ವೈದ್ಯಕೀಯ ಸಂಸ್ಥೆ ಮುಖ್ಯಸ್ಥರಿಗೆ ಸುಪ್ರೀಂ ತರಾಟೆ

ವೈದ್ಯಕೀಯ ಸಂಸ್ಥೆ ಮುಖ್ಯಸ್ಥರಿಗೆ ಸುಪ್ರೀಂ ತರಾಟೆ

ನವದೆಹಲಿ, ಮೇ 14: ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರ ಸಂದರ್ಶನವೊಂದರಲ್ಲಿ ಹೇಳಿಕೆಗಾಗಿ ತೀವ್ರವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್, ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಾಗಿದ್ದರೂ “ಸ್ವಯಂ ಸಂಯಮ ಬೇಕು” ಎಂದು ಹೇಳಿದೆ. ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಸಹಾಯಕ ಬಾಲಕೃಷ್ಣ ಸ್ಥಾಪಿಸಿದ ಪತಂಜಲಿ ಆಯುರ್ವೇದ್ ವಿರುದ್ಧದ ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಕುರಿತು ಸಂದರ್ಶನವೊಂದರಲ್ಲಿ ತಮ್ಮ ಹೇಳಿಕೆಗಳಿಗಾಗಿ ಐಎಂಎ ಅಧ್ಯಕ್ಷ ಡಾ. ಆರ್.ವಿ.ಅಶೋಕನ್ ಅವರ ವಿರುದ್ಧ ಸುಪ್ರೀಂಕೋರ್ಟ್‌ ಗರಂ ಆಗಿದೆ.
ಪತಂಜಲಿ ಉತ್ಪನ್ನಗಳು ತಪ್ಪುದಾರಿಗೆಳೆಯುತ್ತಿದೆ ಎಂಬ ಆರೋಪಪದಲ್ಲಿ ಐಎಂಎ ಅರ್ಜಿದಾರರಾಗಿದ್ದಾರೆ. ಮಂಗಳವಾರ ಅಶೋಕನ್ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠ, “ನಾವು ನಿಮ್ಮಿಂದ ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷಿಸುತ್ತಿದ್ದೆವು. ನೀವು ಈ ರೀತಿ ಪತ್ರಿಕಾ ಮಾಧ್ಯಮಗಳಲ್ಲಿ ನ್ಯಾಯಾಲಯದ ವಿರುದ್ಧ ನಿಮ್ಮ ಭಾವನೆಗಳನ್ನು ಹೊರಹಾಕಲು ಸಾಧ್ಯವಿಲ್ಲ. ನೀವು ಇದ್ದಕ್ಕಿದ್ದಂತೆ ಹೀಗೆ ಮಾಡಿದ್ದು ಯಾಕೆ? ಎಂದು ಕೇಳಿದೆ.

ಈ ವಿಷಯದಲ್ಲಿ ಅಶೋಕನ್ ಅವರು ಬೇಷರತ್ ಕ್ಷಮೆಯಾಚಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಕೊಹ್ಲಿ, ‘ಇಂತಹ ಹಾನಿಕಾರಕ ಹೇಳಿಕೆಗಳ ನಂತರ ನಾವು ನಿಮ್ಮ ಹೇಳಿಕೆಗಳನ್ನು ಒಪ್ಪಿಕೊಳ್ಳಬೇಕೇ, ಅವರು ನಿಮ್ಮನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಇನ್ನೊಂದು ಕಡೆಯನ್ನು ನ್ಯಾಯಾಲಯಕ್ಕೆ ಎಳೆದು ತಂದವರು ನೀವು, ಆದರೆ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದಾಗ? ಏತನ್ಮಧ್ಯೆ ಅಫಿಡವಿಟ್‌ನಿಂದ ಸಂತೋಷವಾಗಿಲ್ಲ ಎಂದು ಪೀಠವು ಹೇಳಿದೆ. ಅವರು ಸಾರ್ವಜನಿಕ ಕ್ಷಮೆಯಾಚನೆಯನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯ, “ಎಲ್ಲವನ್ನೂ ಸ್ಪಷ್ಟವಾಗಿ ಬರೆಯಲಾಗಿದೆ, ನೀವು ನಿಜವಾಗಿಯೂ ಕ್ಷಮೆಯಾಚಿಸಲು ಬಯಸಿದರೆ ನೀವು ಸಂದರ್ಶನದ ನಂತರ ಯಾಕೆ ತಿದ್ದಿಕೊಳ್ಳಲಿಲ್ಲ? ಎಂಬುದನ್ನು ಹೇಳಿ ಎಂದು ನ್ಯಾಯಾಲಯ ಕೇಳಿದೆ, ನಾವು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮೊದಲಿಗರು. ಆದರೆ ಕೆಲವು ಸಂದರ್ಭಗಳಲ್ಲಿ ಸ್ವಯಂ ಸಂಯಮ ಇರಬೇಕು. ಐಎಂಎ ಅಧ್ಯಕ್ಷರಾಗಿ, ನೀವು ಸ್ವಯಂ ಸಂಯಮವನ್ನು ಹೊಂದಿರಬೇಕು. ನಿಮ್ಮ ಸಂದರ್ಶನದಲ್ಲಿ ನಾವು ಅದನ್ನು ನೋಡಲಿಲ್ಲ.” ಎಂದು ನ್ಯಾಯಮೂರ್ತಿ ಕೊಹ್ಲಿ ಹೇಳಿದ್ದಾರೆ.
“ಡಾ. ಅಶೋಕನ್, ನೀವೂ ಸಹ ಈ ದೇಶದ ಪ್ರಜೆ. ನ್ಯಾಯಾಧೀಶರು ಎದುರಿಸುವ ಟೀಕೆಗಳ ಪ್ರಮಾಣಗಳ ಬಗ್ಗೆ ಅವರು ಏಕೆ ಪ್ರತಿಕ್ರಿಯಿಸುವುದಿಲ್ಲ? ಏಕೆಂದರೆ ವೈಯಕ್ತಿಕವಾಗಿ ನಮಗೆ ಹೆಚ್ಚಿನ ಅಹಂ ಇಲ್ಲ, ನಾವು ಮಹಾನುಭಾವರು, ಕ್ರಮ ತೆಗೆದುಕೊಳ್ಳಲು ನಾವು ಅರ್ಹರು, ಆದರೆ ಬಹಳ ಅಪರೂಪವಾಗಿ ನಾವು ಮಾಡುತ್ತೇವೆ” ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದ್ದಾರೆ.

ನ್ಯಾಯಾಧೀಶರು ತಮ್ಮ ವಿವೇಚನೆಯನ್ನು ಕೆಲವು ಜವಾಬ್ದಾರಿಯೊಂದಿಗೆ ಬಳಸುತ್ತಾರೆ ಎಂದು ಪೀಠ ಹೇಳಿದೆ. “ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಬ್ಬ ವ್ಯಕ್ತಿಗೆ ಯಾವುದು ಸ್ವೀಕಾರಾರ್ಹವೋ ಆಗುತ್ತೋ ಅದೇ ಪರಿಸ್ಥಿತಿಯಲ್ಲಿರುವ ಇನ್ನೊಬ್ಬ ವ್ಯಕ್ತಿಗೆ ಕೂಡ ಅದು ಸ್ವೀಕಾರಾರ್ಹವಾಗಿರಬೇಕು.ಆದರೆ ನೀವು ಈ ರೀತಿಯ ಬೀಸು ಹೇಳಿಕೆಗಳನ್ನು ನೀಡಬಾರದು. ನೀವು ಸೋಫಾ ಮೇಲೆ ಕುಳಿತು ನ್ಯಾಯಾಲಯದ ಬಗ್ಗೆ ಏನನ್ನೂ ಹೇಳಬಾರದು. ಇನ್ನೊಂದು ಕಡೆಯವರು ಈ ರೀತಿಯ ಕಾಮೆಂಟ್‌ಗಳನ್ನು ಮಾಡಿದರೆ ನೀವು ಏನು ಮಾಡುತ್ತಿದ್ದೀರಿ? ನೀವು ನ್ಯಾಯಾಲಯದ ಬಳಿ ಓಡಿ ಬರುತ್ತಿರಲಿಲ್ಲವೇ ಎಂದು ಹೇಳಿದ ಪೀಠ ಐಎಂಎ ಅಧ್ಯಕ್ಷರು ಸಲ್ಲಿಸಿರುವ ಅಫಿಡವಿಟ್‌ನಿಂದ ತನಗೆ ಮನವರಿಕೆಯಾಗಿಲ್ಲ ಎಂದಿದೆ.

ಐಎಂಎ ಅಧ್ಯಕ್ಷರ ಪರ ಹಾಜರಾದ ಹಿರಿಯ ವಕೀಲ ಪಿ.ಎಸ್. ಪಟ್ವಾಲಿಯಾ ಅವರು ಪರಿಹಾರಕ್ಕಾಗಿ ನ್ಯಾಯಾಲಯವನ್ನು ಒತ್ತಾಯಿಸಿದಾಗ, ನ್ಯಾಯಮೂರ್ತಿ ಕೊಹ್ಲಿ ಅವರು ನೀವು ಏನೇನೋ ಹೇಳಿ, ಎಡವಟ್ಟು ಮಾಡಿಕೊಳ್ಳಬಾರದು. ಅವರು ಸಂಚಿಗೆ ಬಿದ್ದರು ಎಂದು ನೀವು ಹೇಳುತ್ತಿದ್ದೀರಾ? ಎಂದು ಕೇಳಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಪತಂಜಲಿ ವಿರುದ್ಧದ ಪ್ರಕರಣದಲ್ಲಿ ತಿರುವುಗಳು ಕಂಡುಬಂದಿವೆ. ಇದಕ್ಕೂ ಮೊದಲು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳನ್ನು ಗುಣಪಡಿಸುವ ಪತಂಜಲಿಯ ಜಾಹೀರಾತುಗಳ ಕುರಿತು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಲಯವು ತಾಕೀತು ಮಾಡಿತ್ತು. ಇಬ್ಬರ ಕ್ಷಮಾಪಣೆಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಆದಾಗ್ಯೂ, ಐಎಂಎ ಅಧ್ಯಕ್ಷರ ಸಂದರ್ಶನವು ಅರ್ಜಿದಾರರ ವೈದ್ಯಕೀಯ ಸಂಸ್ಥೆಯನ್ನು ಕಟಕಟೆಯಲ್ಲಿರಿಸಿದ್ದು ಮುಂದಿನ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಲಾಗಿದೆ.

Previous Post
ದೆಹಲಿ IT ಕಚೇರಿಯಲ್ಲಿ ಬೆಂಕಿ ಅವಘಡ
Next Post
ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯಿಂದ ಮೂರನೇ ಬಾರಿ ಕಣಕ್ಕೆ

Recent News