ಕಲಬುರಗಿ – ಬೆಂಗಳೂರು ನಡುವೆ ಹೊಸ ರೈಲು ನಡೆಸಲು ಮನವಿ
ನವದೆಹಲಿ : ಕಲಬುರಗಿ – ಬೆಂಗಳೂರು ನಡುವೆ ಹೊಸ ರೈಲು ಸಂಚಾರಕ್ಕೆ ಅನುಮತಿ ನೀಡುವಂತೆ ಸಂಸತ್ ಸದಸ್ಯರಾದ ಡಾ.ಉಮೇಶ್ ಜಾದವ್ ರವರು ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ಶೂನ್ಯ ಅವಧಿ ವಿಷಯ ಪ್ರಸ್ತಾಪಿಸಿದ ಅವರು ಹೊಸ ರೈಲು ಸಾವಿರಾರು ನಾಗರಿಕರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಅತ್ಯಂತ ಮಹತ್ವದ ವಿಷಯ ಎಂದರು.
ಆರ್ಟಿಐ ಇಂದ ಪಡೆದ ಮಾಹಿತಿಯನ್ನು ಪ್ರಸ್ತಾಪಿಸಿ ಕಲ್ಬುರ್ಗಿಯಿಂದ ಬೆಂಗಳೂರು ಮದ್ಯ ದಿನಾಲು 2100 ಟಿಕೆಟ್, ಬೆಂಗಳೂರಿನಿಂದ ಕಲ್ಬುರ್ಗಿಗೆ ಸರಿಸುಮಾರು 3300 ಟಿಕೆಟ್ ಬುಕಿಂಗ್ ಆಗುತ್ತಿದೆ. ಇದರ ಜೊತೆ ನಿತ್ಯ ಕಲ್ಬುರ್ಗಿಯಿಂದ ಬೆಂಗಳೂರಿಗೆ ಸರಿ ಸುಮಾರು 60 ರಿಂದ 70 ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಓಡಾಡುತ್ತಿವೆ. ಇದೆಲ್ಲ ಸೇರಿ ಕಲ್ಬುರ್ಗಿಯಿಂದ ಬೆಂಗಳೂರಿಗೆ ಹೋಗುವವರ ಸಂಖ್ಯೆ ಸರಿ ಸುಮಾರು 10000 ಜನಕ್ಕಿಂತ ಹೆಚ್ಚಿದೆ.
ಬಸವ ಎಕ್ಸ್ಪ್ರೆಸ್ ಮತ್ತು ಸೋಲಾಪುರ-ಹಾಸನ ಎಕ್ಸ್ಪ್ರೆಸ್ನಂತಹ ರೈಲುಗಳ ಕೋಟಾಗಳನ್ನು ವ್ಯವಸ್ಥಿತವಾಗಿ ಕಡಿತಗೊಳಿಸಿರುವುದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಕಲಬುರಗಿಯ ಜನರು ಕಾದಿರಿಸಲಾದ ಟಿಕೆಟ್ ಗಳನ್ನು ಪಡೆಯಲು ಸೋಲಾಪುರ ಇಂದ ಟಿಕೆಟ್ ತೆಗೆದು ಕಲ್ಬುರ್ಗಿಯಲ್ಲಿ ಟ್ರೈನ್ ಹತ್ತುವ ಪರಿಸ್ಥಿತಿ ಎದುರಾಗುತ್ತಿದೆ. ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಕಲಬುರಗಿ-ಬೆಂಗಳೂರು ನಡುವೆ ಮೀಸಲಾದ ರೈಲಿನ ಕೊರತೆ ಎದ್ದು ಕಾಣುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಕಲಬುರಗಿಯ ಜನರು ಬೇರೆ ಕಡೆಯಿಂದ ಬರುವ ಕಲ್ಬುರ್ಗಿಯಿಂದ ಹಾದುಹೋಗುವ ರೈಲುಗಳ ಮೇಲೆ ಅವಲಂಬಿತರಾಗಿದ್ದಾರೆ.
ಕಲಬುರಗಿಯು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಧಾನ ಕಛೇರಿಯಾಗಿರುವುದರಿಂದ, ಉದ್ಯೋಗ, ಸಭೆಗಳು ಮತ್ತು ವ್ಯಾಪಾರದಂತಹ ವಿವಿಧ ಕಾರಣಗಳಿಗಾಗಿ ಗಣನೀಯ ಸಂಖ್ಯೆಯ ಜನರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಮೀಸಲಾದ ರೈಲು ಸೇವೆಯ ಅನುಪಸ್ಥಿತಿಯು ಸಾಮಾನ್ಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ ಆದರೆ ಪ್ರದೇಶದ ಒಟ್ಟಾರೆ ಬೆಳವಣಿಗೆ ಮತ್ತು ಸಂಪರ್ಕಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಬೆಂಗಳೂರು-ಕಲಬುರಗಿ-ಬೆಂಗಳೂರು ಹೊಸ ರೈಲು ಸೇವೆಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.