ಕೇಂದ್ರ ಸರ್ಕಾರ ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿ ಹಲವು ಮಹತ್ವದ ಯೋಜನೆಗಳನ್ನು ಪೂರ್ಣ

ಕೇಂದ್ರ ಸರ್ಕಾರ ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿ ಹಲವು ಮಹತ್ವದ ಯೋಜನೆಗಳನ್ನು ಪೂರ್ಣ

ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿ ಹಲವು ಮಹತ್ವದ ಯೋಜನೆಗಳನ್ನು ಪೂರ್ಣಗೊಳಿಸಿದೆ. ಜತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಶತಮಾನಗಳ ಕನಸು ಇದೀಗ ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.ಅವರು ನೂತನ ಸಂಸತ್‌ ಭವನದಲ್ಲಿ ಬಜೆಟ್‌ ಅಧಿವೇಶನದಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ನೂತನ ಸಂಸತ್‌ ಭವನ ಏಕ ಭಾರತ್‌ ಶ್ರೇಷ್ಠ ಭಾರತದ ಪ್ರತೀಕವಾಗಿದೆ ಎಂದು ಬಣ್ಣಿಸಿದರು.

ಭಾರತದ ಡಿಜಿಟಲ್‌ ಕ್ರಾಂತಿ ವಿದೇಶದವರೆಗೂ ಹಬ್ಬಿದೆ. ದೇಶದಲ್ಲಿನ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಿದೆ. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುವುದಾಗಿ ರಾಷ್ಟ್ರಪತಿ ಮುರ್ಮು ತಿಳಿಸಿದರು.

ಭಾರತ ಆರ್ಥಿಕ ಪ್ರಗತಿಯಲ್ಲಿ ಮುನ್ನುಗ್ಗುತ್ತಿದ್ದು, ವಿಶ್ವದ ಆರ್ಥಿಕತೆಯಲ್ಲಿ ಭಾರತ ದಾಪುಗಾಲಿಟ್ಟಿದೆ. ದೇಶಾದ್ಯಂತ ಬ್ರಾಡ್‌ ಬ್ಯಾಂಡ್‌ ಉಪಯೋಗಿಸುವ ಜನರ ಸಂಖ್ಯೆ ಶೇ.14ರಷ್ಟು ಹೆಚ್ಚಳವಾಗಿದೆ. ಭಾರತದಾದ್ಯಂತ 39 ನೂತನ ವಂದೇ ಭಾರತ್‌ ಮಾರ್ಗಗಳನ್ನು ಅನಾವರಣಗೊಳಿಸಲಾಗಿದೆ ಎಂದು ಮುರ್ಮು ಹೇಳಿದರು.

ದೇಶಾದ್ಯಂತ ಶೇ.80ರಷ್ಟು ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ. ಮೇಕ್‌ ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್‌ ನಮ್ಮನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ರಕ್ಷಣಾ ವಲಯದ ಉತ್ಪಾದನೆ ಕೂಡಾ ಒಂದು ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ರಾಷ್ಟ್ರಪತಿ ಹೇಳಿದರು.ದೇಶದ ತೆರಿಗೆಯ ಬಹುಪಾಲನ್ನು ಯುವಕರ, ಮಹಿಳೆಯರ, ರೈತರ ಹಾಗೂ ಬಡವರ ಸಬಲೀಕರಣಕ್ಕೆ ಬಳಕೆ ಮಾಡಲಾಗುತ್ತಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ.ದೇಶಾದ್ಯಂತ ನಕ್ಸಲ್‌ ಸಂಬಂಧಿತ ಹಿಂಸಾಚಾರ ಗಣನೀಯವಾಗಿ ಇಳಿಕೆಯಾಗಿದೆ. ರೈತರ ಆದಾಯ ಕೂಡಾ ದ್ವಿಗುಣವಾಗಿದೆ. ದೇಶದ ಗಡಿಭಾಗದಲ್ಲಿ ಸರ್ಕಾರ ಆಧುನಿಕ ಮೂಲಭೂತ ಸೌಕರ್ಯವನ್ನು ಒದಗಿಸಿದೆ. ಭಯೋತ್ಪಾದನೆ ವಿರುದ್ಧ ನಮ್ಮ ಸೇನಾಪಡೆಗಳು ತಕ್ಕ ಉತ್ತರ ನೀಡಿವೆ ಎಂದು ರಾಷ್ಟ್ರಪತಿ ಮುರ್ಮು ಶ್ಲಾಘಿಸಿದರು.

 

Previous Post
ಕೇಂದ್ರ ಬಜೆಟ್ ಬಗ್ಗೆ ಜನರಿಗೆ ನಿರೀಕ್ಷೆಯೇ ಇಲ್ಲ : ಈಶ್ವರ ಖಂಡ್ರೆ
Next Post
ಇನ್ಮುಂದೆ ಮೆಟ್ರೋದಲ್ಲಿ ಅಸಭ್ಯ ವರ್ತನೆ ತೋರಿದ್ರೆ ಮೊದಲಿಗಿಂತ 20ಪಟ್ಟು ದಂಡ ಬೀಳುತ್ತೆ ಹುಷಾರ್‌!

Recent News