ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ; ಹೆಚ್.ಡಿ.ಕುಮಾರಸ್ವಾಮಿ ಕಿಡಿ

ರಾಮನಗರ ಹೆಸರು ತೆಗೆದವರು ಸರ್ವನಾಶ ಆಗುತ್ತಾರೆ; ಹೆಚ್.ಡಿ.ಕುಮಾರಸ್ವಾಮಿ ಕಿಡಿ

ನವದೆಹಲಿ: ರಾಮನಗರ ಜಿಲ್ಲೆಗೆ ರಾಮನ ಹೆಸರು ತೆಗೆಯಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ತಮ್ಮ ಸ್ವಾರ್ಥಕ್ಕಾಗಿ ಹೆಸರು ಬದಲಾವಣೆ ಮಾಡಿದರೆ, ಆ ಕೃತ್ಯ ಎಸಗಿದವರು ಸರ್ವನಾಶ ಆಗುತ್ತಾರೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಎಂದು ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕಟುವಾಗಿ ಟೀಕಿಸಿದರು.

ಯಾವುದೇ ಕಾರಣಕ್ಕೂ ರಾಮನಗರದಿಂದ ರಾಮನ ಹೆಸರನ್ನು ಬೇರ್ಪಡಿಸಲು ಆಗಲ್ಲ. ಈ ಭೂಮಿ ಇರುವ ತನಕ ರಾಮನಗರ ಹೆಸರು ತೆಗೆಯಲು ಸಾಧ್ಯ ಆಗುವುದಿಲ್ಲ. ಜಿಲ್ಲೆ ರಚನೆ ಮಾಡಿ ರಾಮನಗರ ಎಂದು ಹೆಸರಿಡುವಾಗ, ವಿಧಾನಸಭೆ ಕ್ಷೇತ್ರಕ್ಕೆ ರಾಮನಗರ ಎಂದು ಹೆಸರು ಇಡುವಾಗ ಯಾವುದೇ ಮಾತು ಆಡಲೇ ಇಲ್ಲ. ತಕರಾರು ಮಾಡಲಿಲ್ಲ. ಈಗ ಸ್ವಾರ್ಥಕ್ಕಾಗಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.

ಈ ಸರಕಾರ ಮೊದಲು ಕಾನೂನು ವ್ಯವಸ್ಥೆ ಸರಿ ಮಾಡಲಿ. ಹೆಸರು ಬದಲಾವಣೆ ಮಾಡಲು ಹೊರಟವರ ಪಕ್ಷದ ಎಮ್ ಎಲ್ ಸಿ ಇರುವ ಕಡೆ ದಲಿತನ ಕೈ ಕತ್ತರಿಸಿದ್ದಾರೆ. ರಾಮನಗರ ಎಷ್ಟು ಅಭಿವೃದ್ಧಿ ಆಗಿದೆ ಅನ್ನುವುದನ್ನು ನೋಡಲಿ. ಹೆಸರು ಬದಲಾವಣೆಯಿಂದ ಭೂಮಿಗೆ ಬೆಲೆ ಬರಲ್ಲ. ಹೆಸರು ಬದಲಾಯಿಸಿದರೆ ಅವರ ಪತನ ಶುರುವಾಯಿತು ಎಂದೇ ಲೆಕ್ಕ ಎಂದು ಕುಮಾರಸ್ವಾಮಿ ಅವರು ಹೇಳಿದರು.

2028 ಅಥವಾ ಅದರೊಳಗೆಯೇ ಆ ಜಿಲ್ಲೆಗೆ ರಾಮನಗರ ಹೆಸರು ಮತ್ತೆ ಬರುತ್ತದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ರಾಜ್ಯದ ಮುಂದಿನ ರಾಜಕೀಯ ಭವಿಷ್ಯವನ್ನು ಸೂಚ್ಯವಾಗಿ ನುಡಿದರು ಕುಮಾರಸ್ವಾಮಿ ಅವರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಸಂಸದ ಮಲ್ಲೇಶ್ ಬಾಬು ಅವರು ಸಚಿವರ ಜತೆಯಲ್ಲಿ ಇದ್ದರು

Previous Post
ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ವಿಜಯ್ ದಿವಸ್‌ ಆಚರಿಸಿದ ಪ್ರಧಾನಿ ಮೋದಿ
Next Post
ಮೂಡಾದಲ್ಲಿ ಕುಮಾರಸ್ವಾಮಿ ಅವರದ್ದೂ ಸೈಟಿದೆ ಸಿಎಂ ಸಿದ್ದರಾಮಯ್ಯಗೆ ಹೆಚ್‌ಡಿ ಕುಮಾರಸ್ವಾಮಿ

Recent News