ಆದಿವಾಸಿ ಸಮುದಾಯ ಅವಹೇಳನ ಮಾಡಿದ ಸುಧೀರ್ ಚೌಧರಿ

ಆದಿವಾಸಿ ಸಮುದಾಯ ಅವಹೇಳನ ಮಾಡಿದ ಸುಧೀರ್ ಚೌಧರಿ

ರಾಂಚಿ, ಫೆ. 3: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ನಂತರ ಆದಿವಾಸಿಗಳ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ಟಿವಿ ನಿರೂಪಕ ಸುಧೀರ್ ಚೌಧರಿ ನೀಡಿದ್ದು, ಅವರ ವಿರುದ್ಧ ಬುಡಕಟ್ಟು ಜನಾಂಗದ ಜನರು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲಿ ಸುಧೀರ್ ಚೌಧರಿ ತನ್ನ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.

ಜನವರಿ 31ರಂದು ಹೇಮಂತ್ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಭೂ ಹಗರಣ ಪ್ರಕರಣದಲ್ಲಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಸುದ್ದಿ ಬಗ್ಗೆ ತಮ್ಮ ಕಾರ್ಯಕ್ರಮ ‘ಬ್ಲ್ಯಾಕ್ ಎಂಡ್ ವೈಟ್’ನಲ್ಲಿ ಸುಧೀರ್ ಚೌಧರಿ, 20, 30, 40 ವರ್ಷಗಳ ಹಿಂದೆ ಕಾಡಿನಲ್ಲಿದ್ದ ಆದಿವಾಸಿಗಳಂತೆ ಸೊರೇನ್ ಇಂದು ರಾತ್ರಿ ಜೈಲಿನಲ್ಲಿರಬಹುದು ಎಂದು ವ್ಯಂಗ್ಯವಾಡಿದ್ದರು.

ಆರ್ಥಿಕವಾಗಿ ಉತ್ತಮವಾಗಿರುವ ಸಮುದಾಯದವರಿಗೆ ಮೀಸಲಾತಿ ನೀಡಬಾರದು ಎಂದು ಚೌಧರಿ ಹೇಳಿದ್ದು, ಈ ಕುಟುಂಬವು ಬಡ ಕುಟುಂಬ ಎಂದು ಹೇಳುವ ಹಕ್ಕಿದೆಯೇ? ಅವರು ಆದಿವಾಸಿಗಳಲ್ಲ, ಅವರು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು. ಈ ಬಗ್ಗೆ ರಾಂಚಿಯಲ್ಲಿ ಆದಿವಾಸಿ ಸೇನೆ ದೂರು ದಾಖಲಿಸಿದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಚೌಧರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸುಧೀರ್‌ ಚೌಧರಿ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ 1989ರ ಅಡಿಯಲ್ಲಿ ರಾಂಚಿ ಪೊಲೀಸ್ ಠಾಣೆಯಲ್ಲಿ ಚೌಧರಿ ವಿರುದ್ಧ ದೂರು ದಾಖಲಿಸಲಾಗಿದೆ. ಚೌದರಿಯ ಬಂಧನಕ್ಕೆ ವ್ಯಾಪಕವಾದ ಆಗ್ರಹ ಕೇಳಿ ಬರುತ್ತಿದೆ. #ArrestSudhirChaudhury ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚೌಧರಿ ಅವರು ತಮ್ಮ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಧಾರ್ಮಿಕ ದ್ವೇಷವನ್ನು ಹರಡಿದ್ದಕ್ಕಾಗಿ ಕೇರಳ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತನ್ನ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುಧೀರ್‌ ಚೌಧರಿ ತಮ್ಮ ಎಕ್ಸ್‌ ಖಾತೆಯಲ್ಲಿ ಕ್ಷಮೆ ಕೋರಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ನಾನು ಆದಿವಾಸಿಗಳನ್ನು ಅವಮಾನಿಸಿದ್ದೇನೆಂಬ ಆಧಾರರಹಿತ ಆರೋಪಗಳನ್ನು ನೋಡಿ ನನಗೆ ನೋವಾಗಿದೆ. ಹೇಮಂತ್ ಸೋರೆನ್ ಅವರನ್ನು ಟೀಕಿಸುವುದು ಎಂದರೆ ಅದು ಆದಿವಾಸಿಗಳನ್ನು ಟೀಕಿಸಿದ್ದು ಅಥವಾ ಅವಮಾನಿಸಿದ್ದು ಎಂದಲ್ಲ. ಶ್ರೀಮಂತ ನಾಯಕರು ಬುಡಕಟ್ಟು ಮತಗಳನ್ನು ಹೇಗೆ ದುರುಪಯೋಗ ಮಾಡುತ್ತಿದ್ದಾರೆ ಎಂಬುದರ ಮೇಲೆ ನನ್ನ ಕಾರ್ಯಕ್ರಮವು ಕೇಂದ್ರೀಕೃತವಾಗಿತ್ತು. ಕೆಲವರು ಹಂಚಿಕೊಳ್ಳುತ್ತಿರುವ ಕಿರು ವೀಡಿಯೊ ಕ್ಲಿಪ್ ನನ್ನ ಕಾರ್ಯಕ್ರಮದ ಬಗ್ಗೆ ತಪ್ಪು ಸಂದೇಶವನ್ನು ನೀಡಲು ಬಳಕೆಯಾಗುತ್ತಿದೆ. ನಾನು ಯಾವಾಗಲೂ ಬುಡಕಟ್ಟು ಜನಾಂಗದವರನ್ನು ಬೆಂಬಲಿಸುತ್ತೇನೆ ಮತ್ತು ಗೌರವಿಸುತ್ತೇನೆ ಮತ್ತು ಅವರು ಯಾವಾಗಲೂ ನನಗೆ ಮತ್ತು ನನ್ನ ಕಾರ್ಯಕ್ರಮಗಳಿಗೆ ಪ್ರೀತಿಯನ್ನು ತೋರಿಸಿದ್ದಾರೆ ಎಂದು ಬರೆದಿದ್ದಾರೆ.

ಎಕ್ಸ್‌ ಖಾತೆಯನ್ನು ಹೊಂದಿರುವ ಎಲ್ಲರಿಗೂ ನಾನು ಉತ್ತರಿಸಬೇಕಾಗಿಲ್ಲ. ಆದರೆ ನನ್ನ ಆದಿವಾಸಿ ಸಹೋದರ ಸಹೋದರಿಯರಿಗೆ ನನ್ನ ಬಗ್ಗೆ ವಿವರಿಸುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ನಾನು ಉದ್ದೇಶಪೂರ್ವಕವಲ್ಲದೇ ಅವರ ಭಾವನೆಗಳನ್ನು ನೋಯಿಸಿದ್ದರೆ, ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Previous Post
ಪಂಜಾಬ್ ಗವರ್ನರ್ ಹುದ್ದೆಗೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ
Next Post
ವಿಶ್ವಾಸಮತ ಗೆದ್ದ ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೆನ್

Recent News