ಬಿಜೆಪಿಯಿಂದ ಅನ್ಯಾಯ: ಎನ್ಡಿಎ ತೊರೆದು, ಸಂಪುಟಕ್ಕೆ ರಾಜೀನಾಮೆ ನೀಡಿದ ಪಾಸ್ವಾನ್
ನವದೆಹಲಿ, ಮಾ. 19: ಕೇಂದ್ರ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿದ್ದ ಪಶುಪತಿ ಕುಮಾರ್ ಪಾರಸ್ ಅವರು ಎನ್ಡಿಎ ಮೈತ್ರಿಕೂಟ ತೊರೆದು, ಕೇಂದ್ರ ಸಂಪುಟಕ್ಕೆ ರಾಜನಾಮೇ ನೀಡಿದ್ದಾರೆ. ಬಿಹಾರದ ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ತಮ್ಮ ಪಕ್ಷಕ್ಕೆ ಸರಿಯಾದ ಆದ್ಯತೆ ನೀಡದಿದ್ದಕ್ಕಾಗಿ ಬಿಜೆಪಿ ನಾಯಕತ್ವದ ವಿರುದ್ಧ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (ಆರ್ಎಲ್ಜೆಪಿ) ಮುಖ್ಯಸ್ಥ ಅಸಮಾಧಾನಗೊಂಡಿದ್ದಾರೆ ಮತ್ತು ಬಿಜೆಪಿ ನಾಯಕತ್ವವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
“ನಾನು ನನ್ನ ರಾಜೀನಾಮೆಯನ್ನು ಕಳುಹಿಸಿದ್ದೇನೆ. ನಾನು ಇನ್ನೂ ಪ್ರಧಾನಿಗೆ ಕೃತಜ್ಞನಾಗಿದ್ದೇನೆ ಆದರೆ ನನಗೆ ಮತ್ತು ನನ್ನ ಪಕ್ಷಕ್ಕೆ ಅನ್ಯಾಯ ಮಾಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆಯಾಗುವವರೆಗೆ ಕಾದು ನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಾರ್ಚ್ 18 ರಂದು ಎನ್ಡಿಎ ಬಿಹಾರದಲ್ಲಿ ಲೋಕಸಭೆ ಚುನಾವಣೆಗೆ ತನ್ನ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿತು, ಬಿಜೆಪಿ 17 ಕ್ಷೇತ್ರಗಳಲ್ಲಿ, ಜೆಡಿ (ಯು) 16 ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ (ರಾಮ್ ವಿಲಾಸ್) ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿತು. ಆದರೆ ಇದನ್ನು ಬದಲಿಸಿ ತಮ್ಮ ಬಣಕ್ಕೂ ಸೀಟು ಹಂಚಿಕೆ ಮಾಡುವಂತೆ ಪಶುಪತಿ ಕುಮಾರ್ ಪಾರಸ್ ಹೇಳಿದ್ದರು. ಆದರೆ ಈ ಕುರಿತು ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪಶುಪತಿ ಕುಮಾರ್ ಪಾರಸ್ ಎನ್ಡಿಎ ಮೈತ್ರಿಕೂಟ ತೊರೆದು, ಕೇಂದ್ರ ಸಂಪುಟಕ್ಕೆ ರಾಜನಾಮೇ ನೀಡಿದ್ದಾರೆ