ಅಬಕಾರಿ ನೀತಿ ಪ್ರಕರಣ: ಇಡಿ ಚಾರ್ಜ್ಶೀಟ್ನಲ್ಲಿ ಕೇಜ್ರಿವಾಲ್, ಎಎಪಿ ಆರೋಪಿ
ನವದೆಹಲಿ, ಮೇ 17: ಈಗ ರದ್ದುಗೊಳಿಸಿರುವ ದೆಹಲಿ ಮದ್ಯದ ಅಬಕಾರಿ ನೀತಿ 2021-22ಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಹೊಸ ಪೂರಕ ಆರೋಪಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಿದೆ. ಕೇಂದ್ರ ತನಿಖಾ ಸಂಸ್ಥೆಯು ಆಮ್ ಆದ್ಮಿ ಪಕ್ಷವನ್ನೂ (ಎಎಪಿ) ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಅಪರಾಧದ ಆದಾಯಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಮತ್ತು ಹವಾಲಾ ಆಪರೇಟರ್ಗಳ ನಡುವೆ ಚಾಟ್ಗಳನ್ನು ಪತ್ತೆಹಚ್ಚಲಾಗಿದೆ ಎಂದು ಇಡಿ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಕೇಜ್ರಿವಾಲ್ ತನ್ನ ಡಿವೈಸ್ ಗಳ ಪಾಸ್ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ನಂತರ ಹವಾಲಾ ಆಪರೇಟರ್ಗಳ ಸಾಧನಗಳಿಂದ ಚಾಟ್ಗಳನ್ನು ಮರುಪಡೆಯಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದು ಪ್ರಕರಣದಲ್ಲಿ ದಾಖಲಾಗಿರುವ ಎಂಟನೇ ಪ್ರಾಸಿಕ್ಯೂಷನ್ ದೂರು ಇದಾಗಿದೆ. ಮೇ 10 ರಂದು ಇಡಿ ಏಳನೇ ಪ್ರಾಸಿಕ್ಯೂಷನ್ ದೂರನ್ನು ದಾಖಲಿಸಿದ್ದು, ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ ಕವಿತಾ ಮತ್ತು ಇತರ ನಾಲ್ವರನ್ನು ಆರೋಪಿಗಳೆಂದು ಹೆಸರಿಸಿತ್ತು. ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದ್ದು, ನಡೆಯುತ್ತಿರುವ ಲೋಕಸಭೆ ಚುನಾವಣೆಯ ಸಮಯದಲ್ಲಿ ಎಎಪಿ ಪರ ಪ್ರಚಾರ ಮಾಡಲು ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕವಿತಾ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾರ್ಚ್ 15 ರಂದು ಹೈದರಾಬಾದ್ನಿಂದ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ 2022 ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ದಾಖಲಿಸಿದ ಪ್ರಕರಣದಿಂದ ಇಡಿ ಮನಿ ಲಾಂಡರಿಂಗ್ ತನಿಖೆ ನಡೆಸುತ್ತಿದೆ. ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ 2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಲೋಪದೋಷಗಳನ್ನು ಸೃಷ್ಟಿಸಲು ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರರು ಸೇರಿದಂತೆ ಎಎಪಿ ನಾಯಕರು ಕ್ರಿಮಿನಲ್ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದಕ್ಷಿಣ ಭಾರತದ ಕೆಲವು ವ್ಯಕ್ತಿಗಳು/ಗುಂಪು ಈ ಪ್ರಕ್ರಿಯೆಯಲ್ಲಿ ಲಾಭ ಪಡೆದಿದ್ದಾರೆ. ಅವರ ಲಾಭದ ಸ್ವಲ್ಪ ಮೊತ್ತವನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡಲಾಯಿತು, ಅದು ಗೋವಾ ವಿಧಾನಸಭಾ ಚುನಾವಣೆಗೆ ಪ್ರಚಾರಕ್ಕಾಗಿ ಬಳಸಿತು ಎಂದು ಸಿಬಿಐ ಮತ್ತು ಇಡಿ ಹೇಳಿದೆ. ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏತನ್ಮಧ್ಯೆ, ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ಇಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.