ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಲಯದಲ್ಲಿಲ್ಲ ಎಸ್ಬಿಐ ವಿರುದ್ಧ ಸುಪ್ರೀಂ ಗರಂ ಗುರುವಾರ ಸಂಜೆಯೊಳಗೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ
ನವದೆಹಲಿ : ಚುನಾವಣಾ ಬಾಂಡ್ಗಳ ಬಗ್ಗೆ ಪೂರ್ಣ ಪ್ರಮಾಣ ಮಾಹಿತಿ ನೀಡದ ಎಸ್ಬಿಐ ಅನ್ನು ಮತ್ತೆ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ಯುನಿಕ್ ಆಲ್ಫಾನ್ಯೂಮರಿಕ್ ಸಂಖ್ಯೆ ಮತ್ತು ರಿಡೀಮ್ ಮಾಡಿದ ಬಾಂಡ್ಗಳ ಸೀರಿಯಲ್ ನಂಬರ್ ಸೇರಿದಂತೆ ಚುನಾವಣಾ ಬಾಂಡ್ಗಳ ಅಗತ್ಯ ಎಲ್ಲಾ ವಿವರಗಳನ್ನು ಗುರುವಾರ ಸಂಜೆ 5 ಗಂಟೆಯೊಳಗೆ ಬಹಿರಂಗಪಡಿಸುವಂತೆ ನಿರ್ದೇಶನ ನೀಡಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ, ಎಸ್ಬಿಐನಿಂದ ಮಾಹಿತಿ ಪಡೆದ ತಕ್ಷಣ ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಪರಿಷ್ಕೃತ ವಿವರಗಳನ್ನು ಅಪ್ಲೋಡ್ ಮಾಡಬೇಕು, ಎಲ್ಲ ಪ್ರಕ್ರಿಯೆ ಬಳಿಕ ಎಸ್ಬಿಐ ಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಬೇಕು ಎಂದು ಸೂಚಿಸಿದೆ.
ವಿವರಗಳನ್ನು ಬಹಿರಂಗಪಡಿಸಬೇಕಾಗಿದೆ, ಮಾಹಿತಿ ನಿಷ್ಪಕ್ಷಪಾತವಾಗಿರಬೇಕು, ಯಾವ ಮಾಹಿತಿಯೂ ಮುಚ್ಚಿಟ್ಟಲ್ಲ ಎಂದು ಖಚಿತಪಡಿಸಿಕೊಳ್ಳಬೇಕು, ನೀವು ರಾಜಕೀಯ ಪಕ್ಷಕ್ಕಾಗಿ ನ್ಯಾಯಲಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ನಾವು ಭಾವಿಸುತ್ತೇವೆ ಪ್ರತಿಯೊಂದು ಸಂಭಾವ್ಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಸ್ಪಷ್ಟಪಡಿಸಿದರು.
ಚುನಾವಣಾ ಬಾಂಡ್ ಸಂಖ್ಯೆಯನ್ನು ಬಹಿರಂಗಪಡಿಸದೆ ಆ ಮೂಲಕ ತನ್ನ ಹಿಂದಿನ ತೀರ್ಪನ್ನು ಸಂಪೂರ್ಣವಾಗಿ ಅನುಸರಿಸದಿದ್ದಕ್ಕಾಗಿ ಎಸ್ಬಿಐ ಅನ್ನು ಸುಪ್ರೀಂಕೋರ್ಟ್ ಈ ಹಿಂದೆಯೂ ತರಾಟೆಗೆ ತೆಗೆದುಕೊಂಡಿತ್ತು. ದಾನಿಗಳನ್ನು ಸ್ವೀಕರಿಸುವವರಿಗೆ ಲಿಂಕ್ ಮಾಡುವ ಚುನಾವಣಾ ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸಬೇಕು ಎಂದು ಉನ್ನತ ನ್ಯಾಯಾಲಯವು ಹೇಳಿತ್ತು.
ವಿಚಾರಣೆ ವೇಳೆ ಚುನಾವಣಾ ಬಾಂಡ್ಗಳ ಯೋಜನೆಯನ್ನು ರದ್ದುಗೊಳಿಸಿದ ತೀರ್ಪನ್ನು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಕೇಂದ್ರ ಸರ್ಕಾರದ ಕಳವಳ ವ್ಯಕ್ತಪಡಿಸಿತು. ರಾಜಕೀಯ ಪಕ್ಷಗಳು ಖರೀದಿಸಿರುವ ಚುನಾವಣಾ ಬಾಂಡ್ಗಳ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ತಿರುಚಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಂವಿಧಾನಿಕ ಸಿಜೆ ಡಿವೈ ಚಂದ್ರಚೂಡ್, ನಮ್ಮ ತೀರ್ಪುಗಳನ್ನು ಮೂರನೇ ವ್ಯಕ್ತಿಗಳು ಹೇಗೆ ಅರ್ಥೈಸುತ್ತಾರೆ ಎಂಬುದರ ಬಗ್ಗೆ ಕಾಳಜಿಯಿಲ್ಲ, ನ್ಯಾಯಾಧೀಶರಾಗಿ ನಾವು ಕೇವಲ ಕಾನೂನಿನ ನಿಯಮದಲ್ಲಿದ್ದೇವೆ ಮತ್ತು ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ. ನ್ಯಾಯಾಲಯವು ಈ ರಾಜಕೀಯದಲ್ಲಿ ಕಾನೂನಿನ ಆಡಳಿತಕ್ಕಾಗಿ ಮಾತ್ರ ಕೆಲಸ ಮಾಡುವುದು. ನಾವು ತೀರ್ಪಿನ ಪ್ಯಾರಾ ಬಿ ಮತ್ತು ಸಿ ಯಲ್ಲಿ ಮಾತ್ರ ನಮ್ಮ ನಿರ್ದೇಶನಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.