ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಟಿಕೇಟ್ ಗಾಗಿ ಖಾವಿ ಪಟ್ಟು, ಮಾಜಿ ಸಿಎಂಗಳ ಭವಿಷ್ಯ ಹೈಕಮಾಂಡ್ ಕೈಯಲ್ಲಿ
ನವದೆಹಲಿ : ಲೋಕಸಭೆ ಚುನಾವಣೆ ಹಿನ್ನಲೆ ರಾಜ್ಯ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ. ಹಾಲಿ ಸಂಸದರಲ್ಲಿ ಹಲವು ಮಂದಿ ಆಡಳಿತ ವಿರೋಧಿ ಅಲೆ ಎದುರಿಸಿತ್ತಿದ್ದು ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಕಳೆದ ಬಾರಿ ರಾಜ್ಯ ಕೋರ್ ಕಮಿಟಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸರ್ಚೆ ವರದಿಗಳು ವ್ಯತಾಸವಾದ ಹಿನ್ನಲೆ ಹೊಸ ಸರ್ವೆ ವರದಿಯನ್ನು ಹೈಕಮಾಂಡ್ ತರಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಕೆಲವು ಹಾಲಿ ಸಂಸದರನ್ನು ಮುಂದುವರಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಈ ಬಗ್ಗೆ ಮತ್ತೊಂದು ವರದಿ ತರಿಸಿಕೊಂಡಿರುವ ಹೈಕಮಾಂಡ್ ವರದಿ ಪರಿಶೀಲನೆ ಬಳಿಕ ಅಂತಿಮ ತಿರ್ಮಾನಕ್ಕೆ ಬರುವ ಸಾಧ್ಯತೆಗಳಿದೆ ಎಂದು ಮೂಲಗಳು ಹೇಳಿವೆ. ಅಗತ್ಯ ಬಿದ್ದಲ್ಲಿ ರಾಜ್ಯ ನಾಯಕರ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಹೇಳಲಾಗಿದೆ.
ಮುಖ್ಯವಾಗಿ ಮೈಸೂರು, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಹಾವೇರಿ, ಉತ್ತರ ಕನ್ನಡ, ಚಿತ್ರದುರ್ಗ, ಬೀದರ್ ಬಗ್ಗೆ ಹೈಕಮಾಂಡ್ ಗಂಭೀರವಾಗಿ ಪರಿಶೀಲಿಸುತ್ತಿದೆ. ಇದರ ಜೊತೆಗೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಸ್ಪರ್ಧೆ ಬಗ್ಗೂ ಚಿಂತಿಸುತ್ತಿದೆ. ರಾಜ್ಯ ನಾಯಕರು ಹಾವೇರಿಯಿಂದ ಬೊಮ್ಮಾಯಿ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದು ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರ ಸ್ಪರ್ಧೆ ತಿರ್ಮಾನ ಹೈಕಮಾಂಡ್ಗೆ ಬಿಟ್ಟಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಸ್ಪರ್ಧಿಸಲು ಮೂವರು ಸ್ವಾಮೀಜಿಗಳು ಮುಂದೆ ಬಂದಿದ್ದಾರೆ, ರಾಜ್ಯ ನಾಯಕರ ಮೇಲೆ ವಿವಿಧ ಮೂಲಗಳ ಮೂಲಕ ಒತ್ತಡ ಹೇರುವ ಪ್ರಯತ್ನ ಆರಂಭಿಸಿದ್ದಾರೆ ಎಂದು ವಿಶ್ವಾನೀಯ ಮೂಲಗಳು ಹೇಳಿವೆ. ಬೀದರ್, ಬೆಳಗಾವಿ ಮತ್ತು ಚಿತ್ರದುರ್ಗದಿಂದ ಕೆಲವು ಸ್ವಾಮೀಜಿಗಳು ಆಸಕ್ತಿ ಹೊಂದಿದ್ದು ಆದರೆ ಖಾವಿಧಾರಿಗಳಿಗೆ ಟಿಕೇಟ್ ನೀಡಲು ರಾಜ್ಯ ನಾಯಕರು ಉತ್ಸುಕತೆ ತೋರಿಲ್ಲ, ಅಲ್ಲದೇ ರಾಜ್ಯ ಕಮಿಟಿಯಿಂದಲೂ ಹೆಸರು ಸೂಚಿಸಿಲ್ಲ.
ಎರಡನೇ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ದಕ್ಷಿಣದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಕರ್ನಾಟಕದ ಬಗ್ಗೆ ಹೆಚ್ಚು ಚರ್ಚೆ ನಡೆಯಲಿದ್ದು ಈಗೀರುವ ಸ್ಥಾನಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿದೆ. ಹೀಗಾಗೀ ಕೆಲವು ಹಾಲಿ ಸಂಸದರನ್ನು ಮುಂದುವರಿಸುವುದರ ಜೊತೆಗೆ 3-4 ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯೂ ಆಗಬಹುದು ಎಂದು ಮೂಲಗಳು ಹೇಳಿವೆ. ಉಳಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಂಸದರ ಭವಿಷ್ಯವನ್ನು ಹೈಕಮಾಂಡ್ ತಿರ್ಮಾನ ಮಾಡಲಿದೆ.