ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ ಸಚಿವೆ ಶೋಭಾ ಕರಂದ್ಲಾಜೆಗೆ ಮದ್ರಾಸ್ ಹೈಕೋರ್ಟ್ ತರಾಟೆ
ಚೈನೈ : ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಆರೋಪಿಗಳು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮುದ್ರಾಸ್ ಹೈಕೋರ್ಟ್ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಜವಬ್ದಾರಿಯುತ ಸ್ಥಾನದಲ್ಲಿದ್ದು ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.
ಬಾಂಬರ್ ಗಳು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎನ್ನುವ ಹೇಳಿಕೆ ವಿರುದ್ಧ ಸ್ಥಳೀಯ ನಿವಾಸಿಯೊಬ್ಬರು ಮಧುರೈ ಸಿಟಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಎಫ್ಐಆರ್ ರದ್ಧು ಕೋರಿ ಶೋಭಾ ಕರಂದ್ಲಾಜೆ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ ಜಯಚಂದ್ರನ್ ಸರಣಿ ಪ್ರಶ್ನೆಗಳ ಮೂಲಕ ಶೋಭಾ ಕರಂದ್ಲಾಜೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಂಬರ್ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ಸಾರ್ವಜನಿಕವಾಗಿ ಏಕೆ ಹೇಳಿದ್ದೀರಿ, ಎನ್ಐಎ ಚೆನ್ನೈನಲ್ಲಿ ಶೋಧ ನಡೆಸುವ ಮುನ್ನವೇ ನೀವು ಹೇಳಿಕೆ ನೀಡಿದ್ದೀರಿ ಇದರರ್ಥ ನೀವು ಸತ್ಯಗಳ ಬಗ್ಗೆ ತಿಳಿದಿರುತ್ತೀರಿ. ತರಬೇತಿ ಪಡೆದ ವ್ಯಕ್ತಿಗಳು ಯಾರು, ಅವರಿಗೆ ತರಬೇತಿ ನೀಡಿದವರು ಮತ್ತು ಅವರು ಏನು ಮಾಡಿದ್ದಾರೆಂದು ನಿಮಗೆ ತಿಳಿದಿದೆ ಅಪರಾಧದ ಬಗ್ಗೆ ನಿಮಗೆ ಸ್ವಲ್ಪ ಮಾಹಿತಿ ಸಿಕ್ಕಿದ್ದರೆ, ನೀವು ಅದನ್ನು ಪೊಲೀಸರಿಗೆ ಬಹಿರಂಗಪಡಿಸಬೇಕು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಸಚಿವರು ಅದನ್ನು ಮಾಡಿಲ್ಲ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ವೇಳೆ ವಾದ ಮಂಡಿಸಿದ ಸರ್ಕಾರಿ ವಕೀಲ ಕೆಎಂಡಿ ಮುಹಿಲನ್, ಕರಂದ್ಲಾಜೆ ಅವರು ನೀಡಿರುವ ಸಂದರ್ಶನದ ವಿಡಿಯೋ ತುಣುಕನ್ನು ವೀಕ್ಷಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದಲ್ಲಿ ತಮಿಳುನಾಡು ಭಾಗಿಯಾದ ಬಗ್ಗೆ ಎನ್ಐಎ ಇಲ್ಲಿಯವರೆಗೆ ಏನನ್ನೂ ಉಲ್ಲೇಖಿಸಿಲ್ಲ ಆದರೆ ಯಾವುದೇ ಆಧಾರವಿಲ್ಲದೆ ಸಚಿವರು ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಶೋಭಾ ಕರಂದ್ಲಾಜೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ರಾಜಕೀಯ ಪ್ರೇರಿತ, ದುರುದ್ದೇಶದಿಂದ ದೂರು ದಾಖಲಿಸಿದೆ ಎಫ್ಐಆರ್ ರದ್ಧು ಮಾಡುಬೇಕು ಎಂದು ಮನವಿ ಮಾಡಿದರು. ಬಳಿಕ ನ್ಯಾಯಧೀಶರು ಪ್ರಕರಣದ ವಿಚಾರಣೆ ಜುಲೈ 12 ಕ್ಕೆ ಮುಂದೂಡಿಕೆ ಮಾಡಿದರು.