ಮಮತಾ ಬ್ಯಾನರ್ಜಿಗೆ ನಿಮ್ಮ ಬೆಲೆ ಎಷ್ಟು ಎಂದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ 24 ಗಂಟೆ ಪ್ರಚಾರದಿಂದ ನಿಷೇಧ
ನವದೆಹಲಿ : ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾಮರ್ಜಿ ಅವರಿಗೆ ನಿಮ್ಮ ಬೆಲೆ ಎಷ್ಟು ಎಂದು ಪ್ರಶ್ನಿಸಿದ್ದ ಪಶ್ಚಿಮ ಬಂಗಾಳದ ತಮ್ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಹೇಳಿಕೆಯನ್ನು ಚುನಾವಣಾ ಆಯೋಗ ಖಂಡಿಸಿದೆ. 24 ಗಂಟೆಗಳ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿದೆ.
ಕೊಲ್ಕತ್ತಾ ಹೈಕೋರ್ಟ್ ನ್ಯಾಯಧೀಶರಾಗಿದ್ದ ಅಭಿಜಿತ್ ಗಂಗೋಪಾಧ್ಯಾಯ ಅವರು ರಾಜೀನಾಮೆ ನೀಡಿ ಬಿಜೆಪಿಯಿಂದ ಚುನಾವಣೆ ಸ್ಪರ್ಧಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುವ ಭರದಲ್ಲಿ ನಿಮ್ಮ ಬೆಲೆ ಎಷ್ಟು ಎಂದು ಕೇಳಿದ್ದರು.
ಈ ಹೇಳಿಕೆಗೆ ವಿರುದ್ಧ ದೂರು ನೀಡಿದ್ದ ಟಿಎಂಸಿ, ಇದು ಬಿಜೆಪಿ ಅಭ್ಯರ್ಥಿಯ ಸ್ತ್ರೀದ್ವೇಷದ ನಡವಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನ್ಯಾಯಾಂಗದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದ ಅವರು ಮಹಿಳೆಯರ, ವಿಶೇಷವಾಗಿ ಅಧಿಕಾರದ ಸ್ಥಾನದಲ್ಲಿರುವ ಮಹಿಳೆಯ ಘನತೆಯ ಮೇಲೆ ದಾಳಿ ಮಾಡಲು ಕೀಳಿ ಮಟ್ಟದ ದಾರಿ ಆರಿಸಿಕೊಂಡಿರುವುದು ದುರದೃಷ್ಟಕರ ಎಂದು ಹೇಳಿತ್ತು.
ದೂರಿನ ಅನ್ವಯ ಪ್ರತಿಕ್ರಿಯಿಸಿರುವ ಆಯೋಗ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು ಇದರಲ್ಲಿ ಅಭಿಜಿತ್ ಗಂಗೋಪಾಧ್ಯಾಯರ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸಿದೆ ಅವರು “ಕೆಳಮಟ್ಟದ ವೈಯಕ್ತಿಕ ದಾಳಿಯನ್ನು” ಮಾಡಿದ್ದಾರೆ ಎಂದು ಮನವರಿಕೆಯಾಗಿದೆ, ಈ ಮೂಲಕ ಅವರು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ.
ಅಭಿಜಿತ್ ಗಂಗೋಪಾಧ್ಯಾಯರ ದುರ್ನಡತೆಯನ್ನು ಆಯೋಗವು ಬಲವಾಗಿ ಖಂಡಿಸುತ್ತದೆ, 21 ಮೇ 2024 ರ ಸಂಜೆ ಐದು ಗಂಟೆಯಿಂದ ಜಾರಿಗೆ ಬರುವಂತೆ ಮುಂದಿನ 24 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿರ್ಬಂಧಿಸಿದೆ. ಮುಂದೆ ಸಾರ್ವಜನಿಕವಾಗಿ ಮಾತನಾಡುವಾಗ ಜಾಗರೂಕರಾಗಿರಲು ಆಯೋಗವು ಅಭಿಜಿತ್ ಗಂಗೋಪಾಧ್ಯಾಯರಿಗೆ ಕಟ್ಟುನಿಟ್ಟಾಗಿ ಎಚ್ಚರಿಸುತ್ತದೆ ಎಂದು ತಿಳಿಸಿದೆ.