಂಪುಟ ಸಭೆ
Next Post
ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪದವಿ ನಿರಾಕರಿಸಿದ ಹಾರ್ವರ್ಡ್ ವಿವಿ

Recent News