ಅಯೋಧ್ಯೆಯಲ್ಲಿ ಈ ತಿಂಗಳ ೨೨ ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಗೆ ತಮಗೆ ಆಹ್ವಾನ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು,ಜ.7 :ಅಯೋಧ್ಯೆಯಲ್ಲಿ ಈ ತಿಂಗಳ ೨೨ ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಗೆ ತಮಗೆ ಆಹ್ವಾನ ನೀಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ತಮ್ಮನ್ನೂ ಸೇರಿದಂತೆ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿಲ್ಲ. ನಾನು ಶಿವಭಕ್ತ, ಎಲ್ಲ ದೇವರುಗಳು ನನ್ನ ಹೃದಯದಲ್ಲಿದೆ. ನಮ್ಮ ಅಕ್ಕಿಯನ್ನು ಮಂತ್ರಾಕ್ಷತೆಗೆ ಬಳಸಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಅಕ್ಕಿ ಬಳಸುತ್ತಿದ್ದಾರೆ ಎಂದು ಹೇಳಿದರು.
ಹರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆ ಆಗುತ್ತದೆ. ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆಯಾಗುತ್ತಿರುವುದು ಸಂತಸದ ವಿಚಾರ. ಆದರೆ, ತಮ್ಮ ಸ್ನೇಹಿತರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಆಹಾರ ಭದ್ರತಾಕಾಯ್ದೆ ತಂದಿದ್ದು ಯಾರು? ಎಂಬುದನ್ನೇ ಮರೆತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಡಾ. ಮನಮೋಹನ್ಸಿಂಗ್ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ೧೦ ವರ್ಷ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆಹಾರ ಭದ್ರತಾ ಕಾಯ್ದೆ ತಂದಾಗ ಮೊದಲು ಅನ್ನಭಾಗ್ಯ ಯೋಜನೆ ಪ್ರಾರಂಭಿಸಿದವರು ಸಿದ್ದರಾಮಯ್ಯರವರು, ಆದರೆ, ಈ ವಿಚಾರವನ್ನು ಬೊಮ್ಮಾಯಿ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.