ಕಾಂಗ್ರೆಸ್, ಎಸ್ಪಿ ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ
ಡಿಯೋರಿಯಾ ( ಉತ್ತರಪ್ರದೇಶ): ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳಿಗೆ ಗಡಿಯಾಚೆಗಿನ ‘ಜಿಹಾದಿಗಳು’ ಬೆಂಬಲಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಭಾನುವಾರ ಗಂಭೀರ ಆರೋಪ ಮಾಡಿದರು.
ಬನ್ಸ್ಗಾಂವ್ ಮತ್ತು ಡಿಯೋರಿಯಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪಾಕಿಸ್ತಾನ ಮತ್ತು ಗಡಿಯಾಚೆಗಿನ ಜಿಹಾದಿಗಳು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಗೆಲುವಿಗಾಗಿ ಪ್ರಾರ್ಥನೆ ನಡೆಸುವ ಮೂಲಕ ವೋಟ್ ಜಿಹಾದ್ ನಡೆಸಲಾಗುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ವಿರೋಧಿಸಿದ್ದಕ್ಕಾಗಿ ‘ಇಂಡಿಯಾ ಮೈತ್ರಿಕೂಟದ ಜಮಾತ್’ ನನ್ನನ್ನು ನಿಂದಿಸುತ್ತಿದೆ ಎಂದು ಆರೋಪಿಸಿದರು. ‘ನಾವು ಅಧಿಕಾರಕ್ಕೆ ಬಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಮತ್ತು ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡುವ ಕಾನೂನಾದ CAA ಅನ್ನು ನಾವು ರದ್ದುಗೊಳಿಸುತ್ತೇವೆ ಎಂದು ಇಂಡಿಯಾ ಮೈತ್ರಿಕೂಟ ಜಮಾತ್ ಹೇಳುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.
‘ಉತ್ತರಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುವ ದಿನ ದೂರವಿಲ್ಲ, ಮತ್ತು ಬ್ರಹ್ಮೋಸ್ ಕ್ಷಿಪಣಿಗಳು ಅವರ ಭಯವು ವ್ಯಾಪಕವಾಗಿದೆ’ ಎಂದು ಪ್ರಧಾನಿ ಹೇಳಿದರು. ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳಿಗೆ ಬೇಡಿಕೆಯಿದೆ, ಆದರೆ ಕಾಂಗ್ರೆಸ್ ಬ್ರಹ್ಮೋಸ್ ಕ್ಷಿಪಣಿ ಖರೀದಿ ಮಾಡಲು ಅಡ್ಡಗಾಲು ಹಾಕುವ ಮೂಲಕ ರಕ್ಷಣಾ ವಲಯದ ಪ್ರಗತಿಗೆ ಮಾರಕವಾಗಿತ್ತು ಎಂದು ಮೋದಿ ಆರೋಪಿಸಿದರು. 2024ರ ಜೂನ್ 04ರ ಭಾರತದ ಭವಿಷ್ಯವನ್ನು ನಿರ್ಧರಿಸುವ ದಿನವಾಗಲಿದೆ. 140ಕೋಟಿ ಭಾರತೀಯರ ಕನಸಾಗಿರುವ ಅಮೃತ ಕಾಲದತ್ತ ಹೋಗುವ ಸಮಯ ಎಂದು ಹೇಳಿದರು.