ತೇಜಸ್ವಿ ಯಾದವ್ ಬೆಂಗಾವಲು ಪಡೆಯ ವಾಹನ ಅಪಘಾತ, ಚಾಲಕ ದುರ್ಮರಣ
ಪಾಟ್ನಾ: ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಬೆಂಗಾವಲು ಪಡೆಯ ವಾಹನವೊಂದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಬೆಂಗಾವಲು ವಾಹನದ ಚಾಲಕ ಮೊಹಮ್ಮದ್ ಹಲೀಂ ಸ್ಥಳದಲ್ಲೇ ಸಾವನ್ನಪ್ಪಿದ್ದು, 6 ಪೊಲೀಸರು ಗಾಯಗೊಂಡಿದ್ದಾರೆ.
ಅಲ್ಲದೆ ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. ಎಲ್ಲಾ 10 ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಎಂಸಿಹೆಚ್ ಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ತೇಜಸ್ವಿ ಯಾದವ್ ಪ್ರಸ್ತುತ ರಾಜ್ಯಾದ್ಯಂತ ‘ಜನ್ ವಿಶ್ವಾಸ್ ಯಾತ್ರೆ’ಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಜನ ವಿಶ್ವಾಸ ಯಾತ್ರೆಯ ವೇಳೆ ತೇಜಸ್ವಿ ಯಾದವ್ ಅವರ ಬೆಂಗಾವಲು ಪಡೆ ಪುರ್ನಿಯಾದ ಬೆಲೌರಿ ಮೂಲಕ ಹಾದು ಹೋಗುತ್ತಿತ್ತು ಎಂದು ಹೇಳಲಾಗಿದೆ. ಈ ಬೆಂಗಾವಲು ಪಡೆಯಲ್ಲಿ ಈ ಸ್ಕೌಟ್ ವಾಹನವೂ ಸೇರಿತ್ತು. ಪೂರ್ಣಿಯಾ ಕತಿಹಾರ್ ನಾಲ್ಕು ಪಥದ ರಸ್ತೆಯಲ್ಲಿ ವಾಹನ ರಾಂಗ್ ಸೈಡ್ ಗೆ ಹೋಗಿತ್ತು. ಇದರಿಂದಾಗಿ ಕತಿಹಾರ್ ಕಡೆಯಿಂದ ಬರುತ್ತಿದ್ದ ಕೆಂಪು ಬಣ್ಣದ ಕಾರಿಗೆ ಭೀಕರ ಡಿಕ್ಕಿ ಸಂಭವಿಸಿದೆ.