ನವಜಾತು ಶಿಶು ಆಸ್ಪತ್ರೆಗೆ ಬೆಂಕಿ, 7 ಹಸುಗೂಸುಗಳು ಸಾವು
ನವದೆಹಲಿ : ವಿವೇಕ್ ವಿಹಾರ್ ಪ್ರದೇಶದ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಏಳು ನವಜಾತ ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯಲ್ಲಿ ಒಟ್ಟು 12 ನವಜಾತ ಶಿಶುಗಳಿದ್ದು, ಉಳಿದ ಐದು ಶಿಶುಗಳ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯ ಮಾಲೀಕ ನವೀನ್ ಕಿಚಿ ವಿರುದ್ಧ ಐಪಿಸಿಯ ಸೆಕ್ಷನ್ 336 (ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯ), 304 ಎ (ನಿರ್ಲಕ್ಷ್ಯದಿಂದ ಸಾವು) ಮತ್ತು 34 (ಅಪರಾಧ ಚಟುವಟಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.
ಘಟನೆಯ ಬಗ್ಗೆ ಮಾತನಾಡಿದ ಡಿಸಿಪಿ ಶಾಹದಾರ, ಶನಿವಾರ ರಾತ್ರಿ 11.30ರ ಸುಮಾರಿಗೆ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆ ಹಾಗೂ ಪಕ್ಕದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಪಿಸಿಆರ್ ಕರೆ ಬಂದಿತ್ತು. ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ದೆಹಲಿ ಅಗ್ನಿಶಾಮಕ ದಳದ 16 ಅಗ್ನಿಶಾಮಕ ವಾಹನಗಳನ್ನು ರವಾಮಿಸಿ ಭಾನುವಾರ ಮುಂಜಾನೆ ಬೆಂಕಿಯನ್ನು ನಂದಿಸಲಾಯಿತು ಎಂದು ತಿಳಿಸಿದರು.
ಘಡನೆಗೆ ಸಿಲಿಂಡರ್ ಸ್ಫೋಟ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕಿರಿದಾದ ಸ್ಥಳದಲ್ಲಿ ಆಸ್ಪತ್ರೆ ನಡೆಸಲಾಗುತ್ತಿತ್ತು ಯಾವುದೇ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸರಲಿಲ್ಲ, ಆಸ್ಪತ್ರೆಯ ಕೆಳ ಭಾಗದಲ್ಲಿ ಸಿಲಿಂಡರ್ ರಿಫಿಲಿಂಗ್ ಕಾರ್ಯ ನಡೆಯುತ್ತಿತ್ತು ಗ್ಯಾಸ್ ಲೀಕ್ ಆಗಿರುವ ಹಿನ್ನಲೆ ಹಿನ್ನಲೆ ಬೆಂಕಿ ಹೊತ್ತಿರಬಹುದು ಎನ್ನಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘಟನೆಯ ಬಗ್ಗೆ ಟ್ವಿಟ್ ಮಾಡಿದ್ದು ಇದು ಹೃದಯ ವಿದ್ರಾವಕ ಘಟನೆ ಎಂದು ಹೇಳಿದ್ದಾರೆ. ಘಟನೆಯ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಈ ನಿರ್ಲಕ್ಷ್ಯಕ್ಕೆ ಕಾರಣರಾದವರನ್ನು ಬಿಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ದುರಂತದ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, ನಿರ್ಲಕ್ಷ್ಯದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.