ಹೇಮಂತ್ ಸೊರೆನ್ ಬಂಧನ ಖಂಡಿಸಿ ಪ್ರತಿಭಟಿಸಿದ ಆದಿವಾಸಿಗಳ ವಿರುದ್ಧ FIR

ಹೇಮಂತ್ ಸೊರೆನ್ ಬಂಧನ ಖಂಡಿಸಿ ಪ್ರತಿಭಟಿಸಿದ ಆದಿವಾಸಿಗಳ ವಿರುದ್ಧ FIR

ರಾಂಚಿ, ಏ. 13: ಆದಿವಾಸಿಗಳ ಸರಹುಲ್ ಹಬ್ಬದ ಆಚರಣೆಯ ವೇಳೆ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬಂಧನ ಖಂಡಿಸಿ ಪ್ರತಿಭಟಿಸದ ಆದಿವಾಸಿಗಳ ಮೇಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿನ ಅಧಿಕಾರಿಗಳು ಆಡಳಿತಾರೂಢ ಸರ್ಕಾರದ ವಿರುದ್ಧ ಚುನಾವಣಾ ಆಯೋಗದ ಸೂಚನೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಜೆಎಂಎಂ ಆರೋಪಿಸಿದೆ. ವರದಿಗಳ ಪ್ರಕಾರ, ಸರ್ಹುಲ್ ಮೆರವಣಿಗೆಗೆ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಲಾದ ರಾಂಚಿ ಜಿಲ್ಲಾ ಶಿಕ್ಷಣಾಧಿಕಾರಿ ವಿನಯ್ ಕುಮಾರ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ 24 ಮಂದಿ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೋಸ್ಟರ್‌ನಲ್ಲಿ ಹೇಮಂತ್ ಸೊರೇನ್‌, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಹಿಂದಿ ಭಾಷೆಯಲ್ಲಿ ಸಂದೇಶವನ್ನು ತೋರಿಸುವ ಟ್ಯಾಬ್ಲೋ ಚಿತ್ರಗಳನ್ನು ಹೊಂದಿತ್ತು. ಜೈಲು ಬೀಗ ಮುರಿಯಲಾಗುವುದು, ಹೇಮಂತ್ ಸೊರೆನ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿತ್ತು. ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಧಾರ್ಮಿಕ ಸಂದರ್ಭವನ್ನು ಬಳಸಿಕೊಂಡ ಆರೋಪದಲ್ಲಿ ಕೇಂದ್ರ ಸರ್ನಾ ಸಮಿತಿಯ ಅಧ್ಯಕ್ಷ ಫೂಲ್‌ಚಂದ್ ಟಿರ್ಕಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಟ್ಯಾಬ್ಲೋಗೆ ಸಂಬಂಧಿಸಿದ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಲಾಗಿದೆ ಎಂದು ಎಫ್‌ಐಆರ್‌ ಸೂಚಿಸುತ್ತದೆ.

ವಿನಯ್ ಕುಮಾರ್ ದೂರಿನ ಮೇರೆಗೆ ಮೆರವಣಿಗೆ ನಡೆಸಿದ ಕೇಂದ್ರ ಸರನಾ ಸಮಿತಿಯ ವಿರುದ್ಧ ಅರಗೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರ್ಯಾಲಿಯ ಆಯೋಜಕರು ರಾಜಕೀಯ ವಿಷಯಗಳನ್ನು ಮುನ್ನೆಲೆಗೆ ತರಲು ಧಾರ್ಮಿಕ ಸಂದರ್ಭವನ್ನು ಬಳಸಿದ್ದರಿಂದ ನಾವು ದೂರು ನೀಡಲು ನಿರ್ಧರಿಸಿದ್ದೇವೆ, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಿನಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸರ್ನಾ ಸಮಿತಿಯ ನಾಯಕ ಅಜಯ್ ಟಿರ್ಕಿ, ಇದು ಕಲ್ಪಿತ ಭೂ ಹಗರಣದ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಇಡಿ ಬಂಧಿಸಿರುವುದರ ವಿರುದ್ಧ ಬಹುಪಾಲು ಆದಿವಾಸಿಗಳ ಪ್ರತಿಭಟನೆಯಾಗಿತ್ತು. ರ್ಯಾಲಿಯಲ್ಲಿ ಪಕ್ಷದ ಧ್ವಜ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರುಗಳನ್ನು ಬಳಸಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ನಮ್ಮ ಭಾವನೆಗಳನ್ನು ತೋರಿಸುವುದು ಕಾನೂನುಬಾಹಿರವೇ? ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಪ್ರಕರಣ ಬರುವುದಿಲ್ಲ ಎಂದು ಸರ್ನಾ ಸಮಿತಿಯ ಬುಡಕಟ್ಟು ನಾಯಕ ಅಜಯ್ ಟಿರ್ಕಿ ಹೇಳಿದ್ದಾರೆ.

Previous Post
ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವ ಉಳಿಸಲು ಕೊನೆ ಅವಕಾಶ: ಚಿದಂಬರಂ
Next Post
ಕೇಜ್ರಿವಾಲ್ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ನೀಡುತ್ತಿಲ್ಲ: ಸಂಜಯ್ ಸಿಂಗ್

Recent News