ನಾರಿ ಶಕ್ತಿ ಎನ್ನುತ್ತೀರಿ, ಅದನ್ನು ಇಲ್ಲಿ ತೋರಿಸಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

ನಾರಿ ಶಕ್ತಿ ಎನ್ನುತ್ತೀರಿ, ಅದನ್ನು ಇಲ್ಲಿ ತೋರಿಸಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

ನವದೆಹಲಿ, ಫೆ. 20: ಕೋಸ್ಟ್ ಗಾರ್ಡ್‌ನಲ್ಲಿ ಮಹಿಳೆಯರಿಗೆ ಖಾಯಂ ಆಯೋಗದ ನೀಡಿಕೆ ವಿಚಾರದಲ್ಲಿ ‘ಪುರುಷ ಪ್ರಧಾನ’ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, “ಸೇನೆ ಮತ್ತು ನೌಕಾಪಡೆ ಈಗಾಗಲೇ ಈ ನೀತಿಯನ್ನು ಜಾರಿಗೆ ತಂದಿರುವಾಗ ಕೋಸ್ಟ್‌ ಗಾರ್ಡ್‌ ಏಕೆ ವಿಭಿನ್ನವಾಗಿರಬೇಕು?” ಎಂದು ಪ್ರಶ್ನಿಸಿದೆ. ಮಹಿಳೆಯರು ಗಡಿಗಳನ್ನು ರಕ್ಷಿಸಬಲ್ಲರಾದರೆ, ಅವರು ಕರಾವಳಿಯನ್ನೂ ರಕ್ಷಿಸಬಲ್ಲರು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಮಹಿಳಾ ಶಕ್ತಿಯ ಬಗ್ಗೆ ಮಾತನಾಡುವ ಸರ್ಕಾರಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಸಮಯ ಬಂದಿದೆ ಎಂದು ಹೇಳಿದೆ.
ಕೋಸ್ಟ್ ಗಾರ್ಡ್ ಶಾರ್ಟ್‌ ಸರ್ವಿಸ್ ಅಪಾಯಿಂಟ್‌ಮೆಂಟ್ ಅಧಿಕಾರಿ ಪ್ರಿಯಾಂಕಾ ತ್ಯಾಗಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ “ನೀವು (ಕೇಂದ್ರ ಸರ್ಕಾರ) ನಾರಿ ಶಕ್ತಿ, ನಾರಿ ಶಕ್ತಿ ಎನ್ನುತ್ತೀರಿ. ಈಗ ಅದನ್ನು ಇಲ್ಲಿ ತೋರಿಸಿ. ನೌಕಾದಳ ಮಾಡಿರುವಾಗ ಕೋಸ್ಟ್ ಗಾರ್ಡ್ ಮಾಡಬಾರದೆಂದಿಲ್ಲ. ಕೋಸ್ಟ್ ಗಾರ್ಡ್ ವಲಯದಲ್ಲಿ ಮಹಿಳೆಯರು ಇರುವುದನ್ನು ನೋಡಲು ಬಯಸದಷ್ಟು ಯಾಕೆ ಪುರುಷ ಪ್ರಧಾನರಾಗಿದ್ದೀರಿ? ಕೋಸ್ಟ್ ಗಾರ್ಡ್ ಬಗ್ಗೆ ಏಕೆ ಅಷ್ಟೊಂದು ಅಸಡ್ಡೆ ಧೋರಣೆ?” ಎಂದು ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರ ವಾದಕ್ಕೆ ಪ್ರತಿಕ್ರಿಯಿಸಿ, “ಕೋಸ್ಟ್ ಗಾರ್ಡ್ ಸೇನೆ ಮತ್ತು ನೌಕಾಪಡೆಗಿಂತ ವಿಭಿನ್ನ ಡೊಮೇನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮಹಿಳೆಯರು ಕೋಸ್ಟ್ ಗಾರ್ಡ್‌ನಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳುವ ದಿನಗಳು ಹೋಗಿವೆ. ಮಹಿಳೆಯರು ಗಡಿಗಳನ್ನು ರಕ್ಷಿಸಬಲ್ಲರಾದರೆ, ಅವರು ಕರಾವಳಿಯನ್ನೂ ರಕ್ಷಿಸಬಲ್ಲರು. ಸುಪ್ರೀಂ ಕೋರ್ಟ್‌ನ ಮಹತ್ವದ ಬಬಿತಾ ಪುನಿಯಾ ತೀರ್ಪನ್ನು ನೀವು ಓದಿಲ್ಲ ಎಂದು ತೋರುತ್ತದೆ” ಎಂದಿದೆ.
2020ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಸೇನೆಯಲ್ಲಿನ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ನೀಡುವಂತೆ ಸೂಚಿಸಿತ್ತು. ಶಾರೀರಿಕ ಮಿತಿಗಳು ಮತ್ತು ಸಾಮಾಜಿಕ ನಿಯಮಗಳು ಎಂಬ ಸರ್ಕಾರದ ವಾದವನ್ನು ಅದು ತಿರಸ್ಕರಿಸಿತ್ತು. ಇದು ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾಗಿದೆ ಮತ್ತು ಲಿಂಗ ಪಕ್ಷಪಾತವನ್ನು ಹೊಂದಿದೆ ಎಂದಿತ್ತು.
ಪ್ರಿಯಾಂಕಾ ತ್ಯಾಗಿ ಅವರು ಕೋಸ್ಟ್‌ ಗಾರ್ಡ್‌ನ ಡೋರ್ನಿಯರ್‌ ವಿಮಾನಗಳ ನಿರ್ವಹಣೆಗೆ ನಿಯೋಜಿಸಲಾದ ಮೊದಲ ಮಹಿಳಾ ತಂಡದ ಭಾಗವಾಗಿದ್ದರು. ಪುರುಷ ಅಧಿಕಾರಿಗಳಂತೆಯೇ ತಮಗೂ ಖಾಯಂ ಆಯೋಗ ಬೇಕೆಂದು ಅವರು ಆಗ್ರಹಿಸಿದ್ದರು. ಖಾಯಂ ಆಯೋಗಕ್ಕೆ ಆಕೆಯನ್ನು ಪರಿಗಣಿಸಲು ನಿರಾಕರಿಸಿ ಡಿಸೆಂಬರ್‌ನಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು. ತ್ಯಾಗಿ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅರ್ಚನಾ ಪಾಠಕ್ ದವೆ ಅವರು, ಸಮಾನತೆಯ ಮೂಲಭೂತ ಹಕ್ಕನ್ನು ಪ್ರತಿಪಾದಿಸಿದ್ದಾರೆ. ಸೇನೆಯಲ್ಲಿರುವಂತೆ ಮಹಿಳಾ ಸಿಬ್ಬಂದಿಗೆ ಬಡ್ತಿ ನೀಡಬೇಕು ಮತ್ತು ಕೋಸ್ಟ್ ಗಾರ್ಡ್‌ನಲ್ಲಿ ನಿಯೋಜಿತ ಅಧಿಕಾರಿಗಳಾಗಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

Previous Post
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕನ್ನಡತಿ ಸಿನಿ ಶೆಟ್ಟಿ ಭಾಗಿ
Next Post
ಕೇಂದ್ರದಿಂದ ರೈತಪರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ

Recent News