ಅಗಸ್ಟ್ ಪಾಲಿನ ನೀರಿಗೆ ತಮಿಳನಾಡು ಬೇಡಿಕೆ
ನವದೆಹಲಿ : ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ತಮಿಳುನಾಡಿಗೆ ಸಮರ್ಪಕ ನೀರು ಹರಿದು ಹೋಗುತ್ತಿರುವ ಹಿನ್ನಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಯಾವುದೇ ಆದೇಶ ನೀಡದೆ ಸಭೆಯನ್ನು ಮುಂದೂಡಿದೆ.
ಬುಧವಾರ ದೆಹಲಿಯಲ್ಲಿ ಸಭೆ ನಡೆಸಿದ ಪ್ರಾಧಿಕಾರ ಎರಡು ರಾಜ್ಯಗಳಿಂದ ಮಾಹಿತಿ ಕಲೆ ಹಾಕಿತು. ಸುಪ್ರೀಂಕೋರ್ಟ್ ಆದೇಶದಂತೆ ಜುಲೈ ಮತ್ತು ಆಗಸ್ಟ್ನಲ್ಲಿ ನೀರು ಹರಿಸಬೇಕು, ಜುಲೈ ತಿಂಗಳ ನೀರಿನ ಪಾಲು ಸಂತೃಪ್ತಿಯಾಗಿದೆ, ಆಗಸ್ಟ್ ತಿಂಗಳ 45 ಟಿಎಂಸಿ ನೀರು ಹರಿಸಲು ತಮಿಳುನಾಡು ಒತ್ತಾಯಿಸಿತು.
ಜೂನ್ 01 ರಿಂದ ಜುಲೈ 22 ವರೆಗೂ ಕರ್ನಾಟಕದ ನಾಲ್ಕು ಜಲಾಶಯಗಳ ಒಳಹರಿವು 118.245 ಟಿಎಂಸಿಯಷ್ಟಿದೆ. ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ (1989-90 ರಿಂದ 2018-19) ಒಳಹರಿವು 98.679 ಟಿಎಂಸಿ ಇದೆ. CWRC ತನ್ನ 99 ನೇ ಸಭೆಯಲ್ಲಿ ಬಿಳಿಗುಂಡ್ಲುವಿನಲ್ಲಿ ಕರ್ನಾಟಕವು ದಿನಕ್ಕೆ 1.00 ಟಿಎಂಸಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ಧರಿಸಿತು ಅಂತಯೇ ನೀರು ಹರಿಸಿದೆ.
ಬಿಳಿಗುಂಡ್ಲುವಿನಲ್ಲಿ ಖಾತ್ರಿಪಡಿಸಬೇಕಾದ ಹರಿವನ್ನು ನಿರ್ಧರಿಸುವಾಗ ತಮಿಳುನಾಡಿನ ಮೂರು ಜಲಾಶಯಗಳಲ್ಲಿನ ಕ್ಯಾರಿಓವರ್ ಶೇಖರಣೆ ಮತ್ತು ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲವಿಜ್ಞಾನದ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಹೇಳಿತು.
ಸದ್ಯ ನೀರಿಯ ಹರಿವು ಸುಗಮವಾಗಿರುವ ಹಿನ್ನಲೆ ಯಾವುದೇ ಆದೇಶ ನೀಡುವುದಿಲ್ಲ, ಸುಪ್ರೀಂಕೋರ್ಟ್ ಆದೇಶ ಅನ್ವಯ ನೀರು ಬಿಡಿ. ಜುಲೈ 30 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ನೀಡಬೇಕಾದ ನೀರಿನ ಪ್ರಮಾಣದ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುವುದು ಎಂದು CWMA ಹೇಳಿದೆ.