ಯಾರ ಆಪೋಶನಕ್ಕಾಗಿ ಚುನಾವಣಾ ಬಾಂಡ್ ಸಂಚಲನ

ಯಾರ ಆಪೋಶನಕ್ಕಾಗಿ ಚುನಾವಣಾ ಬಾಂಡ್ ಸಂಚಲನ

ಚುನಾವಣೆ ಮುಗಿಯುವವರೆಗೂ ಚುನಾವಣಾ ಬಾಂಡ್ ವಿವರ ಬಹಿರಂಗವಾಗದಂತೆ ತಡೆಯಲು ಹರಸಾಹಸವೇ ನಡೆಯಿತು. ಅದಕ್ಕಾಗಿಯೇ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ವಿವರಗಳನ್ನು ಸಲ್ಲಿಸಲು ಜೂನ್ 30ರವರೆಗೂ ಸಮಯಾವಕಾಶ ಬೇಕು ಎಂದು ಸರ್ವೋಚ್ಚ ನ್ಯಾಯಲಾಯವನ್ನು ಬೇಡಿಕೊಂಡಿತು. ಆದರೆ ಎಲೆಕ್ಟೋರಲ್ ಬಾಂಡ್ ಎನ್ನುವುದೇ ಅಸಂವಿಧಾನಿಕ ಎಂದು ಹೇಳಿದ ಸುಪ್ರೀಂ ಕೋರ್ಟ್, ಮಾರ್ಚ್ 12ರ ಒಳಗೆ ದತ್ತಾಂಶ ಸಲ್ಲಿಸಿ ಇಲ್ಲವೇ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾಗೆ ಖಡಕ್ ಸೂಚನೆ ನೀಡಿತು. ಕೋರ್ಟ್ ಆದೇಶಕ್ಕೆ ಹೆದರಿದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಮೂರು ತಿಂಗಳ ಬದಲು ಒಂದೇ ದಿನದಲ್ಲಿ ದತ್ತಾಂಶಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತು. ಅಷ್ಟೇಯಲ್ಲ, ರಾಜಕೀಯ ಪಕ್ಷಗಳು 2019 ಎಪ್ರಿಲ್ 1 ರಿಂದ 2024 ಫೆಬ್ರುವರಿ 15ರ ನಡುವೆ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಬ್ಯಾಂಕ್ ಮೂಲಕ ಖರೀದಿಸಿದ ಬಾಂಡ್ ಗಳ ವಿವರಗಳನ್ನು ಚುನಾವಣಾ ಆಯೋಗವು ತನ್ನ ವೆಬ್ ಸೈಟಲ್ಲಿ ಅನಿವಾರ್ಯವಾಗಿ ಮಾರ್ಚ್ 14ರಂದು ಪ್ರಕಟಿಸ ಬೇಕಾಯಿತು.
ರಹಸ್ಯವಾಗಿದ್ದ ದೇಣಿಗೆ ದತ್ತಾಂಶದ ವಿವರಗಳು ಬಹಿರಂಗವಾದಾಗ ಬಿಜೆಪಿ ಪಕ್ಷಕ್ಕೆ ದೇಣಿಗೆ ಪಡೆಯಲು ಏನೆಲ್ಲಾ ವಾಮಮಾರ್ಗಗಳನ್ನು ಬಳಸಲಾಗಿದೆ ಎನ್ನುವುದು ಒಂದೊಂದಾಗಿ ಹೊರ ಬರತೊಡಗಿದವು. ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡಿ ಹಲವಾರು ಕಂಪನಿಗಳಿಂದ ದೇಣಿಗೆ ರೂಪದಲ್ಲಿ ಹಣ ಪಡೆಯಲಾಯ್ತು ಎಂಬ ವಿಷಯವೂ ಬಟಾಬಯಲಾಗತೊಡಗಿತು. ಚುನಾವಣಾ ಬಾಂಡ್ ಗಳ ಮೂಲಕ 1,300ಕ್ಕೂ ಹೆಚ್ಚು ಕಂಪನಿಗಳು ಹಾಗೂ ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದು, ಆ ಪೈಕಿ 2019ರ ನಂತರ ಬಿಜೆಪಿಯೊಂದೇ 6,000 ಕೋಟಿಗೂ ಹೆಚ್ಚು ದೇಣಿಗೆ ಪಡೆದಿದೆ.
‘ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸಸ್’ ಎನ್ನುವ ಕಂಪನಿ ಬಿಜೆಪಿ ಪಕ್ಷಕ್ಕೆ 1,368 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಚುನಾವಣಾ ಬಾಂಡ್ ಮೂಲಕ ಕೊಟ್ಟಿದೆ ಅಂದರೆ ಈ ಕಂಪನಿ ಅದೆಷ್ಟು ದೊಡ್ಡದಾಗಿರಬೇಕು? ಆದರೆ ಇಂತಹುದೊಂದು ಕಂಪನಿಯ ವೆಬ್ ಸೈಟ್ ಕೂಡಾ ಕೆಲಸ ಮಾಡುತ್ತಿಲ್ಲ ಎಂದರೆ ಇದೆಂತಾ ಫ್ರಾಡ್ ಕಂಪನಿ ಎಂಬುದು ಅರ್ಥವಾಗದೇ ಇರುವ ಸತ್ಯವೇನಲ್ಲ. ಈ ಫ್ಯೂಚರ್ ಗೇಮಿಂಗ್ ಕಂಪನಿ ಮಾಲೀಕ ಲಾಟರಿ ಕಿಂಗ್ ಸ್ಯಾಂಟಿಯಾಗೋ ಮಾರ್ಟಿನ್. ಬಹುತೇಕ ರಾಜ್ಯಗಳಲ್ಲಿ ಲಾಟರಿ ನಡೆಸುವುದೇ ಈತನ ಮೂಲ ದಂಧೆ. ಈತನ ಕಂಪನಿಯ ಮೇಲೆ ಹಲವಾರು ಬಾರಿ ಇಡಿ, ಐಟಿ ದಾಳಿಗಳಾಗಿವೆ. ಹಲವಾರು ಕೇಸುಗಳು ದಾಖಲಾಗಿವೆ. ಈ ಎಲ್ಲಾ ಲಾಟರಿ ಹಗರಣಗಳಿಂದ ಹೊರಬರಲು ಈತ ಬಿಜೆಪಿ ಪಕ್ಷಕ್ಕೆ 1,368 ಕೋಟಿ ದೇಣಿಗೆ ಕೊಟ್ಟಿದ್ದಾನೆ. ಈತನ ಮಗ ಜೋಸ್ ಚಾರ್ಲ್ಸ್ ಮಾರ್ಟಿನ್ 2015ರಲ್ಲಿ ಬಿಜೆಪಿ ಪಕ್ಷ ಸೇರಿ ತನ್ನ ಕಂಪನಿಯ ಅವ್ಯವಹಾರಗಳಿಗೆ ಆಳುವ ಪಕ್ಷದ ಕೃಪಾ ಕಟಾಕ್ಷವನ್ನು ಪಡೆದಿದ್ದಾನೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.
‘ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್’ ಎನ್ನುವ ಮೂರನೇ ಕ್ರಮಾಂಕದ ದೊಡ್ಡ ದೇಣಿಗೆದಾರ ಕಾರ್ಪೋರೇಟ್ ಕಂಪನಿಯೊಂದು ಬಿಜೆಪಿಗೆ 410 ಕೋಟಿ ಹಣವನ್ನು ದೇಣಿಗೆ ನೀಡಿದೆ. ಆದರೆ ಈ ಕಂಪನಿಯ ವಾರ್ಷಿಕ ಲಾಭಾದಾಯ ಕೇವಲ 109 ಕೋಟಿಯಷ್ಟೇ. ಅಂದರೆ 300 ಕೋಟಿಗೂ ಹೆಚ್ಚು ಹಣವನ್ನು ಎಲ್ಲಿಂದ ತಂದು ಈ ಕಂಪನಿ ದಾನ ಮಾಡಿದೆ? ಈ ಕಂಪನಿಯ ಶೇರುಗಳ ಮಾಲೀಕತ್ವ ಅಂಬಾನಿಯವರ ರಿಲಯನ್ಸ್ ಕಂಪನಿಯದು ಎನ್ನುವುದು ಖಾತ್ರಿಯಾಗಿದೆ. ‘ಕ್ವಿಕ್ ಸಪ್ಲೈ ಚೈನ್’ ಕಂಪನಿಯು ರಿಲಯನ್ಸ್ ಕಾರ್ಪೋರೇಟ್ ನೆಟ್ವರ್ಕ್ ಮತ್ತು ಹೋಲ್ಡಿಂಗ್ ನೋಡಿಕೊಳ್ಳುತ್ತದೆ. ಹೀಗಾಗಿ ಕೇಂದ್ರದ ಬಿಜೆಪಿ ಸರಕಾರದಿಂದ ಗರಿಷ್ಠ ಅನುಕೂಲಗಳನ್ನು ಪಡೆದ ಮುಖೇಶ್ ಅಂಬಾನಿಯವರ ಕಡೆಯಿಂದ ಬಂದ್ ಕಿಕ್ ಬ್ಯಾಕ್ ಅನ್ನು ‘ಕ್ವಿಕ್ ಸಪ್ಲೈ ಚೈನ್’ ಕಂಪನಿ ಬಿಜೆಪಿಗೆ ದೇಣಿಗೆ ರೂಪದಲ್ಲಿ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಹೈದರಾಬಾದ್ ಮೂಲದ ‘ಮೇಘಾ ಇಂಜಿನೀಯರಿಂಗ್ ಗ್ರೂಪ್’ ಕಂಪನಿಗಳು ಒಟ್ಟಾಗಿ 966 ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್ ಖರೀದಿಸಿ ದೇಣಿಗೆಯಾಗಿ ನೀಡಿವೆ. ಇದಕ್ಕೆ ಬದಲಾಗಿ ಮಹಾರಾಷ್ಟ್ರ ಸರಕಾರದಿಂದ 14,400 ಕೋಟಿ ಮೊತ್ತದ ಥಾಣೆ-ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ ಹಾಗೂ 1.15 ಲಕ್ಷ ಕೋಟಿ ಮೊತ್ತದ ತೆಲಂಗಾಣ ಕಾಳೇಶ್ವರಂ ಏತ ನೀರಾವತಿ ಯೋಜನೆಯ ಗುತ್ತಿಗೆ ಪಡೆದಿದೆ. ದೇಶದ ಔಷಧ ತಯಾರಿಕಾ ಕಂಪನಿಗಳು ಹಾಗೂ ಆರೋಗ್ಯಸೇವಾ ಸಂಸ್ಥೆಗಳು ತಲಾ 5 ಕೋಟಿ ಮೊತ್ತದ 900 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿವೆ. ಯಶೋದಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ 152 ಕೋಟಿ, ಡಾ.ರೆಡ್ಡೀಸ್ ಲ್ಯಾಬರೇಟರಿ 80 ಕೋಟಿ, ರೋರೆಂಟ್ ಫಾರ್ಮಾಸೂಟಿಕಲ್ಸ್ 77.5 ಕೋಟಿ, ನ್ಯಾಟ್ಕೋ ಫಾರ್ಮಾ 69.25 ಕೋಟಿ, ಬಯೋಕಾನ್ ಲಿಮಿಟೆಡ್ 6 ಕೋಟಿ, ಸಿಪ್ಲಾ 39.2 ಕೋಟಿ ರೂಪಾಯಿಗಳ ಮೊತ್ತದ ಬಾಂಡ್ ಗಳನ್ನು ಖರೀದಿಸಿವೆ. ”ವಕೀಲರಾದ ಪ್ರಶಾಂತ ಭೂಷಣ್ ರವರು 2013 ಎಪ್ರಿಲ್ ನಲ್ಲಿ ಹೀಗೆ ಟ್ವೀಟ್ ಮಾಡಿದ್ದರು- “ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಮಾಲೀಕ ಆದಾರ್ ಪೂನಾವಾಲಾ “ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್” ಮೂಲಕ ಬಿಜೆಪಿ ಪಕ್ಷಕ್ಕೆ 2022 ಆಗಸ್ಟ್‌ ನಲ್ಲಿ 50 ಕೋಟಿ ದೇಣಿಗೆ ಕೊಟ್ಟಿದ್ದು, ಕರೋನಾ ಕಾಲದಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಸಿ ಸರಕಾರಕ್ಕೆ ಸರಬರಾಜು ಮಾಡಿದ್ದು ಇದೇ ಕಂಪನಿಯಾಗಿದ್ದು ಈ ದೇಣಿಗೆ ಅದರ ಪ್ರತಿಫಲವಾಗಿದೆ ಎನ್ನುವುದು ಇನ್ನೊಂದು ಮುಖ್ಯವಾದ ಸಂಗತಿ.
ಒಂದು ಕಡೆ ಕಂಪನಿಗಳ ಮೇಲೆ ದಾಳಿಯಾಗದಂತೆ ತಡೆಯಲು ಹಾಗೂ ದಾಳಿಯಾಗಿದ್ದರೆ ತನಿಖೆ ಆಗದಂತೆ ನೋಡಿಕೊಳ್ಳಲು ದೇಣಿಗೆ ರೂಪದ ಲಂಚ ಪಡೆಯುವುದು ಹಾಗೂ ಇನ್ನೊಂದು ಕಡೆ ಪಡೆದ ದೇಣಿಗೆಗಳಿಗೆ ಬದಲಾಗಿ ಸರಕಾರಿ ಪ್ರಾಜೆಕ್ಟ್ ಗಳನ್ನು ಕೊಟ್ಟು ಕಿಕ್ ಬ್ಯಾಕ್ ತೆಗೆದು ಕೊಳ್ಳುವುದು ಹಾಗೂ ಬೇನಾಮಿ ಶೆಲ್ ಕಂಪನಿಗಳ ಮೂಲಕ ದೇಣಿಗೆ ವಸೂಲಿ ಮಾಡುವುದು ಚುನಾವಣಾ ಬಾಂಡ್ ಹಿಂದಿರುವ ಬಿಜೆಪಿ ಪಕ್ಷದ ಹುನ್ನಾರವಾಗಿದೆ.

ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಷ್ಟದಲ್ಲಿದೆ. ಭಾರ್ತಿ ಏರ್ಟೆಲ್ ಪ್ರಾಫಿಟ್ ಹೆಚ್ಚುತ್ತಿದೆ. ಯಾಕೆಂದರೆ ಭಾರ್ತಿ ಏರ್ಟೆಲ್ ಕಂಪನಿಯ ಮೂರು ವರ್ಷದ ಸರಾಸರಿ ಲಾಭ 253 ಕೋಟಿಯಾಗಿದ್ದರೆ, ಅದು ಬಿಜೆಪಿಗೆ ಬಾಂಡ್ ಮೂಲಕ ಕೊಟ್ಟ ದೇಣಿಗೆ 183 ಕೋಟಿಯಾಗಿದೆ. ಡಿಸೆಂಬರ್ 2023ರಲ್ಲಿ ರುಂಗ್ತಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿಯ ಮೇಲೆ ಐಟಿ ದಾಳಿಯಾಗುತ್ತದೆ. 2024 ಜನವರಿ 11ರಂದು ಈ ಕಂಪನಿ 50 ಕೋಟಿಯ ಚುನಾವಣಾ ಬಾಂಡ್ ಖರೀದಿ ಮಾಡಿ ಬಿಜೆಪಿಗೆ ಕೊಡುತ್ತದೆ. ಹಾಗೆಯೇ ಹೈದರಾಬಾದ್ ಮೂಲದ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಮೇಲೆ 2020ರ ಡಿಸೆಂಬರ್‌ ನಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. 2021 ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಪಕ್ಷಕ್ಕೆ 162 ಕೋಟಿ ರೂಪಾಯಿಗಳ ಬಾಂಡ್ ಸಂದಾಯವಾಗುತ್ತದೆ ಹಾಗೂ ತನಿಖೆ ನಿಂತು ಹೋಗುತ್ತದೆ. 2023 ಡಿಸೆಂಬರ್ 18ರಂದು ಶಿರಡಿ ಸಾಯಿ ಎಲೆಕ್ಟ್ರಿಕಲ್ ಲಿಮಿಟೆಡ್ ಎನ್ನುವ ಹೈದರಾಬಾದ್ ಕಂಪನಿ ಮೇಲೆ ಐಟಿ ರೇಡ್ ಮಾಡುತ್ತದೆ. 2024 ಜನವರಿ 11ರಂದು 40 ಕೋಟಿ ಚುನಾವಣಾ ಬಾಂಡ್ ಬಿಜೆಪಿ ಭಂಡಾರಕ್ಕೆ ಸೇರುತ್ತದೆ. ಮದನ್‌ ಲಾಲ್ ಲಿಮಿಟೆಡ್ ಎನ್ನುವ ಕಂಪನಿಯ ಮೂರು ವರ್ಷದ ಸರಾಸರಿ ಲಾಭ ಕೇವಲ 10 ಕೋಟಿ. ಆದರೆ ಬಿಜೆಪಿಗೆ ಕೊಟ್ಟ ದೇಣಿಗೆ ಮೊತ್ತ 185 ಕೋಟಿ ರೂಪಾಯಿ.
2017ಕ್ಕೂ ಮೊದಲು ಯಾವುದೇ ಕಂಪನಿ ಯಾವುದೇ ಪಕ್ಷಕ್ಕೆ ಹಣವನ್ನು ದೇಣಿಗೆಯಾಗಿ ನೀಡಬೇಕೆಂದರೆ ಆ ಕಂಪನಿಯ ಮೂರು ವರ್ಷದ ಸರಾಸರಿ ಲಾಭಾಂಶ 7.5% ಮೀರಬಾರದು ಎನ್ನುವ ನಿಯಮ ಇತ್ತು. ಆದರೆ ಕೇಂದ್ರ ಸರಕಾರವು 2017ರಲ್ಲಿ ತಿದ್ದುಪಡಿ ತಂದು ಈ ಲಿಮಿಟ್ ಅನ್ನು ರದ್ದು ಗೊಳಿಸಿತು. ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಯಾರು ಎಷ್ಟು ಹಣಕ್ಕೆ ಬೇಕಾದರೂ ಚುನಾವಣಾ ಬಾಂಡ್ ಗಳನ್ನು ಪಡೆದು ರಾಜಕೀಯ ಪಕ್ಷಗಳಿಗೆ ಕೊಡಬಹುದು ಎನ್ನುವ ಹೊಸ ನಿಯಮವನ್ನು ಜಾರಿ ಮಾಡಲಾಯಿತು. ಅಷ್ಟೇ ಅಲ್ಲ, ಈ ದಾನಿಗಳ ಹಾಗೂ ದಾನ ಪಡೆದವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗ ಗೊಳಿಸಲಾಗದು ಎಂದೂ ಸೇರಿಸಲಾಗಿತ್ತು. ಹೀಗಾಗಿ ಅಪಾರ ಪ್ರಮಾಣದ ಹಣ ಬಿಜೆಪಿ ಪಕ್ಷಕ್ಕೆ ಹರಿದುಬಂತು.
ಇಷ್ಟಾದರೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸುಪ್ರೀಂ ಕೋರ್ಟಿಗೆ ಅಪೂರ್ಣ ಮಾಹಿತಿ ಕೊಟ್ಟು ಇನ್ನೂ ಹಲವಾರು ಸತ್ಯಗಳನ್ನು ಮರೆಮಾಚಿದೆ. ಚುನಾವಣಾ ಬಾಂಡ್ ಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಬ್ಯಾಂಕನ್ನು ಮಾರ್ಚ್ 15 ರಂದು ಸುಪ್ರೀಂ ಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಎಲೆಕ್ಟೋರಲ್ ಬಾಂಡ್ ಗಳ ಸಂಖ್ಯೆಯನ್ನು ಮರೆಮಾಚಲಾಗಿದ್ದು ಬಹಿರಂಗಪಡಿಸಲೇಬೇಕೆಂದು ಆದೇಶಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸಂಪೂರ್ಣವಾದ ದತ್ತಾಂಶವನ್ನು ಇನ್ನೂ ಹಲವು ಆಕ್ರಮಗಳು ಬಯಲಾಗಬಹುದು. ಹಾಗಾಗಿಯೇ ಚುನಾವಣಾ ಬಾಂಡ್ ತೀವ್ರ ಸಂಚಲನ ಉಂಟುಮಾಡಿದೆ. ಯಾರನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂದು ತಿಳಿಯಲು ಬಹಳ ದಿನ ಕಾಯಬೇಕಾಗಿಲ್ಲ.

Previous Post
ಉಪನಗರ ರೈಲು: ದೇಶದಲ್ಲೇ ಅತಿ ಉದ್ದದ (100 ಅಡಿ) ಯು-ಗರ್ಡರ್ ನಿರ್ಮಾಣ ವೀಕ್ಷಿಸಿದ ಮೂಲಸೌಕರ್ಯ ಸಚಿವರು
Next Post
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂದಲ್ಲಿ ಮತ ಎಣಿಕೆ ದಿನಾಂಕ‌ ಬದಲು

Recent News