ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ ಪಕ್ಷಕ್ಕೆ ಈ ಹೇಳಿಕೆಯೇ ಅವನತಿಯ ಅಡಿಗಲ್ಲು: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ ಪಕ್ಷಕ್ಕೆ ಈ ಹೇಳಿಕೆಯೇ ಅವನತಿಯ ಅಡಿಗಲ್ಲು: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಿಎಂ ಸಿದ್ದರಾಮಯ್ಯನವರ ಗೊರಕೆ ಚಿತ್ರ ತೋರಿಸುವೆ, ನಿದ್ದೆರಾಮಯ್ಯ ಎಂಬ ಹೆಸರು ಬ್ರ್ಯಾಂಡ್‌ ಆಗಿದೆ

ಹಿಂದಿನ ಯುಪಿಎ ಸರ್ಕಾರಕ್ಕಿಂತ ಮೋದಿ ಸರ್ಕಾರ ಶೇ.243 ರಷ್ಟು ಹೆಚ್ಚು ಪರಿಹಾರ ನೀಡಿದೆ

ಬೆಂಗಳೂರು, ಜನವರಿ 17, ಬುಧವಾರ ದೇವರನ್ನು ಆಟಿಕೆ ಎನ್ನುವ ಮೂಲಕ ಕಾಂಗ್ರೆಸ್‌ ಪಕ್ಷ ಬಾಲಿಶತನ ತೋರಿದೆ. ಮಾತಿನಲ್ಲಿ ಹಿಡಿತವಿಲ್ಲದೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದು ಕಾಂಗ್ರೆಸ್‌ನ ಅವನತಿಗೆ ಅಡಿಗಲ್ಲಾಗಲಿದೆ. ಇದು ಮಾರಣಾಂತಿಕ ಕಲ್ಲಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದರು.

ಸಚಿವ ಕೆ.ಎನ್‌.ರಾಜಣ್ಣ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರಿಗೆ ರಾಮ ಸೀತೆ ಎಲ್ಲರೂ ಟೂರಿಂಗ್‌ ಟಾಕೀಸ್‌ ಬೊಂಬೆಗಳಂತೆಯೇ ಕಾಣುತ್ತಾರೆ. ಹಿಂದೆ ಇವರೇ ರಾಮನನ್ನು ಕಾಲ್ಪನಿಕ ವ್ಯಕ್ತಿ, ಜನ್ಮ ಪ್ರಮಾಣ ಪತ್ರ ಇಲ್ಲ ಎಂದಿದ್ದರು. ಗುಜರಾತ್‌ನ ಸೋಮನಾಥ ದೇವಾಲಯ ಪುನರಜ್ಜೀವನಗೊಂಡಾಗ ಅದಕ್ಕೆ ಪ್ರಧಾನಿ ನೆಹರು ಹೋಗಲಿಲ್ಲ. ಮುಸ್ಲಿಮರನ್ನು ಓಟ್‌ ಬ್ಯಾಂಕ್‌ ಮಾಡಿಕೊಂಡು, ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಗುಣ ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ ಅವರೇ ಸುಪ್ರಿಂ ಕೋರ್ಟ್‌ ತೀರ್ಪಿಗೆ ಬೆಲೆ ಕೊಡುವುದಿಲ್ಲ ಎನ್ನುತ್ತಾರೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ನಿಲ್ದಾಣದ ಕಾರ್ಯಕ್ರಮದಲ್ಲಿ ಆರಾಮವಾಗಿ ಗೊರಕೆ ಹೊಡೆಯುತ್ತಿದ್ದರು. ಸಿದ್ದರಾಮಯ್ಯ ನಿದ್ರೆ ಮಾಡುವ ವ್ಯಂಗ್ಯಚಿತ್ರಗಳು ಹರಿಡಾಡುತ್ತಿವೆ. ಆದರೆ ಪ್ರಧಾನಿ ಎಲ್ಲೂ ನಿದ್ರೆ ಮಾಡುವುದಿಲ್ಲ. ಮುಖ್ಯಮಂತ್ರಿ ಬರ ಪ್ರದೇಶಗಳಿಗೆ ಹೋಗಿ ಕೆಲಸ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ತಾವು ನಿದ್ರೆ ಮಾಡುವ ಚಿತ್ರವನ್ನು ಫ್ರೇಮ್‌ ಮಾಡಿಕೊಂಡು ಮನೆ ಮುಂದೆ ಹಾಕಿಕೊಳ್ಳಲಿ. ಇವರ ಹೆಸರೇ ನಿದ್ದೆರಾಮಯ್ಯ ಎಂದು ಬ್ರ್ಯಾಂಡ್‌ ಆಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಮಣಿಸಬೇಕಿದೆ. ಕಳೆದ ಏಳು ತಿಂಗಳಲ್ಲಿ ಕೊಲೆ, ಸುಲಿಗೆ ಹೆಚ್ಚಿದ್ದು, ಅಪರಾಧಿಗಳಿಗೆ ಪ್ರೀತಿ ತೋರಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಅವರೇ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದವರನ್ನು ಬ್ರದರ್‌ ಎಂದು ಹೇಳಿಕೊಳ್ಳುತ್ತಾರೆ. ಕೆಜಿ ಹಳ್ಳಿ ಡಿಜೆ ಹಳ್ಳಿ ಪ್ರಕರಣ ವಾಪಸ್‌ನಂತಹ ಘಟನೆ ನಡೆಯುತ್ತಿದೆ. ಕಾಂಗ್ರೆಸ್‌ನ ಮೃದು ಧೋರಣೆಯಿಂದ ಅಪರಾಧಿಗಳು ಎದ್ದು ಕುಳಿತಿದ್ದಾರೆ. ಹಾನಗಲ್‌ನ ಅತ್ಯಾಚಾರ ಪ್ರಕರಣದಲ್ಲೂ ಕಠಿಣ ಕ್ರಮ ವಹಿಸಿಲ್ಲ. ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಪೂರ್ಣ ವಿಫಲವಾಗಿದೆ ಎಂದರು.

ಒಂದು ಕಡೆ ಡಿ.ಕೆ.ಶಿವಕುಮಾರ್‌, ಮತ್ತೊಂದು ಕಡೆ ಜಿ.ಪರಮೇಶ್ವರ, ಇನ್ನೊಂದೆಡೆ ಸತೀಶ್‌ ಜಾರಕಿಹೊಳಿಗೆ ಜೈ ಎನ್ನುವ ಗ್ಯಾಂಗ್‌ ಇದೆ. ಅಭಿವೃದ್ಧಿಯ ಕಾರ್ಯ ಇಲ್ಲದೆ ಜನರು ರೊಚ್ಚಿಗೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮಗ ಶಾಸಕರೂ ಅಲ್ಲ. ಅವರು ತಂದೆಯ ಬಗ್ಗೆ ಕುರುಡು ಪ್ರೇಮ ತೋರಿಸಬೇಕಿಲ್ಲ ಎಂದರು.

ಸರ್ಕಾರದ ಖಜಾನೆ ಖಾಲಿಯಾಗಿದ್ದು, ಎಲ್ಲ ಯೋಜನೆ ಮುಂದೂಡಲಾಗುತ್ತಿದೆ. ನೌಕರರ ವೇತನ ಹೆಚ್ಚಳ ಕೂಡ ಮಾಡಿಲ್ಲ. ಸರ್ಕಾರ ದಿವಾಳಿಯಾಗಿ ಜನರು ಇನ್ನಷ್ಟು ಕಷ್ಟ ಪಡಬೇಕಾಗುತ್ತದೆ. ಯುಪಿಎ ಸರ್ಕಾರವಿದ್ದಾಗ ಪರಿಹಾರ ಸಿಗಲು ಬಹಳ ತಡವಾಗಿದ್ದು, ಆಗ ಮಾತ್ರ ಕಾಂಗ್ರೆಸ್‌ ನಾಯಕರು ಸುಮ್ಮನಿದ್ದರು. ಈಗ ಕೇಂದ್ರದ ಮೇಲೆ ದೂರು ಹೇಳುತ್ತಿದ್ದಾರೆ. ಹಿಂದಿನ ಯುಪಿಎಗೆ ಹೋಲಿಸಿದರೆ ಮೋದಿ ಸರ್ಕಾರ ಶೇ.243 ರಷ್ಟು ಹೆಚ್ಚು ಪರಿಹಾರ ನೀಡಿದೆ ಎಂದರು.

ವರಿಷ್ಠರೊಂದಿಗೆ ಚರ್ಚೆ

ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಕುರಿತು ನೀಲಿನಕ್ಷೆ ತಯಾರಾಗಿದೆ. ಹಿರಿಯ ನಾಯಕರು ಇದಕ್ಕೆ ಅಗತ್ಯ ಕ್ರಮಗಳನ್ನು ವಹಿಸಿದ್ದಾರೆ. ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್‌, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದೇನೆ ಎಂದು ತಿಳಿಸಿದರು.

Previous Post
ಗಡಿ ಭಾಗದ 865 ಗ್ರಾಮಗಳಲ್ಲಿ ಆರೋಗ್ಯ ವಿಮೆ ಜಾರಿಗೆ ಮುಂದಾದ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ತಾಯ್ನಾಡಿಗಾಗಿ ಸಂಗೊಳ್ಳಿ ರಾಯಣ್ಣನ ನಡೆಸಿದ ಹೋರಾಟ ನಮಗೆಲ್ಲಾ ಮಾದರಿ: ಸಿ.ಎಂ.ಸಿದ್ದರಾಮಯ್ಯ

Recent News