ಕಾನೂನು ತಂಡದೊಂದಿಗೆ ಚರ್ಚಿಸಲು ಹೆಚ್ಚುವರಿ ಸಮಯ ಕೇಳಿದ ಅರವಿಂದ್ ಕೇಜ್ರಿವಾಲ್
ನವದೆಹಲಿ : ತಮ್ಮ ಕಾನೂನು ತಂಡದೊಂದಿಗೆ ಹೆಚ್ಚುವರಿ ಸಭೆಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸೋಮವಾರ ತಿಹಾರ್ ಜೈಲು ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಕೇಜ್ರಿವಾಲ್ ಅವರು ದೇಶಾದ್ಯಂತ 35 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಮತ್ತು ಕಾನೂನು ಕಾರ್ಯತಂತ್ರವನ್ನು ಸಿದ್ಧಪಡಿಸಲು ತಮ್ಮ ತಂಡದೊಂದಿಗೆ ಸಭೆಗಳ ಅಗತ್ಯವಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದ ಮಂಡಿಸಿದ ನಂತರ ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರು ತಿಹಾರ್ ಜೈಲು ಮತ್ತು ಇಡಿಯಿಂದ ಪ್ರತಿಕ್ರಿಯೆಯನ್ನು ಕೋರಿದರು, ಜುಲೈ 15 ರಂದು ಮುಂದಿನ ವಿಚಾರಣೆ ಮುಂದೂಡಿದರು.
ಕೇಜ್ರಿವಾಲ್ ಅವರ ಕಾನೂನು ತಂಡದೊಂದಿಗೆ ಒಂದು ವಾರದಲ್ಲಿ ಎರಡು ಸಭೆಗಳನ್ನು ಅನುಮತಿಸಲಾಗಿದೆ.
ಕೇಜ್ರಿವಾಲ್ ಅವರು ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವುದರಿಂದ ತಮ್ಮ ಕಾನೂನು ತಂಡದೊಂದಿಗೆ ಇನ್ನೆರಡು ಸಭೆಗಳನ್ನು ನಡೆಸಲು ಅವಕಾಶ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ವಿಶೇಷ ನ್ಯಾಯಾಧೀಶೆ (ಪಿಸಿ ಕಾಯಿದೆ) ಕಾವೇರಿ ಬವೇಜಾ ಅವರು ಮನವಿಯನ್ನು ತಿರಸ್ಕರಿಸಿದ್ದರು.