3,133 ಮೆಟ್ರಿಕ್ ಟನ್ ಕುಸುಬೆ ಬೆಳೆ ಬೆಂಬಲ ಬೆಲೆಗೆ ಖರೀದಿಸಲು ಕೇಂದ್ರ ಒಪ್ಪಿಗೆ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ
ನವದೆಹಲಿ: ರಾಜ್ಯದಲ್ಲಿ 2023-24ರ ಕೃಷಿ ಹಂಗಾಮಿನ ಹಿಂಗಾರಿನಲ್ಲಿ ಬೆಳೆದ 3,133 ಮೆಟ್ರಿಕ್ ಟನ್ ಕುಸುಬೆ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಹೇಳಿದ್ದಾರೆ.
ರಾಜ್ಯದ ಮಧ್ಯ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 21,000 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆ ಕೃಷಿ ನಡೆಯುತ್ತಿದ್ದು, ರೈತರು ಸರಿಯಾದ ಬೆಲೆ ಇಲ್ಲದೆ ತೊಂದರೆ ಎದುರಿಸುತ್ತಿದ್ದರು. ಇದನ್ನು ಪರಿಗಣಿಸಿ, ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಅಪರ ಕಾರ್ಯದರ್ಶಿಯವರು ಕೇಂದ್ರ ಸಹಕಾರ ಇಲಾಖೆ ಕಾರ್ಯದರ್ಶಿಯವರಿಗೆ ಕುಸುಬೆ ಬೆಳೆಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರಲು ಕೋರಿದ್ದರು.
ಬಳಿಕ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಮನವಿಯನ್ನು ಮುತುವರ್ಜಿ ವಹಿಸಿ ಸಂಬಂಧಿಸಿದ ಇಲಾಖೆಗಳೊಡನೆ ಪತ್ರ ವ್ಯವಹಾರ ಹಾಗೂ ಸಮಾಲೋಚನೆಗಳನ್ನು ನಡೆಸಿ ಕೇಂದ್ರ ಸರ್ಕಾರದಿಂದ ಅಂತಿಮವಾಗಿ ಅನುಮತಿ ಪಡೆದಿದೆ. ರಾಜ್ಯ ಸರ್ಕಾರವು ಸಂಬಂಧಿಸಿದ ನೋಡಲ್ ಏಜೆನ್ಸಿಗಳ ಸಮನ್ವಯತೆಯೊಂದಿಗೆ ಮುಂಬರುವ ದಿನಗಳಲ್ಲಿ ಬೆಂಬಲ ಬೆಲೆಯಲ್ಲಿ ಕುಸುಬೆ ಬೆಳೆ ಖರೀದಿಗೆ ಕ್ರಮ ವಹಿಸಲಿದೆ ಎಂದು ಜಯಚಂದ್ರ ವಿವರಿಸಿದರು.