
ನವದೆಹಲಿ, ಏ. 20 : ವಯನಾಡ್ನಲ್ಲೂ ಜನ ಬೆಂಬಲ ಸಿಗುವುದು ಕಷ್ಟಕರವಾಗಿರುವುದರಿಂದ ಕಾಂಗ್ರೇಸ್ ರಾಜಕುಮಾರ್ ಅಲ್ಲಿಂದಲೂ ಓಡಿ ಹೋಗಲಿದ್ದಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ಸಂಸದ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ದಾರೆ. ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೇಸದ ವಿರುದ್ಧ ವಾಗ್ದಾಳಿ ನಡೆಸಿದರು. ಅಮೇಥಿಯಲ್ಲಿ ಜನ ಬೆಂಬಲ ಸಿಗದೇ ಓಡಿ ಹೋದ ರಾಹುಲ್ ಗಾಂಧಿ ವಯನಾಡ್ ನಿಂದ ಸ್ಪರ್ಧಿಸಿದ್ದಾರೆ, ಇಲ್ಲೂ ಜನ ಬೆಂಬಲ ಸಿಗುವುದು ಕಷ್ಟವಾಗಿದೆ ಹೀಗಾಗೀ ಅವರ ಗ್ಯಾಂಗ್ ಚುನಾವಣೆ ಮುಗಿಯಲು ಕಾಯುತ್ತಿದೆ, ಚುನಾವಣೆ ಮುಗಿಯುತ್ತಿದ್ದಂತೆ ವಯನಾಡ್ ನಿಂದಲೂ ಓಡಿ ಹೋಗಲಿದ್ದಾರೆ ಎಂದು ಅಪಹಾಸ್ಯ ಮಾಡಿದರು. ಇಂಡಿಯಾ ಒಕ್ಕೂಟದ ನಾಯಕ ಯಾರು ಎಂದು ಹೇಳಲು ವಿರೋಧ ಪಕ್ಷದ ನಾಯಕರು ವಿಫಲವಾಗಿದ್ದಾರೆ, ಅವರು (ಕಾಂಗ್ರೆಸ್) ಏನು ಬೇಕಾದರೂ ಹೇಳಿಕೊಳ್ಳಬಹುದು, ಆದರೆ ವಾಸ್ತವವೆಂದರೆ ಚುನಾವಣೆಯ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದ ಅವರು ದೊಡ್ಡ ಪ್ರಮಾಣ ಮತದಾನ ಮಾಡುವ ಮೂಲಕ ಎನ್ಡಿಎ ಒಕ್ಕೂಟ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ನಿನ್ನೆ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ, ಮತದಾನ ಮಾಡಿದ ಎಲ್ಲರಿಗೂ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಮತದಾನ ಮುಗಿದ ನಂತರ ಬೂತ್ ಮಟ್ಟದಲ್ಲಿ ನಡೆಸಲಾದ ವಿಶ್ಲೇಷಣೆ ಪ್ರಕಾರ ಮೊದಲ ಹಂತದಲ್ಲಿ ಎನ್ಡಿಎಗೆ ಏಕಪಕ್ಷೀಯ ಮತದಾನವಾಗಿದೆ ಎಂದು ಹೇಳಿದರು.