ಗುರುದಾಸ್ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ – ಯುವರಾಜ್ ಸಿಂಗ್ ಸ್ಪಷ್ಟನೆ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ತಾರೆ ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್ನ ಹೈ ಪ್ರೊಫೈಲ್ ಕ್ಷೇತ್ರ ಗುರುದಾಸ್ಪುರದಿಂದ ಸ್ಪರ್ಧಿಸುವ ವಿಚಾರವನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ತಳ್ಳಿಹಾಕಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಂಗ್, ನಾನು ಗುರುದಾಸ್ಪುರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಮುಖ್ಯ ಉದ್ದೇಶ ಜನರಿಗೆ ಸಹಾಯ ಮಾಡುವುದಾಗಿದೆ. ನನ್ನ ಫೌಂಡೇಶನ್ ಮೂಲಕ ನಾನು ಅದನ್ನು ಮುಂದುವರಿಸುತ್ತೇನೆ. ಹೀಗಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಒಟ್ಟಿಗೆ ಕೆಲಸ ಮುಂದುವರಿಸೋಣ ಎಂದಿದ್ದಾರೆ.
ಬಿಜೆಪಿಯು ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗುರುದಾಸ್ಪುರದಿಂದ ಬಿಜೆಪಿ ಟಿಕೆಟ್ನಲ್ಲಿ ಯುವರಾಜ್ ಸಿಂಗ್ ಸ್ಪರ್ಧಿಸಬಹುದು ಎಂಬುದು ವರದಿಯಾಗಿತ್ತು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ.
ಗುರುದಾಸ್ಪುರವು ಪ್ರಸಿದ್ಧ ಸಂಸದರ ಇತಿಹಾಸವನ್ನು ಹೊಂದಿದೆ. ಸನ್ನಿ ಡಿಯೋಲ್ ಅವರಿಗಿಂತ ಮೊದಲು , ಈ ಕ್ಷೇತ್ರವನ್ನು ದಿವಂಗತ ನಟ ವಿನೋದ್ ಖನ್ನಾ ಅವರು 1998, 1999, 2004 ಮತ್ತು 2014 ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಡಿಯೋಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖರ್ ಅವರನ್ನು ಸೋಲಿಸಿ ಬಿಜೆಪಿ ಟಿಕೆಟ್ನಲ್ಲಿ ಗೆದ್ದರು. ಜಾಖರ್ ನಂತರ ಮೇ 2022 ರಲ್ಲಿ ಬಿಜೆಪಿ ಸೇರಿದರು.