ಜೂನ್ 25 ‘ಸಂವಿಧಾನ್ ಹತ್ಯಾ ದಿವಸ್’ ಹೆಸರಿನಲ್ಲಿ ಆಚರಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ
ನವದೆಹಲಿ : 1975ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ ದಿನವಾದ ಜೂನ್ 25ನ್ನು ಇನ್ನು ಮುಂದೆ ‘ಸಂವಿಧಾನ್ ಹತ್ಯಾ ದಿವಸ್’ (ಸಂವಿಧಾನ ಹತ್ಯೆ ದಿನ) ಎಂದು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದ್ದಾರೆ. 1975 ರ ತುರ್ತು ಪರಿಸ್ಥಿತಿಯ ಅಮಾನವೀಯ ನೋವುಗಳನ್ನು ಸಹಿಸಿಕೊಂಡವರೆಲ್ಲರ ಬೃಹತ್ ಕೊಡುಗೆಗಳನ್ನು ಈ ದಿನ ಸ್ಮರಿಸುತ್ತದೆ ಎಂದು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಅಮಿತ್ ಶಾ ತಿಳಿಸಿದ್ದಾರೆ.
ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ, ಸರ್ವಾಧಿಕಾರಿ ಮನಸ್ಥಿತಿಯ ನಿರ್ಲಜ್ಜ ಪ್ರದರ್ಶನದಲ್ಲಿ, ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದರು, ಲಕ್ಷಾಂತರ ಜನರನ್ನು ತಮ್ಮ ತಪ್ಪಿಲ್ಲದೆ ಕಂಬಿಗಳ ಹಿಂದೆ ಹೋಗುವಂತಾಯಿತು. ಮಾಧ್ಯಮಗಳ ಧ್ವನಿಯನ್ನು ಸಮನಗೊಳಿಸಲಾಯಿತು. ಈ ಹಿನ್ನಲೆ ಭಾರತ ಸರ್ಕಾರವು ಪ್ರತಿ ವರ್ಷ ಜೂನ್ 25 ಅನ್ನು ‘ಸಂವಿಧಾನ್ ಹತ್ಯಾ ದಿವಸ್’ ಎಂದು ಆಚರಿಸಲು ನಿರ್ಧರಿಸಿದೆ ಎಂದು ಅಮಿತ್ ಶಾ ವಿವರಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ತುರ್ತು ಪರಿಸ್ಥಿತಿ ಹೇರಿದ 49ನೇ ವರ್ಷಾಚರಣೆ ಮಾಡುತ್ತಿದ್ದು ಇದರ ಭಾಗವಾಗಿ ಕಾಂಗ್ರೆಸ್ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿದೆ. ಬಿಜೆಪಿಯು ಸಂವಿಧಾನವನ್ನು ಬುಡಮೇಲು ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಅರೋಪದ ನಡುವೆ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.