ರಾಹುಲ್ ಗಾಂಧಿ ಕಾರಿಗೆ ಕಲ್ಲು ತೂರಾಟ
ಪಟ್ನಾ, ಜ. 31: ಬಿಹಾರದಲ್ಲಿ ಭಾರೀ ಬಿರುಸಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಯುತ್ತಿದೆ. ಇದರ ಮಧ್ಯೆ ಒಂದು ಅಹಿತಕರ ಘಟನೆ ನಡೆದಿದೆ. ರಾಹುಲ್ ಗಾಂಧಿ ಅವರು ಪ್ರಯಾಣಿಸುವ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಬುಧವಾರ ಹೇಳಿದ್ದಾರೆ.
ಬಂಗಾಳ – ಬಿಹಾರ ಗಡಿಯಲ್ಲಿ ಬಳಿ ಈ ಘಟನೆ ನಡೆದಿದೆ. ಯಾರೋ ರಾಹುಲ್ ಗಾಂಧಿ ಅವರ ಕಾರಿಗೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಕಾರಿನ ಹಿಂಬದಿಯ ಗಾಜು ಜಖಂಗೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ. ಇನ್ನು ರಾಹುಲ್ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಬಿಹಾರ ತಲುಪಿದೆ. ಇಂದು ಬೆಳಿಗ್ಗೆ ರಾಹುಲ್ ಬಿಹಾರ ಜಿಲ್ಲೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಮಾಲ್ಡಾ ಮೂಲಕ ಪಶ್ಚಿಮ ಬಂಗಾಳ ತಲುಪುವ ನಿರೀಕ್ಷೆ ಇತ್ತು. ಆದರೆ ಅವರ ಕಾರು ಜಖಂಗೊಂಡ ಕಾರಣ ಯಾತ್ರೆ ನಿರೀಕ್ಷಿತ ಸಮಯಕ್ಕೆ ಪಶ್ಚಿಮ ಬಂಗಾಳಕ್ಕೆ ತಲುಪಲು ಸಾಧ್ಯವಾಗಿಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಇನ್ನು ಬಿಹಾರದಲ್ಲಿ ರಾಜಕೀಯ ಬದಲಾವಣೆಗಳು ಗರಿಗೆದರಿದ್ದು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಮದಿಗೆ ಮತ್ತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಸಮಯದಲ್ಲೇ ಕಾಂಗ್ರೆಸ್ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಬಿಹಾರದಲ್ಲಿ ನಡೆಸುತ್ತಿದೆ.
ಇದಲ್ಲದೆ ಪಶ್ಚಿಮ ಬಂಗಾಳದಲ್ಲಿ ರಾಹುಲ್ ಗಾಂಧಿ ಜೊತೆಯಾಗಿ ನಿಲ್ಲುತ್ತೇನೆ ಎಂದಿದ್ದ ಮಮತಾ ಬ್ಯಾನರ್ಜಿ ಇದೀಗ ಉಲ್ಟಾ ಹೊಡೆದಿದ್ದಾರೆ. ಲೋಕಸಭೆ ಸೀಟು ಹಂಚಿಕೆ ಕುರಿತು ಮಮತಾ ಅಸಮಾಧಾನಗೊಂಡಿದ್ದು, ಲೋಕಸಭೆಯಲ್ಲಿ ಒಬ್ಬಂಟಿಯಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಈ ಹೊತ್ತಿನಲ್ಲೇ ಭಾರತ್ ಜೋಡೋ ನ್ಯಾಯ್ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಬಂದಿದೆ. ಆದರೆ ಈ ಯಾತ್ರೆಗೆ ಬಂಗಾಳದಲ್ಲಿ ಸರಿಯಾದ ಅವಕಾಶ ಹಾಗೂ ಪ್ರತಿಕ್ರಿಯೆ ಸಿಕ್ಕಿಲ್ಲ. ರಾಹುಲ್ ಗಾಂಧಿ ಮಾಡುವ ಸಭೆಗೆ ಅಲ್ಲಿನ ಜಿಲ್ಲಾಡಳಿತ ಅವಕಾಶವನ್ನೇ ನೀಡಿರಲಿಲ್ಲ. ಈ ಯಾತ್ರೆ ಇದೀಗ ಬಿಹಾರಕ್ಕೆ ಬಂದಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಾಗಿದ ಪ್ರದೇಶದಲ್ಲಿ ಮಮತಾ ಕೂಡ ಯಾತ್ರೆ ಮಾಡಲಿದ್ದಾರೆ ಎಂದು ವರದಿ ಹೇಳಿದೆ.