ಕ್ಯಾನ್ಸರ್ನಿಂದ ಬಳಲುತ್ತಿದ್ದ 7 ವರ್ಷದ ಮಗುವನ್ನು ಗಂಗಾ ನದಿಯಲ್ಲಿ ಅದ್ದಿದ ಪೋಷಕರು: ಉಸಿರು ಚೆಲ್ಲಿದ ಕೂಸು
ಹರಿದ್ವಾರ ಜನವರಿ 25: ಬ್ಲೆಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಏಳು ವರ್ಷದ ಮಗುವನ್ನು ಕುಟುಬವೊಂದು ಉಳಿಸಿಕೊಳ್ಳಲು ಹೋಗಿ ಅನಾಹುತವೇ ನಡೆದು ಹೋಗಿದೆ. ಹರಿದ್ವಾರದ ಹರ್ ಕಿ ಪೌರಿಯಲ್ಲಿ ಗಂಗಾನದಿಯಲ್ಲಿ 15 ನಿಮಿಷಗಳ ಕಾಲ ಮುಳುಗಿಸಿದ್ದರಿಂದ ಮಗು ಸಾವನ್ನಪ್ಪಿದೆ. ಗಂಗಾ ನದಿಯಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಗುವಿಗೆ ಸ್ನಾನ ಮಾಡಿಸುವುದರಿಂದ ಆರೋಗ್ಯ ಸಮಸ್ಯೆ ದೂರವಾಗಿ ಪವಾಡ ಸಂಭವಿಸಬಹುದು ಎಂದು ಯಾರೋ ಹೇಳಿದ ಮಾತನ್ನು ಕೇಳಿ ಕುಟುಂಬ ಕೊನೆಗೆ ಮಗುವನ್ನು ಕಳೆದುಕೊಂಡಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಕೂಡ ಇದೆ.
ಮಗುವಿನ ಹೆಸರನ್ನು ರವಿ ಸೈನಿ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಮಗುವಿನ ಪೋಷಕರು ಮತ್ತು ಮಹಿಳೆ ಸಂಬಂಧಿ ಜೊತೆಗಿದ್ದರು. ಈ ಜನರು ದೆಹಲಿಯ ಸೋನಿಯಾ ವಿಹಾರ್ ನಿವಾಸಿಗಳಾಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಗುವಿನ ಸಂಬಂಧಿ ಸುಧಾ ಮಗುವನ್ನು ತಣ್ಣೀರಿನಲ್ಲಿ ಸ್ನಾನ ಮಾಡಲು ನಿರಂತರವಾಗಿ ಮುಳುಗಿಸುತ್ತಿದ್ದಾರೆ. ಮಗುವಿನ ಪೋಷಕರು ಯಾವುದೋ ಮಂತ್ರವನ್ನು ಪಠಿಸುತ್ತಿದ್ದಾರೆ. ಈ ಘಟನೆ ನಡೆದಾಗ ಅಪಾರ ಸಂಖ್ಯೆಯ ಭಕ್ತರು ಅಲ್ಲಿದ್ದರು. ಅವರು ಈ ಕುಟುಂಬವನ್ನು ತಡೆಯಲು ಪ್ರಯತ್ನಿಸಿದರು. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಸುಧಾ ಹಾಗೂ ಮಗುವಿನ ತಂದೆ ರಾಜಕುಮಾರ್ ಮತ್ತು ತಾಯಿ ಶಾಂತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಮಗುವನ್ನು ದೆಹಲಿಯ ಏಮ್ಸ್ಗೆ ಕರೆದುಕೊಂಡು ಹೋಗಿದ್ದೆವು. ಆದರೆ ಕ್ಯಾನ್ಸರ್ ತೀವ್ರ ಹಂತ ತಲುಪಿದ್ದರಿಂದ ಮಗು ಬದುಕುಳಿಯುವ ಭರವಸೆ ಇಲ್ಲದ ಕಾರಣ ವೈದ್ಯರು ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು ಎಂದು ತಂದೆ ರಾಜ್ಕುಮಾರ್ ಪೊಲೀಸರು ವಿಚಾರಣೆ ವೇಳೆ ತಿಳಿಸಿದ್ದಾರೆ. ವೈದ್ಯರ ಈ ಹೇಳಿಕೆ ಬಳಿಕ ಕುಟುಂಬ ಪವಾಡದ ಭರವಸೆಯನ್ನಿಟ್ಟಿಕೊಂಡು ಹರಿದ್ವಾರಕ್ಕೆ ತಲುಪಿ ಮಗುವನ್ನು ನೀರಿನಲ್ಲಿ ಮುಳುಗಿಸಿದೆ.
ಸೋಮವಾರ ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಹರಿಯಾಣದ ಕುರುಕ್ಷೇತ್ರದ ಪ್ರತ್ಯಕ್ಷದರ್ಶಿಯೊಬ್ಬರು, ಅದನ್ನು ನೋಡಿ ನಾನು ಕಿರುಚಿದೆ. ಒಬ್ಬ ವ್ಯಕ್ತಿ ಮಹಿಳೆಯ ಕೈಯಿಂದ ಮಗುವನ್ನು ಬಲವಂತವಾಗಿ ಬಿಡಿಸಿದ. ನಾವು ಕೂಡ ಮಗುವನ್ನು ರಕ್ಷಿಸಲು ಪ್ರಯತ್ನಿಸಿದೆವು. ಆದರೆ ಅವನಲ್ಲಿ ಜೀವದ ಕುರುಹುಗಳು ಕಾಣಿಸಲಿಲ್ಲ. ಅಲ್ಲಿದ್ದ ಮತ್ತೊಬ್ಬ ಭಕ್ತ ಕುಟುಂಬದವರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸರು ಅಲ್ಲಿಗೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಾಲಕನ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿರುವುದು ಸಾವಿಗೆ ಕಾರಣವಲ್ಲ ಎಂದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಬಾಲಕ ನದಿಯಲ್ಲಿ ಮುಳುಗುವ ಮುನ್ನವೇ ಸಾವನ್ನಪ್ಪಿದ್ದನೇ ಅಥವಾ ಚಳಿಯಿಂದ ಸಾವನ್ನಪ್ಪಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.