ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ, ಜನಜೀವನ ಅಸ್ತವ್ಯಸ್ತ
ಗುವಾಹಟಿ : ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳು, ಅಸ್ಸಾಂ ಮತ್ತು ಮೇಘಾಲಯದ ದಕ್ಷಿಣ ಭಾಗಗಳಲ್ಲಿ ಕಡಿಮೆ ಮತ್ತು ಮಧ್ಯಮ ಪ್ರವಾಹದ ಅಪಾಯವಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಈ ನಡುವೆ ಅಸ್ಸಾಂನ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಪ್ರವಾಹದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. 23 ಜಿಲ್ಲೆಗಳಲ್ಲಿ 12.33 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಈ ವರ್ಷ ಪ್ರವಾಹ, ಭೂಕುಸಿತ, ಬಿರುಗಾಳಿ ಮತ್ತು ಸಿಡಿಲುಗಳಿಂದ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 106 ಕ್ಕೆ ಏರಿಕೆಯಾಗಿದೆ.
ಅಸ್ಸಾಂನ ಧುಬ್ರಿ ಜಿಲ್ಲೆ ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿದ್ದು 3.18 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಕ್ಯಾಚಾರ್ನಲ್ಲಿ ಸುಮಾರು 1.5 ಲಕ್ಷ ಜನರು ಮತ್ತು ಗೋಲಾಘಾಟ್ನಲ್ಲಿ 95,000 ಕ್ಕೂ ಹೆಚ್ಚು ಜನರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯದ ಹಲವೆಡೆ ಪ್ರವಾಹದ ನೀರು ಇಳಿಮುಖವಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆ ನಿಂತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರವು 18 ಜಿಲ್ಲೆಗಳಲ್ಲಿ 316 ಪರಿಹಾರ ಶಿಬಿರಗಳನ್ನು ಮತ್ತು ಪರಿಹಾರ ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ, ಪ್ರಸ್ತುತ 2,95,651 ನಿರಾಶ್ರಿತ ಜನರನ್ನು ನೋಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರಿಗೆ ಕಳೆದ 24 ಗಂಟೆಗಳಲ್ಲಿ 3,621.01 ಕ್ವಿಂಟಲ್ ಅಕ್ಕಿ, 666.3 ಕ್ವಿಂಟಲ್ ಬೇಳೆಕಾಳು, 6,266.61 ಕ್ವಿಂಟಲ್ ಉಪ್ಪು ಮತ್ತು 11,446.82 ಲೀಟರ್ ಸಾಸಿವೆ ಎಣ್ಣೆಯನ್ನು ವಿತರಿಸಿದೆ.
ಪ್ರಸ್ತುತ ಅಸ್ಸಾಂನಲ್ಲಿ 2,406 ಗ್ರಾಮಗಳು ಮುಳುಗಡೆಯಾಗಿದ್ದು, 32,924.32 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರವಾಹದ ನೀರಿನಿಂದ ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ನಿಮತಿಘಾಟ್, ತೇಜ್ಪುರ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳಾದ ಚೆನಿಮರಿಯಲ್ಲಿ ಬುರ್ಹಿಡಿಹಿಂಗ್ ಮತ್ತು ನಂಗಲ್ಮುರಘಾಟ್ನ ದಿಸಾಂಗ್ ಪ್ರದೇಶದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.