‘ಗಾಂಧಿ ಸಿನೆಮಾ ಬರುವವರೆಗೆ ಮಹಾತ್ಮಾ ಗಾಂಧಿ ಯಾರೆಂದೇ ಗೊತ್ತಿರಲಿಲ್ಲ‘ ಮೋದಿ ಉವಾಚ
ಲೋಕಸಭಾ ಚುನಾವಣೆಯ ಹಲವಾರು ವಿಷಯಗಳ ಮಧ್ಯೆ ಈಗ ಪ್ರಧಾನಿ ಮೋದಿ ಅವರ ಮಹಾತ್ಮಾ ಗಾಂಧಿ ಬಗೆಗಿನ ಹೇಳಿಕೆ ಭಾರಿ ವೈರಲ್ ಆಗಿದ್ದು, ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 1982ರಲ್ಲಿ ‘ಗಾಂಧಿ ‘ ಎಂಬ ಹೆಸರಿನ ಸಿನೆಮಾ ಬರುವವರೆಗೆ ಜನರಿಗೆ ಮಹಾತ್ಮಾ ಗಾಂಧಿ ಯಾರೆಂದೇ ಗೊತ್ತಿರಲಿಲ್ಲ. ಸಿನಿಮಾ ಬಂದ ಬಳಿಕ ಜನ ಗಾಂಧಿ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದ್ದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹಾತ್ಮಾ ಗಾಂಧಿಗೆ ಸಿಗಬೇಕಾದ ಗೌರವ, ಗುರುತನ್ನು ಕೊಡುವಲ್ಲಿ ಸೋತಿದ್ದಾರೆ. ಎಂದು ಮೋದಿ ಹೇಳಿದ್ದಾರೆ. ಮಹಾತ್ಮಾ ಗಾಂಧಿ ಶ್ರೇಷ್ಠ ವ್ಯಕ್ತಿ, ಅವರಿಗೆ ಜಾಗತಿಕ ಮನ್ನಣೆ ನೀಡುವುದು ನಮ್ಮ ಜವಾಬ್ದಾರಿ . ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ರೀತಿ ಮಹಾತ್ಮಾ ಗಾಂಧಿಯನ್ನೂ ಜಗತ್ತು ತಿಳಿದುಕೊಳ್ಳಬೇಕು. ಮಹಾತ್ಮಾ ಗಾಂಧಿ ಮೂಲಕ ಭಾರತವನ್ನು ಗುರುತಿಸಬೇಕು ಎಂದು ಮೋದಿ ಹೇಳಿದರು. ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ವಿಪಕ್ಷಗಳ ತಿಳುವಳಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ಪ್ರಧಾನಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಮಹಾತ್ಮಾ ಗಾಂಧಿ ಭಾರತದ ಸ್ವಾತಂತ್ರ್ಯದ ಹೋರಾಟಗಾರರಾಗಿ, ಅಹಿಂಸಾ ತತ್ವದ ಮೂಲಕ ಜಾಗತಿಕವಾಗಿ ಗುರುತಿಸಲ್ಪಟ್ಟವರು. ಭಾರತದ ಸ್ವಾತಂತ್ರ್ಯ ಹೋರಾಟ ಸಮಯದ ಪ್ರಭಾವಿ ನಾಯಕರಾಗಿ ಮನ್ನಣೆ ಪಡೆದಿದ್ದರು. ಅವರ ಹೆಸರಲ್ಲಿ ಇಂದಿಗೂ ಅನೇಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.