ಬಿಜೆಪಿಯಿಂದ ರಾಜಕೀಯಕ್ಕಾಗಿ ತುರ್ತು ಪರಿಸ್ಥಿತಿಯ ಉಲ್ಲೇಖ: ರಾಹುಲ್ ಗಾಂಧಿ

ಬಿಜೆಪಿಯಿಂದ ರಾಜಕೀಯಕ್ಕಾಗಿ ತುರ್ತು ಪರಿಸ್ಥಿತಿಯ ಉಲ್ಲೇಖ: ರಾಹುಲ್ ಗಾಂಧಿ

ನವದೆಹಲಿ, ಜೂ. 27: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಸದನದಲ್ಲಿ ಅಧ್ಯಕ್ಷರು ತುರ್ತು ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ‘ಬಿಜೆಪಿಯ ಈ ಕ್ರಮ ಸ್ಪಷ್ಟವಾಗಿ ರಾಜಕೀಯದಿಂದ ಕೂಡಿದ್ದಾಗಿದ್ದು ಅದನ್ನು ತಪ್ಪಿಸಬಹುದಿತ್ತು’ ಎಂದು ಹೇಳಿದ್ದಾರೆ.
ಸಂಸತ್ ಭವನದಲ್ಲಿ ನಾಯಕ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುದ್ದಿಗಾರರ ಜೊತೆ ಮಾತನಾಡಿ, “ಇದು ಸೌಜನ್ಯದ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಸ್ಪೀಕರ್ ಅವರು ತುರ್ತು ಪರಿಸ್ಥಿತಿಯನ್ನು ಸದನದಲ್ಲಿ ಪ್ರಸ್ತಾಪಿಸಿರುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಘೋಷಿಸಿದ ನಂತರ ಅವರು ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಸ್ಪೀಕರ್ ಅವರನ್ನು ಸೌಜನ್ಯಕ್ಕಾಗಿ ಭೇಟಿಯಾಗಿದ್ದರು ಎಂದು ವೇಣುಗೋಪಾಲ್ ತಿಳಿಸಿದರು. ಸದನದಲ್ಲಿ ಎಮರ್ಜೆನ್ಸಿ ಕುರಿತು ಚರ್ಚೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಸಂಸತ್ತಿನ ಕಾರ್ಯನಿರ್ವಹಣೆಯ ಬಗ್ಗೆ ಹಲವು ವಿಷಯಗಳನ್ನು ಚರ್ಚಿಸಿದ್ದೇವೆ. ಸದನದಲ್ಲಿ ಎಮರ್ಜೆನ್ಸಿ ಕುರಿತು ಚರ್ಚೆ ಆಗುವುದನ್ನು ಸ್ಪೀಕರ್ ತಪ್ಪಿಸಬಹುದಿತ್ತು. ಅದು ಸ್ಪಷ್ಟವಾಗಿ ರಾಜಕೀಯ ಉದ್ದೇಶದಿಂದ ಕೂಡಿದ್ದಾಗಿದ್ದು ಅದನ್ನು ತಪ್ಪಿಸಬಹುದಿತ್ತು” ಎಂದು ಹೇಳಿದರು.
ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಕೂಡಲೇ, ಓಂ ಬಿರ್ಲಾ ಅವರು ಬುಧವಾರ ತುರ್ತು ಪರಿಸ್ಥಿತಿಯನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಸಂವಿಧಾನದ ಮೇಲಿನ ದಾಳಿ ಎಂದು ಖಂಡಿಸುವ ನಿರ್ಣಯವನ್ನು ಓದುವ ಮೂಲಕ ವಿವಾದ ಎಬ್ಬಿಸಿದ್ದರು. ಇದು ಸಂಸತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಗೆ ಕಾರಣವಾಯಿತು.
1975ರ ಜೂನ್ 26ರಂದು ತುರ್ತು ಪರಿಸ್ಥಿತಿಯ ಕ್ರೂರ ವಾಸ್ತವಗಳಿಂದ ದೇಶವು ಎಚ್ಚೆತ್ತುಕೊಂಡಿತು ಎಂದು ಬಿರ್ಲಾ ನೆನಪಿಸಿಕೊಂಡರು. ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದಾಗ, ಮಾಧ್ಯಮದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿತು ಮತ್ತು ನ್ಯಾಯಾಂಗದ ಸ್ವಾಯತ್ತತೆಗೆ ಕಡಿವಾಣ ಹಾಕಿತು. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ ಗಾಂಧಿಯವರು ಸ್ಪೀಕರ್ ಅವರನ್ನು ಭೇಟಿಯಾದ ಮೊದಲ ಸಭೆ ಇದಾಗಿದೆ. ಅವರ ಜೊತೆಗೆ ಎಸ್‌ಪಿಯ ಧರ್ಮೇಂದ್ರ ಯಾದವ್, ಡಿಎಂಕೆಯ ಕನಿಮೋಳಿ, ಶಿವಸೇನೆಯ (ಎಸ್‌ಪಿ) ಸುಪ್ರಿಯಾ ಸುಳೆ ಮತ್ತು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಇನ್ನೂ ಕೆಲವರು ಇದ್ದರು.

Previous Post
ತಾಂತ್ರಿಕ ಸಮಸ್ಯೆ: 2 ವಾರಗಳಿಂದ ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್ ಎಂಡ್ ಟೀಂ
Next Post
ಬಜೆಟ್‌ನಲ್ಲಿ ಐತಿಹಾಸಿಕ ನಿರ್ಧಾರಗಳ ಘೋಷಣೆ: ರಾಷ್ಟ್ರಪತಿ

Recent News