ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ
ನವದೆಹಲಿ : ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಇಲ್ಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಧರಣಿಯಲ್ಲಿ ರಾಜ್ಯದ ಹಲವು ಸಂಸದರು ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನಾ ಸತ್ಯಾಗ್ರಹದಲ್ಲಿ ರಾಯಚೂರು, ಕೊಪ್ಪಳ ಕಲ್ಬುರ್ಗಿ ಬೀದರ್ ಜಿಲ್ಲೆಗಳಿಂದ ನೂರಾರು ಹೋರಾಟಗಾರರು ಮತ್ತು ಸಂಸದರಾದ ಕುಮಾರನಾಯಕ್ ರಾಧಾಕೃಷ್ಣ ದೊಡ್ಡಮನಿ ರಾಜಶೇಖರ್ ಹಿಟ್ನಾಳ್ ಮತ್ತು ದಾವಣಗೆರೆ ಸಂಸದೆ ಡಾ. ಪ್ರಭ ಮಲ್ಲಿಕಾರ್ಜುನ ಭಾಗವಹಿಸಿದ್ದರು
ಪ್ರಸ್ತಾವಿಕವಾಗಿ ಮಾತನಾಡಿದ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ, “ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕಳೆದ 818 ದಿನಗಳಿಂದ ಸುಧೀರ್ಘವಾಗಿ ಹೋರಾಟ ನಡೆಯುತ್ತಿದ್ದರು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ, ಮತ್ತೊಂದೆಡೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಶಿಫಾರಸ್ಸು ಪತ್ರಗಳನ್ನು ಬರೆದಿರುತ್ತಾರೆ, ಮುಖ್ಯಮಂತ್ರಿ ಅವರು ಖುದ್ದಾಗಿ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ತನ್ನ ನಿರ್ಲಕ್ಷ ಧೋರಣೆಯನ್ನು ಮುಂದುವರಿಸಿದೆ, ಹೀಗಾದರೆ ಪ್ರಾದೇಶಿಕ ಅಸಮತೋಲನೆ ನಿವಾರಣೆ ಆಗುವುದಾದರೂ ಹೇಗೆ? ಅದಕ್ಕಾಗಿ ರಾಯಚೂರಿನಲ್ಲಿ ಸುದೀರ್ಘವಾಗಿ ಹೋರಾಟ ನಡೆಯುತ್ತಿದ್ದರೂ ನಿರ್ಲಕ್ಷ್ಯ ತಾಳಿದೆ ,ಕೇಂದ್ರ ಸರಕಾರದ ಗಮನ ಸೆಳೆಯಲು ಎಚ್ಚರಿಸಲು ದೆಹಲಿಯ ಜಂತರ್ ಮಂತರ್ ನಲ್ಲಿ ಈ ಬೃಹತ್ ಪ್ರತಿಭಟನ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ, ಇನ್ನು ಮುಂದಾದರೂ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮತ್ತು ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಗೌರವಿಸಿ ತಕ್ಷಣವೇ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಬಗ್ಗೆ ಘೋಷಣೆ ಮಾಡಬೇಕೆಂದು” ಆಗ್ರಹಿಸಿದರು.
ರಾಯಚೂರು ಸಂಸದ ಕುಮಾರ ನಾಯಕ್ ಮಾತನಾಡಿ, ಹಿಂದುಳಿದ ಮಹತ್ವಕಾಂಕ್ಷಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಇಷ್ಟೊಂದು ಸುಧೀರ್ಘವಾಗಿ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ,ಅದಕ್ಕಾಗಿಯೇ ಏಮ್ಸ್ ಹೋರಾಟ ಸಮಿತಿಯು ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ದೆಹಲಿಯ ಜಂತರ್ ಮಂತರ್ ನಲ್ಲಿ ಈ ಪ್ರತಿಭಟನಾ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ, ಏಮ್ಸ್ ಘೋಷಿಸುವವರೆಗೆ ಈ ಹೋರಾಟ ಮುಂದುವರಿಯುತ್ತದೆ, ನಾನು ಸಂಸದನಾಗಿ ಸಂಸತ್ತಿನಲ್ಲಿ ನಿರಂತರವಾಗಿ ಹೋರಾಡುತ್ತೇನೆ ಖಂಡಿತವಾಗಿಯೂ ನಮಗೆ ಏಮ್ಸ್ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ, ಎಂದು ಹೇಳಿದರು.
ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕು ಎನ್ನುವ ಬೇಡಿಕೆಗೆ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಕೇಂದ್ರ ಸರ್ಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವುದರ ಮೂಲಕ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ರವರು ಪ್ರತಿಭಟನಾ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡುತ್ತಾ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆದರೆ ಇಡೀ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಆರೋಗ್ಯದ ಕ್ಷೇತ್ರದಲ್ಲಿ ನಿರೀಕ್ಷಿತ ಬದಲಾವಣೆಗಳಾಗಿ ನಮ್ಮ ಹಿಂದುಳಿದ ಪ್ರದೇಶದ ಸಾಮಾನ್ಯ ಜನರಿಗೆ ಉತ್ಕೃಷ್ಟ ವೈದ್ಯಕೀಯ ಮತ್ತು ತಂತ್ರಜ್ಞಾನದ ಚಿಕಿತ್ಸೆ ಲಭ್ಯವಾಗಿ ತಮ್ಮ ಅಮೂಲ್ಯ ಆರೋಗ್ಯ ಮತ್ತು ಪ್ರಾಣವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ, ಕೇಂದ್ರ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸದೇ ತಕ್ಷಣವೇ ಏಮ್ಸ್ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ದಾವಣಗೆರೆ ಸಂಸದೆ ಡಾ .ಪ್ರಭಾ ಮಲ್ಲಿಕಾರ್ಜುನ್ ಪ್ರತಿಭಟನ ಸತ್ಯಾಗ್ರಹದಲ್ಲಿ ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡಿದರು. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲೇಬೇಕೆಂದು ಸುದೀರ್ಘ ಹೋರಾಟ ನಡೆಯುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಆರೋಗ್ಯ ಸಚಿವರಿಗೆ ಕೇಂದ್ರ ಹಣಕಾಸು ಸಚಿವರಿಗೆ ಮತ್ತು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ, ಆದರೆ ಇದುವರೆಗೂ ಕೇಂದ್ರ ಸರ್ಕಾರ ಸುದೀರ್ಘವಾಗಿ ನಡೆಯುತ್ತಿರುವ ಹೋರಾಟಕ್ಕಾಗಲಿ ಮುಖ್ಯಮಂತ್ರಿ ಅವರ ಶಿಫಾರಸ್ಸು ಪತ್ರಗಳಿಗಾಗಲಿ ಮನ್ನಣೆ ನೀಡಿ ಏಮ್ಸ್ ಮಂಜೂರು ಮಾಡಲು ಹಿಂದೇಟು ಹಾಕುತ್ತಿದೆ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು, ಹಿಂದುಳಿದ ರೋಗಪೀಡಿತ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದು ಅತ್ಯಂತ ಸೂಕ್ತವಾಗಿದೆ ಇದರ ಬಗ್ಗೆ ನಾನು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದೇನೆ, ಮುಂದೆಯೂ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಘೋಷಿಸಿದರು.
ಭಾರತೀಯ ಜನತಾ ಪಕ್ಷದ ಮುಖಂಡ ತ್ರಿವಿಕ್ರಮ ಜೋಶಿ ಪ್ರತಿಭಟನ ಸತ್ಯಾಗ್ರಹದಲ್ಲಿ ಭಾಗವಹಿಸಿ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಾ, ಕೇಂದ್ರ ಸರ್ಕಾರ ಇನ್ನೂ ವಿಳಂಬ ಮಾಡದೆ ಕೂಡಲೇ ಏಮ್ಸ್ ಮಂಜೂರು ಮಾಡಿ ಘೋಷಿಸಬೇಕೆಂದು ಹೇಳಿದರು.
ಅಶೋಕ್ ಕುಮಾರ್ ಜೈನ್ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸತ್ಯಾಗ್ರಹಕ್ಕೆ ಆಗಮಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳ ಹೋರಾಟಗಾರರನ್ನು ಸಂಸದರನ್ನು ಸ್ವಾಗತಿಸಿದರು. ಪಾರ್ಲಿಮೆಂಟ್ ಸೆಕ್ಟರಿಗೆ ಸಂಬಂಧಿಸಿದ ಅಧಿಕಾರಿಯ ಮುಖಾಂತರ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.