ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳ ಪ್ರಸಾರ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಕ್ಷಮೆ ಒಪ್ಪದ ಸುಪ್ರೀಂಕೋರ್ಟ್

ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳ ಪ್ರಸಾರ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಕ್ಷಮೆ ಒಪ್ಪದ ಸುಪ್ರೀಂಕೋರ್ಟ್

ನವದೆಹಲಿ : ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಕೋರಿದ ಕ್ಷಮೆಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ ಹಿಮಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು ಇಂದು ಕೋರ್ಟ್ ಮುಂದೆ ಹಾಜರಾಗಿದ್ದ ಆಚಾರಿ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದೆ.

ಕಳೆದ ನವೆಂಬರ್‌ನಲ್ಲಿ ಪತಂಜಲಿ ವಕೀಲರು ನ್ಯಾಯಾಲಯದ ಮುಂದೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಡೆಯುವುದಾಗಿ ಭರವಸೆ ನೀಡಿದ ಹೊರತಾಗಿಯೂ ಪತಂಜಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿತ್ತು. ಈ ಹಿನ್ನಲೆ ಕೋರ್ಟ್ ಫೆಬ್ರವರಿ 27 ರಂದು ಪತಂಜಲಿ ಆಯುರ್ವೇದ್ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು, ಖುದ್ದು ಹಾಜರಾತಿಗೆ ಸೂಚಿಸಿತ್ತು.

ಇಂದು ಕೋರ್ಟ್ ಮುಂದೆ ಹಾಜರಾದ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಬೇಷರತ್ ಕ್ಷಮೆ ಕೋರಿ ಅಫಿಡೆವಿಟ್ ಸಲ್ಲಿಸಿದರು. ಅಫಿಡೆವಿಟ್ ನಲ್ಲಿ ಜಾಹೀರಾತು ಪ್ರಸಾರಕ್ಕೆ ತಡೆ ನೀಡುವ ಆದೇಶ ನಮ್ಮ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ ಹೀಗಾಗೀ ತಪ್ಪಾಗಿದೆ ಎಂದು ಆಚಾರ್ಯ ಬಾಲಕೃಷ್ಣ ಕ್ಷಮೆ ಕೇಳಿದ್ದರು, ಆದರೆ ಈ ಕಾರಣವನ್ನು ಕೋರ್ಟ್ ಒಪ್ಪಿಕೊಂಡಿಲ್ಲ.

ಸಂಸ್ಥೆಯ ಎಂಡಿ ಅವರು ಈ ವಿಷಯದಲ್ಲಿ “ಅಜ್ಞಾನವನ್ನು ತೋರಿಸಲು” ಸಾಧ್ಯವಿಲ್ಲ ಮತ್ತು ಮಾಧ್ಯಮ ವಿಭಾಗವನ್ನು “ಸ್ವತಂತ್ರ ದ್ವೀಪ” ಎಂದು ಪರಿಗಣಿಸಲಾಗುವುದಿಲ್ಲ. ಒಮ್ಮೆ ನ್ಯಾಯಾಲಯಕ್ಕೆ ಭರವಸೆ ನೀಡಿದರೆ ನಂತರ ಅದನ್ನು ಸಂಪೂರ್ಣವಾಗಿ ಪಾಲಿಸಬೇಕು. ಕೆಳ ಹಂತಕ್ಕೆ ನಿರ್ದೇಶಿಸುವುದು ಯಾರ ಕರ್ತವ್ಯ? ಎಂದು ನ್ಯಾಯಮೂರ್ತಿ‌ಹಿಮ ಕೊಹ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಚಾರ್ಯ ಬಾಲಕೃಷ್ಣ ಪರ ವಕೀಕರು ಇದರಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿರು, ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ನ್ಯಾ. ಹಿಮ ಕೊಹ್ಲಿ, ನಿಮ್ಮ ಪಶ್ಚಾತ್ತಾಪವು ನ್ಯಾಯಾಲಯಕ್ಕೆ ಸಾಕಾಗದೇ ಇರಬಹುದು. ಈಗ ನೀವು ಕ್ಷಮಿಸಿ ಎಂದು ಹೇಳಲು, ನಾವು ಕ್ಷಮಿಸಿದ್ದೇವೆ ಎಂದು ಸಹ ಹೇಳಬಹುದು. ಅಂತಹ ವಿವರಣೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ, ನಿಮ್ಮ ಮಾಧ್ಯಮ ವಿಭಾಗವು ಸ್ವತಂತ್ರ ಇಲಾಖೆಯಲ್ಲ, ಅಲ್ಲವೇ? ನ್ಯಾಯಾಲಯದ ವಿಚಾರಣೆಯಲ್ಲಿ ಏನಾಗುತ್ತಿದೆ ತಿಳಿದಿಲ್ಲ ಎಂದರೆ ಹೇಗೆ? ಈ ಸಮಧಾನಿಸುವ ಮಾತುಗಳು ಬೇಡ ಎಂದು ಆಕ್ರೋಶ ಹೊರ ಹಾಕಿದರು‌.

ಬಳಿಕ ಕೋರ್ಟ್ ಮುಂದೆ ಹಾಜರಾಗಿದ್ದ ಯೋಗ ಗುರು ಬಾಬಾ ರಾಮದೇವ್ ಯಾವುದೇ ಅಫಿಡೆವಿಟ್ ಸಲ್ಲಿಸಿದಿರುವುದು ಗಮನಿಸಿದ ಕೋರ್ಟ್ ಇದನ್ನು ಪ್ರಶ್ನಿಸಿತು. ಈ ವಿಷಯವನ್ನು ಅದರ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿತು. ಇದಕ್ಕೆ ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್, ಕಕ್ಷಿದಾರರು ಭೌತಿಕವಾಗಿ ಕೋರ್ಟ್‌ಗೆ ಹಾಜರಾಗಿದ್ದಾರೆ, ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಾಗಿದ್ದಾರೆ. ಅಫಿಡೆವಿಟ್ ಮೂಲಕ ಕ್ಷಮೆ ಕೋರುವುದಾದರೆ ಸಿದ್ಧ ಎಂದು ಹೇಳಿದರು.

ಆದರೆ ನ್ಯಾ.ಹಿಮ ಕೊಹ್ಲಿ ಇದಕ್ಕೆ ಒಪ್ಪಲಿಲ್ಲ, ಸಂಸ್ಥೆಯ ಸಹ ಸಂಸ್ಥಾಪಕರಾಗಿರುವುದರಿಂದ ನ್ಯಾಯಾಲಯದ ಆದೇಶದ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ನಾವು ನಂಬಲು ನಿರಾಕರಿಸುತ್ತೇವೆ. ಇದಲ್ಲದೆ, ಅವರು ನಮ್ಮ ಆದೇಶದ 24 ಗಂಟೆಗಳ ಒಳಗೆ ಪತ್ರಿಕಾಗೋಷ್ಠಿಯನ್ನು ಸಹ ಮಾಡಿದ್ದಾರೆ. ನೀವು ಆದೇಶದ ಬಗ್ಗೆ ತಿಳಿದಿದ್ದೀರಿ ಮತ್ತು ಅದರ ಹೊರತಾಗಿಯೂ ಉಲ್ಲಂಘಿಸಿದ್ದೀರಿ ಎಂದು ನಿಮ್ಮ ನಡುವಳಿಕೆ ತೋರಿಸುತ್ತದೆ ಎಂದರು. ಕಡೆಗೆ ವಾದ ಆಲಿಸಿದ ಬಳಿಕ ಮುಂದಿನ ವಿಚಾರಣೆಗೂ ವೈಯಕ್ತಿಕವಾಗಿ ಹಾಜರಾಗಬೇಕು, ಪ್ರಕರಣವನ್ನು ಏಪ್ರಿಲ್ 10 ರಂದು ವಿಚಾರಣೆ ನಡೆಸಲಾಗುವುದು, ಪತಂಜಲಿ ಮತ್ತು ಅದರ ಆಡಳಿತ ಮಂಡಳಿಗೆ ಕ್ಷಮಾಪಣೆಯನ್ನು ಅಫಿಡವಿಟ್ ಮೂಲಕ ಸಲ್ಲಿಸಲು ಪೀಠ ಆದೇಶಿಸಿತು.

Previous Post
ನೀತಿ ಸಂಹಿತೆ ಜಾರಿ, ಟೋಲ್ ದರ ಪರಿಷ್ಕರಣೆ ಸದ್ಯಕ್ಕಿಲ್ಲ
Next Post
6 ಐಪಿಎಸ್, 3 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ಚುನಾವಣಾ ಆಯೋಗ

Recent News